ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 4
ಅವಧಾನ ಮರುದಿನ ಸಂಜೆ ಏರ್ಪಾಟಾಗಿತ್ತು. ಹೀಗಾಗಿ ಹಿಂದಿನ ದಿನವೆಲ್ಲ ನಮಗೆ ಬಿಡುವಿತ್ತು. ಹತ್ತಿರದ ಕೆಳದಿ, ಇಕ್ಕೇರಿ, ಬನವಾಸಿ ಮುಂತಾದ ಕ್ಷೇತ್ರಗಳಿಗೆಲ್ಲ ಶರ್ಮರು ನಮ್ಮನ್ನು ಕರೆದೊಯ್ದರು. ಎಲ್ಲೆಲ್ಲೂ ಸುಗ್ರಾಸವಾದ ಹವ್ಯಕಭೋಜನ ಸ್ವಾಗತಿಸುತ್ತಿತ್ತು. ರಾತ್ರಿ ಹೊಸಬಾಳೆಯಲ್ಲಿ ಗಮಕಿ ಸೀತಾರಾಮರಾಯರ ಮನೆಯಲ್ಲಿ ಉಳಿದದ್ದಾಯಿತು. ಅವರು ಶರ್ಮರ ಬಂಧುಗಳೂ ಹೌದು. ಜಗಲಿಯ ಮೇಲೆ ಪದ್ಮನಾಭನ್ ಅವರು ಮಲಗಿದರು. ಅವರ ಇರ್ಕೆಲಗಳಲ್ಲಿ ಕೃಷ್ಣಮೂರ್ತಿಗಳಿಗೂ ರಂಗನಾಥಶರ್ಮರಿಗೂ ಹಾಸಿಗೆ ಹಾಸಿತ್ತು. ನಾನು ಈ ಹಿರಿಯರಿಂದ ಸಾಕಷ್ಟು ದೂರದಲ್ಲಿ ಮಲಗಿದ್ದೆ. ದಿನವಿಡೀ ಸುತ್ತಿದ್ದ ಕಾರಣ ಎಲ್ಲರಿಗೂ ದಣಿವು. ಯಾವಾಗ ನಿದ್ರೆಗೆ ಜಾರಿದೆವೋ ಒಬ್ಬರಿಗೂ ನೆನಪಿಲ್ಲ. ಮುಂಜಾನೆ ಎದ್ದು ಪದ್ಮನಾಭನ್ ಅವರನ್ನು ಮಾತನಾಡಿಸಿದೆ.