ಸಂಸ್ಕೃತಸಾಧಕ ಶ್ರೀ ಮೇಣ ರಾಮಕೃಷ್ಣಭಟ್ಟರು - 2
ಹಿಂದಿನ ಕಾಲದಲ್ಲಿ ಸಂಸ್ಕೃತಪತ್ರಿಕೆಗಳನ್ನು ಪ್ರಕಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆಡಂಬರವೂ ಅಲ್ಲದ, ಅಳ್ಳಕವೂ ಅಲ್ಲದ ಶಕ್ತ-ಸಹಜ ಶೈಲಿಯನ್ನು ಹದಮಾಡಿಕೊಳ್ಳುವುದು ಒಂದು ಬಗೆಯ ಕಷ್ಟವಾದರೆ, ಹಲವು ವಿಷಯಗಳನ್ನು ಕುರಿತು ನಿಯತವಾಗಿ ಲೇಖನಗಳನ್ನು ಬರೆಯುವ ವಿದ್ವಾಂಸರನ್ನು ಗೊತ್ತುಮಾಡಿಕೊಂಡು ಅವರಿಂದ ಬರೆಯಿಸಿ ಪ್ರಕಟಿಸುವುದು ಮತ್ತೊಂದು ಬಗೆಯ ತೊಡಕು. ಅಪ್ಪಾಶಾಸ್ತ್ರೀ ರಾಶಿವಡೇಕರ್ (‘ಸಂಸ್ಕೃತಚಂದ್ರಿಕಾ’, ‘ಸೂನೃತವಾದಿನೀ’), ವಿ. ರಾಘವನ್ (‘ಸಂಸ್ಕೃತಪ್ರತಿಭಾ’), ಭಟ್ಟಶ್ರೀ ಮಥುರನಾಥಶಾಸ್ತ್ರೀ (‘ಸಂಸ್ಕೃತರತ್ನಾಕರ’), ಆರ್. ಕೃಷ್ಣಮಾಚಾರಿಯರ್ (‘ಸಹೃದಯಾ’), ಗಲಗಲಿ ರಾಮಾಚಾರ್ಯ (‘ಮಧುರವಾಣೀ’) ಮುಂತಾದವರ ಈ ನಿಟ್ಟಿನ ಕೆಲಸ ಹಿರಿದಾದುದು.