ಮಹಾಕವಿಗಳು ಕಂಡ ಮಹಾವೃಕ್ಷಗಳು - 3
ಕಾಳಿದಾಸನ ಎರಡು ಮಹಾಕಾವ್ಯಗಳಲ್ಲಿಯೂ ಅವನಿಗಿದ್ದ ಸಸ್ಯಪ್ರೇಮದ ಭಾವಗಳು ಹೃದಯಂಗಮವಾಗಿ ಒಡಮೂಡಿವೆ. ‘ಕುಮಾರಸಂಭವ’ದಲ್ಲಿ ಪಾರ್ವತಿಯು ತಪೋದೀಕ್ಷೆಯನ್ನು ತಾಳಿದಾಗ ತನ್ನ ತನುವಿನ ಒನಪು-ಒಯ್ಯಾರಗಳನ್ನು ಬಳ್ಳಿಗಳಲ್ಲಿ ಒತ್ತೆಯಿಟ್ಟಳೆಂದು ಕವಿಯು ಹೇಳುವಾಗ ಅವನ ಮಾತುಗಳಲ್ಲಿರುವುದು ಪಾರ್ವತಿಯ ಒಡಲು ಬಳ್ಳಿಯಂತೆ ಬಳುಕುವುದೆಂಬ ಸೀಮಿತಾರ್ಥದ ಚಮತ್ಕಾರ ಮಾತ್ರವಲ್ಲ, ಅವಳಿಗೂ ಗಿಡ-ಬಳ್ಳಿಗಳಿಗೂ ಸಾಜಾತ್ಯವಿದೆಯೆಂಬ ಅನುಬಂಧವೇ ಪ್ರಧಾನ ಮತ್ತು ರಸಸ್ಫೋರಕವೆಂಬ ದಿವ್ಯಧ್ವನಿ: “ಪುನರ್ಗ್ರಹೀತುಂ ನಿಯಮಸ್ಥಯಾ ತಯಾ ... ನಿಕ್ಷೇಪ ಇವಾರ್ಪಿತಂ ಲತಾಸು ತನ್ವೀಷು ವಿಲಾಸಚೇಷ್ಟಿತಂ ...” (೫.೧೩).
