ಡಿ.ವಿ.ಜಿ. ಅವರ "ಜೀವನಧರ್ಮಯೋಗ": ಸರ್ವಾನುಕೂಲ ಗೀತಾವಿವೃತಿ - ೧
ಪ್ರಾಣಿಗಳಿಗಿಂತ ವಿಶಿಷ್ಟವಾದ ಆಲೋಚನಸಾಮರ್ಥ್ಯವನ್ನು ಹೊಂದಿರುವ ಮಾನವನಿಗೆ ತನ್ನ ಸ್ವರೂಪವೇನು, ತಾನು ವ್ಯವಹರಿಸುವ ಜಗತ್ತಿನ ಜಾಡು ಎಂಥದ್ದು, ತನಗೂ ಜಗತ್ತಿಗೂ ಇರುವ ಸಂಬಂಧ ಯಾವ ತೆರನಾದುದು, ಈ ಸಂಬಂಧದಿಂದ ಉಂಟಾದ ಬಂಧದ ಬಗೆ ಎಂಥದ್ದು, ಇಂಥ ಬಂಧದಿಂದ ಬಿಡುಗಡೆ ಹೇಗೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಆತ ಶಾಸ್ತ್ರ, ಯುಕ್ತಿ, ಅನುಭವ ಎಂಬ ಪ್ರಮಾಣಗಳನ್ನು ಆಶ್ರಯಿಸಿ ಶ್ರವಣ, ಮನನ, ನಿದಿಧ್ಯಾಸನಗಳ ಹಾದಿಯಲ್ಲಿ ಮುನ್ನಡೆಯುತ್ತಾನೆ. ಈ ಪ್ರಶ್ನೆಗಳಿಗೆ ದೊರೆತ ಉತ್ತರಗಳಿಂದ ಉಪಶಾಂತಿ ಲಭಿಸಿದರೆ ಜೀವನ ಸಾರ್ಥಕವಾಗುತ್ತದೆ. ಹೀಗೆ ಉಪಶಾಂತಿಯನ್ನು ದೊರಕಿಸಿಕೊಳ್ಳಲು ನಮಗಿರುವ ಮಾರ್ಗ ನಿಡಿದಾದುದು, ಕಡಿದಾದುದು.
