ಗುಂಡ್ಲುಪಂಡಿತ ಶ್ರೀ ರಾಜರತ್ನ ಕೃತ ‘ಮಹಾಕವಿ ಪುರುಷಸರಸ್ವತಿ’
ವಿಡಂಬನೆಯೆಂಬುದು ಸಾಹಿತ್ಯದ ಒಂದು ವಿಶಿಷ್ಟಪ್ರಕಾರವಾಗಿದೆ. ವಿಡಂಬನೆ ಅಥವಾ ಅಣಕುವಾಡು ಎಂದರೆ ಮೂಲ ಪ್ರಸಿದ್ಧವಾದ ಒಂದು ಕೃತಿಯನ್ನು ಆಶ್ರಯಿಸಿ ಅದೇ ಶೈಲಿಯನ್ನು ಅನುಕರಿಸಿಕೊಂಡು ಇನ್ನೊಂದು ಸಾಹಿತ್ಯವಿರುತ್ತದೆ. ಆದರೆ ಇಲ್ಲಿ ಯಾವುದೋ ಒಂದು ಕೃತಿಯನ್ನು ಲಘುವಾಗಿಸುವ ಉದ್ದೇಶವಿದೆ ಎಂದಲ್ಲ. ಆದರೆ ಪ್ರಸಿದ್ಧವಾದ ಮಾರ್ಗದಲ್ಲಿ ಸ್ವಲ್ಪ ಲಘುವಾದ ಹಾಸ್ಯಸಾಹಿತ್ಯವನ್ನು ತಂದಾಗ ಹುಟ್ಟುವ ಆಸ್ವಾದನೀಯತೆ ಅವರ್ಣ್ಯ! ಹೀಗೆ ಯಾವುದೋ ಒಂದು ಕೃತಿಯನ್ನು ಆಶ್ರಯಿಸಿ ಅದಕ್ಕೆ ಅಣಕುವಾಡನ್ನು ರಚಿಸುವುದು ಬಹಳ ಹಿಂದಿನಿಂದಲೂ ನಡೆದುಬಂದಿದೆ. ಕಾಳಿದಾಸನ ಮೇಘದೂತವನ್ನು ಕಂಡು ಅದರಂತೆಯೇ ಬಂದ ದೂತಕಾವ್ಯಗಳ ಪರಂಪರೆಯನ್ನು ಅವಲೋಕಿಸಿದರೆ ಸಾಕು ಅದರ ವೈಶಾಲ್ಯವನ್ನು ತಿಳಿಯಬಹುದು.
