Profiles

ಸಂಸ್ಕೃತಸಾಧಕ ಶ್ರೀ ಮೇಣ ರಾಮಕೃಷ್ಣಭಟ್ಟರು - 3

ಶಿಶಿರರ್ತುವನ್ನು ವರ್ಣಿಸುವ ಮುಂದಿನ ಪದ್ಯ ತನ್ನ ಚಮತ್ಕಾರದಿಂದ ಚೆಲುವೆನಿಸಿದೆ:

ಆನಂದಾದಿವ ರೋಮಹರ್ಷಣಮಯೋ ಭೀತ್ಯೇವ ಚೋದ್ವೇಪಥುಃ

ಕ್ರೋಧಾವೇಶವಶಾದ್ವಿಘೃಷ್ಟರದನಃ ಶೋಕೇನ ನಮ್ರಾನನಃ |

ಆಶ್ಚರ್ಯೇಣ ಹಹೇತಿ ಜಲ್ಪಿತಪರಶ್ಚಾಯಂ ಜುಗುಪ್ಸಾವಶಾ-

ನ್ನಾಸಾಬದ್ಧಕರೋ ವಿಭಾತಿ ಶಿಶಿರಶ್ಚಾರಿತ್ರ್ಯವೈಚಿತ್ರ್ಯಭಾಕ್ || (ಕಾವ್ಯೋದ್ಯಾನಮ್, ಪು. ೧೩೦)

ಸಂಸ್ಕೃತಸಾಧಕ ಶ್ರೀ ಮೇಣ ರಾಮಕೃಷ್ಣಭಟ್ಟರು - 2

ಹಿಂದಿನ ಕಾಲದಲ್ಲಿ ಸಂಸ್ಕೃತಪತ್ರಿಕೆಗಳನ್ನು ಪ್ರಕಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆಡಂಬರವೂ ಅಲ್ಲದ, ಅಳ್ಳಕವೂ ಅಲ್ಲದ ಶಕ್ತ-ಸಹಜ ಶೈಲಿಯನ್ನು ಹದಮಾಡಿಕೊಳ್ಳುವುದು ಒಂದು ಬಗೆಯ ಕಷ್ಟವಾದರೆ, ಹಲವು ವಿಷಯಗಳನ್ನು ಕುರಿತು ನಿಯತವಾಗಿ ಲೇಖನಗಳನ್ನು ಬರೆಯುವ ವಿದ್ವಾಂಸರನ್ನು ಗೊತ್ತುಮಾಡಿಕೊಂಡು ಅವರಿಂದ ಬರೆಯಿಸಿ ಪ್ರಕಟಿಸುವುದು ಮತ್ತೊಂದು ಬಗೆಯ ತೊಡಕು. ಅಪ್ಪಾಶಾಸ್ತ್ರೀ ರಾಶಿವಡೇಕರ್ (‘ಸಂಸ್ಕೃತಚಂದ್ರಿಕಾ’, ‘ಸೂನೃತವಾದಿನೀ’), ವಿ. ರಾಘವನ್ (‘ಸಂಸ್ಕೃತಪ್ರತಿಭಾ’), ಭಟ್ಟಶ್ರೀ ಮಥುರನಾಥಶಾಸ್ತ್ರೀ (‘ಸಂಸ್ಕೃತರತ್ನಾಕರ’), ಆರ್. ಕೃಷ್ಣಮಾಚಾರಿಯರ್ (‘ಸಹೃದಯಾ’), ಗಲಗಲಿ ರಾಮಾಚಾರ್ಯ (‘ಮಧುರವಾಣೀ’) ಮುಂತಾದವರ ಈ ನಿಟ್ಟಿನ ಕೆಲಸ ಹಿರಿದಾದುದು.

ಸಂಸ್ಕೃತಸಾಧಕ ಶ್ರೀ ಮೇಣ ರಾಮಕೃಷ್ಣಭಟ್ಟರು - 1

ಇಂದು ಸಂಸ್ಕೃತಭಾಷೆಯ ಅಧ್ಯಯನಕ್ಕೆ ವಿಪುಲ ಅವಕಾಶಗಳಿವೆ. ಅದರ ಪ್ರಚಾರ-ಪ್ರಸಾರಗಳಿಗೆ ಹಲವಾರು ಮಾಧ್ಯಮಗಳು ಲಭ್ಯವಿವೆ. ಸಂಘಟನೆಯ ರೂಪದ ಸಂಭಾಷಣಾಂದೋಲನದಿಂದ ಮೊದಲ್ಗೊಂಡು ಸಾಂಪ್ರದಾಯಿಕವಾದ ಶಾಸ್ತ್ರಾಧ್ಯಯನದವರೆಗೆ ಎಲ್ಲಕ್ಕೂ ಅನೇಕ ವ್ಯಕ್ತಿಗಳ, ಸಂಸ್ಥೆಗಳ ಸಹಕಾರವಿದೆ. ತಂತ್ರಜ್ಞಾನದ ಪ್ರಯೋಜನದಿಂದ ಹೊಸಬಗೆಯ ಪಾಠ್ಯಕ್ರಮಗಳನ್ನು ರಚಿಸಿ, ಅಧ್ಯಯನಕ್ಕೆ ಅನುಕೂಲಿಸುವ ವಿವಿಧ ಉಪಕರಣಗಳನ್ನು ರೂಪಿಸಿ ದೇವವಾಣಿಯನ್ನು ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಹತ್ತಿರವಾಗಿಸುವುದು ಇಂದು ಸರಳವಾಗಿದೆ. ಹಸ್ತಪ್ರತಿಗಳ ಸೂಕ್ಷ್ಮ ಅವಲೋಕನಕ್ಕೆ, ವ್ಯಾಕರಣವೇ ಮೊದಲಾದ ಶಾಸ್ತ್ರಗಳ ಕಲಿಕೆಗೆ ಹಲವು ಬಗೆಯ ತಂತ್ರಾಶಗಳಿಂದ ದೊರೆತಿರುವ ನೆರವು ಅಷ್ಟಿಷ್ಟಲ್ಲ.

ವಿದ್ಯಾಭವನದ ಅನುಭವಗಳು - 11

ಮತ್ತೊಮ್ಮೆ ರಾಯರೇ ವಿದ್ಯಾಭವನದಲ್ಲಿ ಶಾಕುಂತಲವನ್ನು ಕುರಿತು ಭಾಷಣ ಮಾಡಿದರು. ಈ ಕೃತಿಯ ವಿಷಯದಲ್ಲಿ ಪದ್ಮನಾಭನ್ ಅವರಿಗೆ ನಿರತಿಶಯವಾದ ಪ್ರೀತಿ. ಅದು ಯಾವ ಕಾರಣವೋ ನನಗೆ ತಿಳಿಯದು; ರಾಯರ ಮನೋಧರ್ಮ ಅಂದು ಕುದುರಿಕೊಂಡಿರಲಿಲ್ಲ. ಹೀಗಾಗಿ ಉಪನ್ಯಾಸ ಎಲ್ಲರಿಗೂ ಅರಕೆ ತಂದಿತು. ಕಡೆಗೆ ಪದ್ಮನಾಭನ್ ಅವರು ನಾಟಕದ ಭರತವಾಕ್ಯವನ್ನು ಕುರಿತು ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಂಡರು. ಶಾಕುಂತಲದ ಭರತವಾಕ್ಯ ಲೋಕಪ್ರಸಿದ್ಧವಷ್ಟೆ. ಅದರ ಸ್ವಾರಸ್ಯ ಬಹುಮುಖವಾದುದು; ನಮ್ಮನ್ನು ಅಂತರ್ಮುಖರನ್ನಾಗಿ ಮಾಡುವಂಥದ್ದು. ಆದರೆ ನಮ್ಮೆಲ್ಲರ ನಿರೀಕ್ಷೆಗೆ ಆಘಾತ ತರುವಂತೆ ರಾಯರು ಅವರ ವಿಶಿಷ್ಟ ಧ್ವನಿಯಲ್ಲಿ, “ವಿಶೇಷವೇನೂ ಇಲ್ಲ. ಮಳೆ-ಬೆಳೆ ಚೆನ್ನಾಗಿ ಆಗಲಿ ಅಂತ ಹೇಳಿದ್ದಾನೆ ಕವಿ, ಅಷ್ಟೇ” ಎಂದುಬಿಟ್ಟರು!

ವಿದ್ಯಾಭವನದ ಅನುಭವಗಳು - 10

ರಂಗನಾಥ್ ಅವರು ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಂತೆಯೇ ಕೆಲವು ಕಾಲ ಗಾಂಧಿ ಕೇಂದ್ರದ ಬಾಧ್ಯತೆಯನ್ನೂ ನಿರ್ವಹಿಸುತ್ತಿದ್ದರು. ಆಗ ಅಲ್ಲಿಯ ಸಂಶೋಧನೆಗಳ ಮಾರ್ಗದರ್ಶನಕ್ಕೆ ಸಂಸ್ಕೃತವಿದ್ವಾಂಸರಾದ ಕೆ. ಟಿ. ಪಾಂಡುರಂಗಿ ಅವರು ಬರುತ್ತಿದ್ದರು. ಇವರ ಪರಿಚಯ ನನಗೆ ತುಂಬ ಹಿಂದಿನದು. ನನ್ನ ವಿದ್ಯಾಗುರುಗಳಿಗೆಲ್ಲ ಪಾಠ ಹೇಳಿದ ಕಾರಣ ಇವರು ನನ್ನ ಪರಮಗುರು. ಕೆ. ಟಿ. ಪಿ. ಅವರ ಸಮಾಧಾನಗುಣ, ನವುರಾದ ವಿನೋದಪ್ರಜ್ಞೆ ಮತ್ತು ವಿಶಾಲವಾದ ಶಾಸ್ತ್ರಜ್ಞಾನ ಯಾರನ್ನೂ ಮೆಚ್ಚಿಸುವಂಥವು. ಅವರು ಉದ್ವಿಗ್ನತೆಯಿಲ್ಲದೆ ಯಾವ ಸಂಗತಿಯನ್ನೂ ತಿಳಿಯಾಗಿ ನಿರೂಪಿಸಬಲ್ಲವರಾಗಿದ್ದರು. ಅವರು ನನ್ನ ಮೆಚ್ಚಿನ ಅಧ್ಯಯನಕ್ಷೇತ್ರಗಳಾದ ಸಾಹಿತ್ಯಶಾಸ್ತ್ರ ಮತ್ತು ಶಾಂಕರವೇದಾಂತಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದರು.

ವಿದ್ಯಾಭವನದ ಅನುಭವಗಳು - 7

ಭವನದ ಯಾವುದೇ ಕಾರ್ಯಕ್ರಮದಲ್ಲಿ ವೇದಘೋಷ ಆಗಬೇಕಿದ್ದಾಗ ಅದನ್ನು ರಾಜಗೋಪಾಲ್ ಅವರೇ ನಿರ್ವಹಿಸುತ್ತಿದ್ದರು. ಘೋಷಕ್ಕೊಂದು ಗಾತ್ರ ಬೇಕೆನಿಸಿದರೆ ಅವರಿಗೆ ಹತ್ತಿರದವರಾದ ಗಣೇಶ ಘನಪಾಠಿಗಳನ್ನು ಕರೆಸಿಕೊಳ್ಳುತ್ತಿದ್ದರು. ಇಬ್ಬರೂ ಘನಾಂತವಾಗಿ ಯಜುರ್ವೇದವನ್ನು ಬಲ್ಲವರಾದರೂ ರಾಜಗೋಪಾಲ್ ಅವರ ದನಿ ಮೃದು, ಮಧುರ, ಸಮಾಹಿತ. ಗಣೇಶ ಘನಪಾಠಿಗಳ ಧ್ವನಿಯಲ್ಲಿ ರೂಕ್ಷತೆ ಹೆಚ್ಚು; ಅಬ್ಬರವೂ ಮಿಗಿಲು. ಎಲ್ಲಿಯೂ ಅವರು ತಮ್ಮ ದನಿಯನ್ನೇ ಮುಂದುಮಾಡುತ್ತಿದ್ದರು. ಆದರೆ ರಾಜಗೋಪಾಲ್ ಯಾರೊಡನೆ ವೇದ ಹೇಳುವಾಗಲೂ ಅನುನಯ ಮತ್ತು ಅನುಸರಣೆಗಳನ್ನು ತಮ್ಮ ಆಧಾರಶ್ರುತಿಯಾಗಿ ಹಿಡಿಯುತ್ತಿದ್ದರು. ಅವರ ಈ ವರ್ತನೆ ನನಗೆ ಪ್ರಶ್ನಾರ್ಹವಾಗಿ ತೋರಿದಾಗ ಹೀಗೆ ಉತ್ತರವಿತ್ತಿದ್ದರು: “ಇದನ್ನು ನೀವು ನನ್ನ ಅಶಕ್ತಿ ಅಂತ ತಿಳಿಯಬೇಕಾಗಿಲ್ಲ.

ವಿದ್ಯಾಭವನದ ಅನುಭವಗಳು - 6

ಘನಪಾಠಿಗಳು ಶಾಲೆಯ ಮುಖವನ್ನು ಕಂಡವರಲ್ಲ. ಇಂಗ್ಲಿಷನ್ನು ಕಲಿತವರಲ್ಲ. ಅವರು ಅಪ್ಪಟ ಗುರುಕುಲದ ವಿದ್ಯಾರ್ಥಿ. ಅವರ ತಾತನವರು ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು. ಅವರಿಗೊಬ್ಬ ತಮ್ಮ. ಆತ ಮಾತ್ರ ವೇದ-ಶಾಸ್ತ್ರಗಳನ್ನು ಬಲ್ಲವರಾಗಿದ್ದರು; ವೈದಿಕವೃತ್ತಿಯಲ್ಲಿಯೇ ಉಳಿದಿದ್ದರು. ಅವರ ಹೆಸರು ಕೂಡ ರಾಜಗೋಪಾಲಶರ್ಮಾ ಎಂದೇ. ನ್ಯಾಯಮೂರ್ತಿಗಳಾಗಿದ್ದ ಅಣ್ಣ ಚಿಕ್ಕ ವಯಸ್ಸಿಗೇ ತೀರಿಕೊಂಡರು. ತಬ್ಬಲಿಗಳಾದ ಅವರ ಮಕ್ಕಳನ್ನು ತಮ್ಮ ರಾಜಗೋಪಾಲಶರ್ಮರೇ ಸಾಕಿ ಸಲಹಿದರು. ಅವರಿಗೆಲ್ಲ ವೇದಾಭ್ಯಾಸ ಮಾಡಿಸಿದರೂ ಲೌಕಿಕವಿದ್ಯೆಗಳಲ್ಲಿಯೇ ಮುಂದುವರಿಸಿ ಕೆಲಸ-ಬೊಗಸೆ ಕಲ್ಪಿಸಿದರು. ತಮ್ಮ ಮಕ್ಕಳಿಗೆ ಮಾತ್ರ ತಮ್ಮ ಹಾಗೆ ಅಪ್ಪಟ ವೈದಿಕವಿದ್ಯೆಗಳನ್ನು ಕಲಿಸಿ ಅದರಲ್ಲಿಯೇ ತೊಡಗಿಸಿದರು.