ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 8
ಕೃಷ್ಣಮೂರ್ತಿಗಳನ್ನು ನೆನೆದಾಗಲೆಲ್ಲ ನನಗೆ ಎದ್ದುತೋರುವುದು ಅವರ ಧರ್ಮಪ್ರಜ್ಞೆ. ಅರ್ಥ-ಕಾಮಗಳ ಕೋಲಾಹಲ ಸ್ವಲ್ಪವೂ ಇರದ ಈ ಧರ್ಮಪ್ರಜ್ಞೆಯು ನಿಶ್ಚಿತವಾಗಿ ಮೋಕ್ಷೈಕಗಾಮಿ. ಚಿಕ್ಕ ವಯಸ್ಸಿನಿಂದ ಅವರು ಆಚಾರ-ಪ್ರಾಯಶ್ಚಿತ್ತಗಳ ಮೂಲಕ ಮೈಗೂಡಿಸಿಕೊಂಡಿದ್ದ ಸತ್ತ್ವಾಭಿಮುಖತೆ ಸಾಹಿತ್ಯಸಂಸ್ಕಾರದ ಮೂಲಕ ಮತ್ತಷ್ಟು ಪಾಕಗೊಂಡಿತೆನ್ನಬೇಕು. ಮುಂದೆ ಕಾನೂನನ್ನು ಓದುವಾಗ, ಉದ್ಯೋಗ ನಿರ್ವಹಿಸುವಾಗ ಧರ್ಮಕ್ಕಿರುವ ದಂಡ-ವ್ಯವಹಾರಗಳೆಂಬ ಮತ್ತೆರಡು ಪಾದಗಳನ್ನು ಹತ್ತಿರದಲ್ಲಿ ಕಾಣುವ ಅವಕಾಶವಾಯಿತು. ಹೀಗಾಗಿ ಅವರ ಜೀವನವಿಡೀ ನಾಲ್ಕು ಪಾದಗಳುಳ್ಳ ಧರ್ಮದ ಹಲವು ತೆರನಾದ ಸೂಕ್ಷ್ಮತೆ-ಸಂದಿಗ್ಧತೆಗಳನ್ನು ಸಾವಧಾನವಾಗಿ ಗಮನಿಸಿ ಅನ್ವಯಿಸಿಕೊಳ್ಳುವ ಸಾಧನೆಯಾಯಿತು.
