ಹೇಮಚಂದ್ರನ ‘ಕಾವ್ಯಾನುಶಾಸನ’ - 1
ಜ್ಞಾನಕ್ಕೆ ಯಾವುದೇ ಎಲ್ಲೆ ಇಲ್ಲ. ಅದರಲ್ಲಿ ಪ್ರತ್ಯೇಕ ವಿಭಾಗಗಳನ್ನು ಕಲ್ಪಿಸುವುದು ನಮ್ಮ ಅನುಕೂಲತೆಗಾಗಿ, ನಮ್ಮ ಇತಿ-ಮಿತಿಗಳಿಗೆ ಅನುಸಾರವಾಗಿ. ಲೋಕಸಾಮಾನ್ಯದ ಸ್ಥಿತಿ ಹೀಗಿದ್ದರೂ ಕೆಲವರು ಮಹನೀಯರು ಜ್ಞಾನವನ್ನು ಅಖಂಡವಾಗಿ ಗ್ರಹಿಸಿ ಅದರ ಅನೇಕ ಶಾಖೆಗಳಲ್ಲಿ ಪರಿಶ್ರಮಿಸಿ ಪರಿಣತಿಯನ್ನು ಪಡೆಯುತ್ತಾರೆ. ಭುವನದ ಭಾಗ್ಯ ಎನಿಸುವ ಈ ಬಗೆಯ ಹಲವರು ಪ್ರಾಜ್ಞರು ಪ್ರಾಚೀನ ಭಾರತದಲ್ಲಿ ಜನ್ಮ ತಳೆದಿದ್ದುದು ನಮ್ಮ ಹೆಮ್ಮೆ. ಆಚಾರ್ಯ ಹೇಮಚಂದ್ರ ಸೂರಿ ಈ ಸಾಲಿನಲ್ಲಿ ಮೊದಲಿಗೇ ಸಲ್ಲುವನು. ವಿದ್ಯಾಜಗತ್ತು ಈತನನ್ನು ‘ಕಲಿಕಾಲಸರ್ವಜ್ಞ’ ಎಂದು ಗೌರವಿಸಿದೆ.
