ಕೆಲವು ಪ್ರಸಿದ್ಧ ವರ್ಣವೃತ್ತಗಳ ಗತಿಮೀಮಾಂಸೆ - 3
ಈವರೆಗೆ ವಿವೇಚಿತವಾದ ಮೂರೂ ವೃತ್ತಗಳು ಕನ್ನಡಕ್ಕೇಕೆ ಹೆಚ್ಚಾಗಿ ಒದಗಲಿಲ್ಲ ಎಂಬ ಪ್ರಶ್ನೆ ಹುಟ್ಟಬಹುದು. ಕನ್ನಡಕ್ಕಿರುವ ಆದಿಪ್ರಾಸದ ನಿರ್ಬಂಧದ ಕಾರಣ ಉಪಜಾತಿ ಬರಲು ಸಾಧ್ಯವಿಲ್ಲ. ಏಕೆಂದರೆ ಗಜಪ್ರಾಸ ಮತ್ತು ಸಿಂಹಪ್ರಾಸಗಳ ಮಿಶ್ರಣಕ್ಕೆ ಕನ್ನಡದಲ್ಲಿ ಅವಕಾಶವಿಲ್ಲ. ಇನ್ನುಳಿದ ಎರಡು ವೃತ್ತಗಳಲ್ಲಿ ಇಂಥ ತೊಡಕಿಲ್ಲದಿದ್ದರೂ ಅವು ತಮ್ಮ ತಮ್ಮ ಪಾದಾಂತಗಳಲ್ಲಿ ಎರಡು ಗುರುಗಳನ್ನು ಹೊಂದಿದ ಕಾರಣ ಆದಿಪ್ರಾಸವನ್ನು ಹೊಂದಿಸುವಲ್ಲಿ ಸಾಕಷ್ಟು ಕಷ್ಟವೀಯುತ್ತವೆ. ಇದು ಖಂಡಪ್ರಾಸ ಮತ್ತು ಖಂಡೇತರ ಪ್ರಾಸಗಳೆರಡಕ್ಕೂ ಸಮಾನವಾಗಿ ಕ್ಲೇಶಕರ. ಎರಡು ಗುರುಗಳು ಪಾದದ ಕಡೆಗೆ ಬರುವ ಯಾವುದೇ ವರ್ಣವೃತ್ತದ ವಿಷಯದಲ್ಲಿಯೂ ಕನ್ನಡದ ಮಟ್ಟಿಗೆ ಇದು ಸತ್ಯ.