ರಾಮಕಥಾವಿಸ್ತರ: ಒಂದು ಮರುನೋಟ - 7
ಲವನು ಹುಟ್ಟಿದ ವಾರ್ತೆಯನ್ನರಿತ ರಾಮ ತಾನೇ ಗುಟ್ಟಾಗಿ ವಾಲ್ಮೀಕಿಮುನಿಗಳ ಆಶ್ರಮಕ್ಕೆ ಹೋಗಿ ಮಗುವಿಗೆ ಜಾತಕರ್ಮಾದಿಗಳನ್ನು ಮಾಡುತ್ತಾನೆ. ಲವ ಆ ಬಳಿಕ ದರ್ಭೆಯ ಕೂರ್ಚದಿಂದ ನಿರ್ಮಿತವಾದ ಮಗುವಾಗಿ ಜನಿಸುತ್ತಾನೆ. ಇತ್ತ ರಾಮನು ನೂರು ಅಶ್ವಮೇಧಗಳನ್ನು ಮಾಡುತ್ತಾನೆ. ಇಲ್ಲೇ ಒಂದೆಡೆ ಪ್ರಸಿದ್ಧವಾದ “ರಾಮರಕ್ಷಾ ಸ್ತೋತ್ರ” ದಾಖಲೆಗೊಂಡಿದೆ. ಈ ಸ್ತುತಿಯು ಬಲಿದ್ವೀಪದಲ್ಲಿ ಕೂಡ ಪ್ರಚಾರದಲ್ಲಿದ್ದುದು ಗಮನಾರ್ಹ. ವಾಲ್ಮೀಕಿಯ ಮಾತಿನಂತೆ ಸೀತೆ ಶತಪತ್ರಕಮಲಗಳಿಂದ ಪೂಜಿಸುವ ವ್ರತವೊಂದನ್ನು ಕೈಗೊಂಡಿರುತ್ತಾಳೆ. ಅದಕ್ಕೆ ಬೇಕಿರುವ ಹೂಗಳನ್ನು ಲವನು ಅಯೋಧ್ಯೆಯ ಅರಮನೆಯ ಕೊಳದಿಂದ ಕದ್ದು ತರುತ್ತಿರುತ್ತಾನೆ. ಇದು ಅವನಿಗೂ ಅಲ್ಲಿಯ ಕಾಪಿನವರಿಗೂ ತಿಕ್ಕಾಟವನ್ನು ತರುವುದಲ್ಲದೆ ಸುದ್ದಿ ರಾಮನ ವರೆಗೂ ಹೋಗುತ್ತದೆ.