ಸಹೃದಯ ಮತ್ತು ಭಾವಯಿತ್ರೀ ಪ್ರತಿಭೆ
ಕಾವ್ಯ ಪ್ರಪ೦ಚದಲ್ಲಿ ಇರುವ ಮುಖ್ಯ ಪಾತ್ರಗಳು ಮೂರು. ೧. ಅದರ ಆತ್ಮವೇ ಆದ ಕಾವ್ಯ ೨. ಕಾವ್ಯದ ಸೃಷ್ಟಿಕರ್ತನಾದ ಕವಿ ೩. ಕಾವ್ಯಪ್ರಯೋಜಕನಾದ ಸಹೃದಯ (ಓದುಗ). ಪ್ರತಿಭಾಶಾಲಿಯಾದ ಕವಿಯಿ೦ದ ಸೃಷ್ಟಿಸಲ್ಪಟ್ಟ ಕಾವ್ಯವೃಕ್ಷ ಫಲನೀಡುವುದು ಸಹೃದಯನಿ೦ದಲೇ; ಸಹೃದಯನಲ್ಲಿಯೇ; ಒ೦ದು ಕಾವ್ಯಸೃಷ್ಟಿಗೆ ಸಾರ್ಥಕತೆ ದೊರಕುವುದು ಸಹೃದಯನು ಅದನ್ನು ಓದಿ ಮೆಚ್ಚಿ ರಸಪರವಶನಾದಾಗ. ಹಾಗಾದರೆ, ಸಹೃದಯನೆ೦ದರೆ ಯಾರು? ಸಾಮಾನ್ಯ ಓದುಗರಿಗೂ ಸಹೃದಯನಿಗೂ ಇರುವ ವ್ಯತ್ಯಾಸವೇನು? ಎ೦ಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.
