ಸಾರ್ವಪಾರ್ಷದ - 5
ಬಹುಮುಖತೆ
ಇನ್ನು ರಾಯರ ಕಲಾಕೌಶಲವನ್ನು ಕುರಿತು ಸ್ವಲ್ಪ ಚಿಂತಿಸಬಹುದು. ಅವರು ತಮ್ಮ ಅನೇಕ ಪುಸ್ತಕಗಳಿಗೆ ಮೂರ್ತಿಶಿಲ್ಪಗಳ ಚಿತ್ರಗಳನ್ನೂ ಕಲ್ಪಿತ ಹಾಗೂ ವಾಸ್ತವ ವ್ಯಕ್ತಿಗಳ ರೂಪಚಿತ್ರ ಮತ್ತು ಭಾವಚಿತ್ರಗಳನ್ನೂ ಬರೆದಿದ್ದಾರೆ; ವಿವಿಧ ಮಾಧ್ಯಮಗಳಲ್ಲಿ ಹಲಕೆಲವು ಶಿಲ್ಪಗಳನ್ನೂ ರೂಪಿಸಿದ್ದಾರೆ. ಎರಡು ಬಾರಿ ತಮ್ಮ ಕಲಾಕೃತಿಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಆತ್ಮೀಯರ ಒತ್ತಾಯಕ್ಕೆ ಮಣಿದು, ಸಾಂದರ್ಭಿಕ ಒತ್ತಡಕ್ಕೆ ಓಗೊಟ್ಟು ಒಂದೆರಡು ರಂಗಪ್ರಯೋಗಗಳಿಗೆ ಹಿತಮಿತವಾದ ವೀಣಾವಾದನದ ಬೆಂಬಲವನ್ನೂ ನೀಡಿದ್ದರು.
