ಅವಧಾನಕಲೆಯ ಕಣ್ವ ಶ್ರೀ ಲಂಕಾ ಕೃಷ್ಣಮೂರ್ತಿ - 6
ಈ ಎಲ್ಲ ಹಿನ್ನೆಲೆಯ ಕಾರಣ ಕೃಷ್ಣಮೂರ್ತಿಗಳು ಚಿಕ್ಕ ವಯಸ್ಸಿಗೇ ಕಾವ್ಯರಚನೆಗೆ ತೊಡಗಿದ್ದು ಸಹಜವಾದ ಬೆಳೆವಣಿಗೆ. “ದಾನಯಜ್ಞಮು” ಎಂಬ ಖಂಡಕಾವ್ಯವನ್ನೂ “ಶ್ರೀವಿಲಾಸಮು” ಎಂಬ ಶತಕವನ್ನೂ “ತ್ಯಾಗಶಿಲ್ಪಮು” ಎಂಬ ಮತ್ತೊಂದು ಖಂಡಕಾವ್ಯವನ್ನೂ ಅವರು ತೆಲುಗಿನಲ್ಲಿ ರಚಿಸಿದ್ದಾರೆ. ತಮ್ಮ ಸಂತೋಷಕ್ಕೆಂದೇ ಬರೆದುಕೊಂಡ ಕಾರಣ ಅನೇಕವರ್ಷಗಳ ಕಾಲ ಇವು ಪ್ರಕಟವಾಗಿರಲಿಲ್ಲ. ದಾನಯಜ್ಞವು ಮಹಾಭಾರತದ ಆಶ್ವಮೇಧಿಕಪರ್ವದಲ್ಲಿ ಬರುವ ನಕುಲೋಪಾಖ್ಯಾನವನ್ನು ಆಧರಿಸಿದೆ. ಶ್ರೀವಿಲಾಸವು ತನ್ನ ಹೆಸರಿನಿಂದಲೇ ತಿಳಿಯುವಂತೆ ಲಕ್ಷ್ಮಿಯ ಸ್ತುತಿ. ಇದು ಲಕ್ಷ್ಮಿಯನ್ನು ಕೇವಲ ಹಣಕಾಸುಗಳ ಮಟ್ಟಕ್ಕೆ ಸೀಮಿತಗೊಳಿಸದೆ ಸಾಧನ, ಸಂಪತ್ತಿ ಮತ್ತು ಸದ್ಗುಣಗಳ ಮಟ್ಟದಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ. ಇಲ್ಲಿಯ ಒಂದೆರಡು ಪದ್ಯಗಳನ್ನು ಗಮನಿಸಬಹುದು:
