ಉಪಕ್ರಮ
ಭಾರತೀಯಕಾವ್ಯಮೀಮಾಂಸೆಯ ಪರಂಪರೆಯಲ್ಲಿ ಮೌಲಿಕತತ್ತ್ವಗಳ ಆವಿಷ್ಕಾರ ಮತ್ತು ನಿರೂಪಣೆಗಳು ಭರತ, ಆನಂದವರ್ಧನ, ಅಭಿನವಗುಪ್ತ, ಕುಂತಕ ಮುಂತಾದ ಪಥಪ್ರದರ್ಶಕರಿಂದ ಆದ ಬಳಿಕ ಇವುಗಳ ಆಧಾರದ ಮೇಲೆ ಸಾಕಷ್ಟು ಸಂಗ್ರಹ, ಪರಿಷ್ಕಾರ, ಸ್ಪಷ್ಟೀಕರಣಾದಿಗಳು ಮಮ್ಮಟ, ರುಯ್ಯಕ, ವಿಶ್ವನಾಥ, ಜಗನ್ನಾಥರಂಥವರ ಮೂಲಕ ಆಯಿತು. ಪ್ರಾಚೀನರಾದ ದಂಡಿ, ಭಾಮಹ, ರುದ್ರಟರಂತೆ ಇವರ ಪರವರ್ತಿಗಳಾದ ಭೋಜ, ಮಹಿಮಭಟ್ಟ, ಶಾರದಾತನಯ ಮುಂತಾದವರೂ ಹಲಕೆಲವು ಮೌಲಿಕಸಂಗತಿಗಳನ್ನು ಕಾಲಕಾಲಕ್ಕೆ ನೀಡುತ್ತಲೇ ಬಂದರು. ಇವೆಲ್ಲ ಸಂಸ್ಕೃತಭಾಷೆಯಲ್ಲಿ ಪಾಶ್ಚಾತ್ಯಪ್ರಪಂಚದ ಸಂಪರ್ಕಕ್ಕೆ ಮುನ್ನ ಆದ ಬೆಳೆವಣಿಗೆಗಳು.










