ಶ್ರೀಹರ್ಷನ ನೈಷಧೀಯಚರಿತ - 2
ನೈಷಧೀಯಚರಿತವು ಸಂಸ್ಕೃತಸಾಹಿತ್ಯದ ವಿದ್ವತ್ತೆಯ, ವಿದ್ಯಾಸ್ಪರ್ಧೆಯ, ಚಮತ್ಕಾರಪಾರಮ್ಯದ ಯುಗದ ಅಪ್ರತಿಮ ಪ್ರತಿನಿಧಿ. ವ್ಯಾಸ-ವಾಲ್ಮೀಕಿಗಳ ಮಹಾಕೃತಿಗಳಲ್ಲಿ ಕಂಡುಬರುವ ಕಥೆ-ಪಾತ್ರಗಳ ಆಳ-ಅಗಲಗಳನ್ನಾಗಲಿ, ಜೀವನಮೌಲ್ಯಗಳ ಸಹಜಗಂಭೀರ ಶೋಧನೆಯನ್ನಾಗಲಿ, ಅಕೃತಕವೂ ಉದಾರಮನೋಹರವೂ ಆದ ವಾಗ್ವಿಲಾಸವನ್ನಾಗಲಿ ಇದರಲ್ಲಿ ಕಾಣಲು ಬಯಸಿದರೆ ನಮಗೆ ನಿರಾಶೆಯಾಗದಿರದು. ಆ ಬಗೆಯ ದೃಷ್ಟಿ ಎಷ್ಟೇ ಉನ್ನತವಾಗಿದ್ದರೂ ಇಂಥ ಕಾವ್ಯಗಳ ಮಟ್ಟಿಗೆ ಅದನ್ನು ಅಳವಡಿಸಿಕೊಂಡರೆ ನಮಗೆ ಬೇರೊಂದು ಬಗೆಯ ನಷ್ಟವೇ ಎದುರಾಗುತ್ತದೆ. ಇದೇ ರೀತಿ ಭಾಸ, ಶೂದ್ರಕ, ಕಾಳಿದಾಸ, ಭರ್ತೃಹರಿ, ವಿಶಾಖದತ್ತರಂಥ ಅಭಿಜಾತ ಕವಿಗಳ ಕೃತಿಗಳೊಡನೆ ನೈಷಧೀಯವನ್ನು ಹೋಲಿಸಿ ನೋಡಿದಾಗ ಅಪ್ಪಟ ಸಹೃದಯರಿಗೆ ಬೇಸರವಾಗದಿರದು. ಹಾಗೆಂದು ವಿದ್ಯಾವಿದಗ್ಧರಿಗೆ ಅತ್ಯುತ್ಸಾಹವೂ ಮೂಡದಿರದು.
