ಡಿ.ವಿ.ಜಿ.ಯವರ ದೃಷ್ಟಿಯಲ್ಲಿ ಸೀತಾಪರಿತ್ಯಾಗ
ಶ್ರೀಮದ್ರಾಮಾಯಣದ ಉತ್ತರಕಾಂಡದಲ್ಲಿ ಬರುವ ಸೀತಾಪರಿತ್ಯಾಗವು ಹಿಂದಿನಿಂದಲೂ ಹೆಚ್ಚು ಚರ್ಚೆಗೊಳಗಾಗಿರುವ ಭಾಗ. ಉತ್ತರಕಾಂಡವು ವಾಲ್ಮೀಕಿವಿರಚಿತವೋ ಅಲ್ಲವೋ ಎಂಬುದು ಕೂಡ ಅಷ್ಟೇ ಚರ್ಚಾಸ್ಪದವಾಗಿದೆ. ಅದು ವಾಲ್ಮೀಕಿಗಳಿಂದ ರಚಿತವಾಗಿಲ್ಲವೆಂಬ ವಾದವನ್ನು ಡಿ.ವಿ.ಜಿ. ಅವರು ತಳ್ಳಿ ಹಾಕುತ್ತಾರೆ. ವಾಲ್ಮೀಕಿಗಳ ಉದ್ದೇಶವು ರಾಮಚರಿತ್ರೆಯನ್ನು ರಚಿಸುವುದಷ್ಟೇ ಆಗಿರದೆ ಸೀತಾಚರಿತ್ರೆಯನ್ನು ರಚಿಸುವುದೂ ಆಗಿತ್ತು. ಹೀಗಾಗಿ ‘ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್’ (೧-೪-೭) (ಕಾವ್ಯವು ರಾಮನ ಸಮಗ್ರವೃತ್ತಾಂತ ಮತ್ತು ಸೀತೆಯ ಮಹತ್ತ್ವಪೂರ್ಣಚರಿತ್ರೆ) ಎಂಬ ಮಾತು ಬರುತ್ತದೆ.