ಅದ್ವೈತಂ ಸುಖದುಃಖಯೋಃ - 1
ಮಹಾಕವಿ ಭವಭೂತಿಯ ‘ಉತ್ತರರಾಮಚರಿತ’ ನಾಟಕವು ತನ್ನ ಘನತೆ-ಮಹೋನ್ನತಿಗಳಿಂದ ಅನನ್ಯವೆನಿಸಿದೆ. ಸೀತಾ-ರಾಮರ ಅಮೃತದಾಂಪತ್ಯವನ್ನು ಇದು ಕಂಡರಿಸಿರುವ ಪರಿ ಇಡಿಯ ರಾಮಾಯಣಸಾಹಿತ್ಯದಲ್ಲಿಯೇ ಮಿಗಿಲೆನಿಸಿದೆ. ಪ್ರೀತಿ ಮತ್ತು ಕರ್ತವ್ಯಗಳ ನಡುವೆ ಸಂಘರ್ಷ ತಲೆದೋರಿದಾಗ ಸಂವೇದನಶೀಲರಾದ ವ್ಯಕ್ತಿಗಳು ಹೇಗೆ ತಳಮಳಿಸುತ್ತಾರೆ ಮತ್ತು ಅವರ ಅಂತರಂಗದ ಮೌಲ್ಯಪ್ರಕ್ಷೋಭ ಏನೆಲ್ಲ ಅವಸ್ಥೆಗಳನ್ನು ಪಡೆಯುತ್ತದೆಂಬ ಜೀವನದರ್ಶನವನ್ನು ಈ ಕೃತಿಯು ಕಂಡರಿಸುವಂತೆ ಹೆಚ್ಚಿನ ಕಾವ್ಯಗಳು ರೂಪಿಸುವುದಿಲ್ಲ. ಈ ಕಾರಣದಿಂದಲೇ ತತ್ತ್ವಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರಗಳ ಮೂರ್ಧನ್ಯವಿದ್ವಾಂಸರಾದ ಪ್ರೊ|| ಎಂ. ಹಿರಿಯಣ್ಣನವರು ‘ಉತ್ತರರಾಮಚರಿತ’ವನ್ನು ವಿಶೇಷವಾಗಿ ಮೆಚ್ಚಿಕೊಳ್ಳುತ್ತಾರೆ.[1]
