ಗೋವಿಂದ ಪೈಗಳ ಕಾವ್ಯದ ಮರುನೋಟ - 8
ಭಂಗೀಭಣಿತಿ
ಎಷ್ಟೋ ಬಾರಿ ಮಹಾಕವಿಗಳು ತಮ್ಮ ಕಾವ್ಯದ ನಡುವೆ ಪ್ರೌಢವೂ ಸಾಭಿಪ್ರಾಯವೂ ಆದ ಹೇಳಿಕೆಗಳನ್ನು ಮಾಡುವುದುಂಟು. ಇವುಗಳೆಲ್ಲ ಕಟ್ಟಕಡೆಗೆ ರಸಧ್ವನಿಯಲ್ಲಿ ಪರ್ಯವಸಿಸುತ್ತವೆಂಬುದು ಸತ್ಯ. ಆದರೆ ರೂಪದ ಮಟ್ಟಿಗೆ ಇವನ್ನು ನಿರ್ದಿಷ್ಟವಾದ ಒಂದು ಸ್ಫುಟಾಲಂಕಾರದಲ್ಲಿ ಅಳವಡಿಸಲಾಗುವುದಿಲ್ಲ; ಲಕ್ಷಣೆ ಮತ್ತು ವ್ಯಂಜನೆಗಳಿಗೂ ನೇರವಾಗಿ ತಳುಕು ಹಾಕಲು ಅನುಕೂಲಿಸುವುದಿಲ್ಲ. ಇಂಥವನ್ನು ಕುಂತಕನ ಮಾತಿನಂತೆ ‘ಭಂಗೀಭಣಿತಿ’ ಎನ್ನಬಹುದು. ಕನ್ನಡದಲ್ಲಿ ಡಿ.ವಿ.ಜಿ., ಕುವೆಂಪು, ಪುತಿನ ಮೊದಲಾದವರಲ್ಲಿ ಇವನ್ನು ಹೇರಳವಾಗಿ ಕಾಣಬಹುದು. ಪೈಗಳೂ ಇವರ ಸಾಲಿಗೆ ಸೇರುತ್ತಾರೆ. ಅವರ ‘ಯಾರೆಂಬರು ಮುಗಿದುವೆಂದು ಬವರಂ?’ ಎಂಬ ಕವಿತೆಯಿಂದ ಕೆಲವು ಸಾಲುಗಳನ್ನು ಉದಾಹರಿಸಬಹುದು: