ಸಂಗೀತಸಾಹಸಿ

ಈಚೆಗಷ್ಟೇ ನಮ್ಮನ್ನಗಲಿದ ಬಾಲಮುರಳೀಕೃಷ್ಣ ಅವರ ಪ್ರತಿಭೆ ಮತ್ತು ಪಾಂಡಿತ್ಯಗಳನ್ನು ನೆನೆದಾಗ, ಮತ್ತು ಅವರ ಸಾಧನೆ ಮತ್ತು ವ್ಯಕ್ತಿತ್ವಗಳನ್ನು ಗಮನಿಸಿದಾಗ, ಊಹಿಸಲಾಗದ ಒಂದು ದಂತಕಥೆಯೇ ನಮ್ಮ ಮುಂದೆ ಸರಿದುಹೋದಂತೆ ಭಾಸವಾಗುತ್ತದೆ. ಅವರ ವ್ಯಕ್ತಿತ್ವ ಎಷ್ಟು ವಿಲಕ್ಷಣವೋ ವಿಶಿಷ್ಟವೋ ಆಕರ್ಷಕವೋ ಅದಕ್ಕಿಂತಲೂ ತುಂಬ ಮಿಗಿಲಾದದ್ದು, ಲೋಕಾಕರ್ಷಕವಾದದ್ದು ಮತ್ತು ಚಿಂತನೆಗೆ ಅರ್ಹವಾದಂಥದ್ದು ಅವರ ಕಲೆ. ಒಂದು ಮಾತಿನಲ್ಲಿ ಹೇಳುವುದಾದರೆ, ಸಂಗೀತವನ್ನು ಸರ್ವಜನಪ್ರಿಯವಾಗಿ, ಸರ್ವಜನಮನೋಭಿರಾಮವಾಗಿ ಮಾಡಿದವರು ಬಾಲಮುರಳಿ ಎಂದರೆ ಅತಿಶಯವಲ್ಲ. ಮತ್ತೂ ಮುಂದುವರೆದು ಹೇಳುವುದಾದರೆ, ಕರ್ನಾಟಕಸಂಗೀತಕ್ಕೆ ಎಲ್ಲರೂ ಕಿವಿಯೊಗ್ಗಿ ಆನಂದಿಸುವಂತೆ ಮಾಡಿದ ಕೆಲವೇ ಮಹನೀಯರಲ್ಲಿ ಅವರ ಹೆಸರು ಪ್ರಥಮಪಂಕ್ತಿಯಲ್ಲಿರುವುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಯಾವುದೇ ದೊಡ್ಡ ಕಲಾವಿದನ ಲಕ್ಷಣವೇನೆಂದರೆ ಆತ ತನ್ನ ಕಲೆಯನ್ನು ಪಂಡಿತ-ಪಾಮರ ವರ್ಗಕ್ಕೆರಡಕ್ಕೂ ಆಪ್ಯಾಯನವಾಗುವಂತೆ ಮಾಡುತ್ತಾನೆ. ಅಷ್ಟಾಗದಿದ್ದರೆ, ಪಂಡಿತರು ಚಿಕಿತ್ಸಕದೃಷ್ಟಿಯಿಂದ ಸಂದೇಹ-ಭಯ-ಗೌರವ-ಅಸೂಯೆಗಳಿಂದಾದರೂ ಕಾಣುವಂತೆ ಮಾಡಿರುತ್ತಾನೆ. ಇನ್ನು ಪಾಮರರಾದರೋ ಸ್ವತಾವಿಸ್ಮೃತಿಯಿಂದ, ಆನಂದದಿಂದ, ಪ್ರೀತಿಯಿಂದ, ತನ್ಮಯತೆಯಿಂದ ಅದನ್ನು ಸ್ವೀಕರಿಸುವಂತೆ ಮಾಡಿರುತ್ತಾನೆ. ಅರ್ಥದಲ್ಲಿ ಬಾಲಮುರಳಿಯವರು ಪಂಡಿತ-ಪಾಮರರಿಗೆ, ಆಬಾಲವೃದ್ಧರಿಗೆ ಆಪ್ಯಾಯನವಾಗಿ ಒದಗಿಬಂದ ಅನನ್ಯಸಂಗೀತಪ್ರತಿಭೆ.

ಕರ್ನಾಟಕಸಂಗೀತವೆಂಬ ಸೋಪಾಧಿಕವೂ ಸವಿಶಿಷ್ಟವೂ ಆದ ಕಲೆಯನ್ನು ನಿರ್ವಿಶಿಷ್ಟವಾಗಿ ಮಾಡಿದ್ದೇ ಅವರ ವೈಶಿಷ್ಟ್ಯ. ಅವರು ಅದನ್ನು ಕೇವಲ ಸಂಗೀತವಾಗಿ ರೂಪಿಸಿದರು. ಕರ್ನಾಟಕಸಂಗೀತವನ್ನು ಸಂಗೀತವಾಗಿ, ಶಾಸ್ತ್ರೀಯಸಂಗೀತವನ್ನು ಗೀತವನ್ನಾಗಿ, ಗೀತವನ್ನು ಸ್ವರವನ್ನಾಗಿ, ಸ್ವರವನ್ನು ಶ್ರುತಿಯನ್ನಾಗಿ ಮಾಡಿದಂಥವರು. ಈ ದೃಷ್ಟಿಯಲ್ಲಿ ಕಂಡರೆ, ಅವರು ಎಲ್ಲಿಯೂ ಯಾವುದನ್ನೂ ಸಂಗೀತವನ್ನಾಗಿ ಮಾರ್ಪಡಿಸಬಲ್ಲ ಸಾಮರ್ಥ್ಯವನ್ನು ಹೊಂದಿದವರು. ಇದು ಮಹಾಪ್ರತಿಭೆಗೆ ಮಾತ್ರ ಸಾಧ್ಯವಾದದ್ದು. ಇವರಂತೆಯೇ ಮತ್ತೊಬ್ಬ ದೈತ್ಯಪ್ರತಿಭೆಯೂ ನೃತ್ಯಕ್ಷೇತ್ರದ ಸೀಮಾರೇಖೆಯೂ ಎನಿಸಿದ  ಡಾ || ಪದ್ಮಾ ಸುಬ್ರಹ್ಮಣ್ಯಂ ಅವರಲ್ಲಿ ನಾನು ಒಮ್ಮೆ ಕೇಳಿದ್ದೆ : “ಕಳೆದ ಶತಮಾನದ ಉತ್ತರಾರ್ಧದ ನಮ್ಮ ದಾಕ್ಷಿಣಾತ್ಯಪರಂಪರೆಯಲ್ಲಿ ಮಹಾಸಂಗೀತಗಾರ ಯಾರು?” ಎಂದು. ಅವರು ಮರುಕ್ಷಣವೇ - ಯಾವುದೇ ಸಂದೇಹವಿಲ್ಲದೆ - ಹೇಳಿದ ಹೆಸರು  ಡಾ || ಬಾಲಮುರಳೀಕೃಷ್ಣ ಅವರದ್ದು. ಪದ್ಮಾ ಸುಬ್ರಹ್ಮಣ್ಯಂ ಅವರಾದರೂ ಬಾಲಮುರಳಿ ಅವರಂತೆಯೇ. ಹಾಗಾಗಿ, ಒಂದು ಮಹಾಪ್ರತಿಭೆಗೆ ಮತ್ತೊಂದು ಮಹಾಪ್ರತಿಭೆಯನ್ನು ಗುರುತಿಸಲು ಯಾವ ಕಷ್ಟವೂ ಆಗಿರಲಾರದು. ಯೋಗಾಯೋಗದಿಂದ ಇನ್ನೊಂದು ಸಂದರ್ಭದಲ್ಲಿ ಬಾಲಮುರಳಿ ಅವರನ್ನು ನೃತ್ಯಕ್ಷೇತ್ರದ ಕುರಿತಾಗಿ “ಯಾರು ತಮ್ಮ ಕಣ್ಣಿಗೆ ಬಿದ್ದ ಅಸಾಮಾನ್ಯಪ್ರತಿಭೆ?” ಎಂದು ನಾನು ಕೇಳಿದಾಗ, ಅವರು  ಪದ್ಮಾ ಸುಬ್ರಹ್ಮಣ್ಯಂ ಎಂದು ಹೇಳಿದ್ದರು. ಇದು ಪರಸ್ಪರಾಭಿಜ್ಞಾನದ ಒಂದು ಸುಂದರನಿದರ್ಶನವೆಂದು ಹೇಳಬೇಕು.

ಬಾಲಮುರಳಿ ಅವರ ಸಾಧನೆಗಳ ಬಗೆಗೆ, ಜೀವನದ ಬಗೆಗೆ, ಪ್ರಶಸ್ತಿ-ಪುರಸ್ಕಾರಾದಿಗಳ ಬಗೆಗೆ ಬೇಕಾದಷ್ಟು ಮಾಹಿತಿಯಿದೆ. ಆದರೆ ಅವು ನಮಗೆ ಅಷ್ಟು ಮುಖ್ಯವಲ್ಲ. ಅದರಲ್ಲಿಯೂ ಬಾಲಮುರಳಿ ಅವರನ್ನು ಕಂಡಂತೆ - ಅವರ ಬದುಕಿಗೂ ಕಲೆಗೂ ಸಂಬಂಧವುಂಟೇ? ಇದ್ದಲ್ಲಿ ಅದು ಸಮವೇ ವಿಷಮವೇ? ಎಂಬುದಾಗಿ ಬಹಳ ದೊಡ್ಡ ಚರ್ಚೆಯನ್ನು ಮಾಡಬಹುದು. ಆದರೆ ಅದು ಸದ್ಯಕ್ಕೆ ಗೌಣ. ಅವರ ಮುಖ್ಯವಾದ ಕಲಾಸಾಧನೆಯನ್ನೂ ಕಲೆಯಲ್ಲಿ ಅವರು ಕಂಡುಕೊಂಡ ಮತ್ತು ನಮಗೆ ಕಂಡರಿಸಿಕೊಟ್ಟ ವಿಶೇಷಗಳು ಯಾವುವು ಎಂಬುದನ್ನೂ ನಮಗಿರುವ ಮಿತಿಯಲ್ಲಿ ಸೂಕ್ಷ್ಮವಾಗಿ, ದಿಗ್ದರ್ಶಕವಾಗಿ ನೋಡುವುದಷ್ಟೇ ಪ್ರಕೃತೋದ್ಯಮ.

ಬಾಲಮುರಳಿ ಅವರು ಒಬ್ಬ ಜ್ಞಾತಶಿಲ್ಪಿ (conscious artist) ಹಾಗೆಂದಮಾತ್ರಕ್ಕೆ ಅವರಲ್ಲಿ ಅಜ್ಞಾತವಾದ, ಸ್ವಯಂಸ್ಫೂರ್ತಿಯಿಂದ ಬರುವ ಪ್ರಾತಿಭವು ಇಲ್ಲವೆಂದಲ್ಲ. ಆದರೆ, ಅದೆಲ್ಲವನ್ನೂ ಅವರು ತಮ್ಮ ನಿಶಿತವಾದ ಬುದ್ಧಿಶಕ್ತಿಯಿಂದ, ತರ್ಕಸಮನ್ವಯದಿಂದ ತುಂಬ ಚೆನ್ನಾಗಿ ನೇರ್ಪಾಗಿಸಿಕೊಂಡಿದ್ದರು. ಈ ಅರ್ಥದಲ್ಲಿ ಅವರು ಅಭಿಜಾತಪ್ರತಿಭೆ. ಅವರು ಅನಾಘ್ರಾತಕುಸುಮವಲ್ಲ, ಅನಾವಿದ್ಧರತ್ನವಲ್ಲ ; ನಿರಂತರವೂ ಶಾಣೋಲ್ಲೀಢಮಣಿಯಂತೆ. ಅತ್ಯಂತ ಪರಿಷ್ಕೃತವಾದ ರೀತಿಯಲ್ಲಿ ತಮ್ಮ ಮಾಧ್ಯಮವನ್ನು, ತಮ್ಮ ಗುರಿಯನ್ನು ಸಾಧಿಸಿಕೊಂಡಂಥವರು. ತ್ಯಾಗರಾಜರ ಪರಂಪರೆಯಲ್ಲಿ ಬಂದ ಐದನೆಯವರಾದರೂ ತ್ಯಾಗರಾಜರ ಕೃತಿಗಳಿಗೆ ಮರುಹುಟ್ಟನ್ನು ಕೊಟ್ಟರು. ಆವರೆಗೆ ತ್ಯಾಗರಾಜರ ಕೃತಿಗಳನ್ನು ಹಾಡಿದಂತೆ ಅವರು ಹಾಡುತ್ತಿರಲಿಲ್ಲ. ಅವರೇನೋ ಉತ್ತರ ಹೇಳುತ್ತಿದ್ದರು - ಇದು ಶುದ್ಧವಾದ ಪರಪರೆಯೆಂದು. ಶುದ್ಧಿ-ಅಶುದ್ಧಿಗಳ ವಿಚಿಕಿತ್ಸೆಯನ್ನು ಸದ್ಯಕ್ಕೆ ಪಕ್ಕಕ್ಕೆ ಇಡೋಣ. ಅದು ಸಂತೊಷಕಾರಿಯೇ ಸುಂದರವೇ ಶ್ರುತಿಹಿತವೇ ಎಂದು ನೋಡಿದಾಗ ನಮಗೆ ಶುದ್ಧಿ-ಅಶುದ್ಧಿಗಳ ಪಾರಮಾರ್ಥ್ಯ ಏನೆಂಬುದು ಗೊತ್ತಾಗುತ್ತದೆ. ಎಷ್ಟೋ ಬಾರಿ ಕಲೆಯಲ್ಲಿ ಶುದ್ಧಿ-ಅಶುದ್ಧಿಗಳಿಗಿಂತ,  ಸರಿ-ತಪ್ಪುಗಳಿಗಿಂತ, ಸಂತೋಷ-ಅಸಂತೋಷಗಳೇ, ಸುಖ-ದುಃಖಗಳೇ ಮುಖ್ಯವಾಗುತ್ತವೆ. ಅರ್ಥದಲ್ಲಿ, ತ್ಯಾಗರಾಜರೂ ಸೇರಿದಂತೆ ಅನೇಕ ವಾಗ್ಗೇಯಕಾರರ ರಚನೆಗಳ ವಿನಿಕೆಯನ್ನು ಸೌಖ್ಯದ ಕಡೆಗೆ ತಿರುಗಿಸಿದ ದೊಡ್ಡಪ್ರತಿಭೆ ಬಾಲಮುರಳೀಕೃಷ್ಣ. ಅಷ್ಟು ಮಾತ್ರವಲ್ಲ, ಅವರು ಯಾವ ವಾಗ್ಗೇಯಕಾರನ ಕೃತಿಯನ್ನು ಹಾಡಿದರೂ ಕೂಡ ಆ ವಾಗ್ಗೇಯಕಾರನ ವಿಶಿಷ್ಟತೆಯನ್ನು ತೋರಿಸುತ್ತಲೇ ತಮ್ಮ ಅನನ್ಯತೆಯನ್ನೂ ಧ್ವನಿಸುತ್ತಿದ್ದರು. ದುರ್ದೈವವೇನೆಂದರೆ, ಅವರ ಶಿಷ್ಯರೆಂದು ಇಂದು ಮುಂದೆಬರುವ ಕೆಲವರು ಕಲೆಯಲ್ಲಿ ಮುಂದೆ ಬರಲು ಆಗಲಿಲ್ಲ ; ಅವರ ಹಿಂದೆಯೇ ಉಳಿದರು. ಹಿಂದೆ ಉಳಿದದ್ದು ಅವರ ಬೆಳಕಿನಲ್ಲಿ ಅಲ್ಲ, ಅವರ ನೆರಳಿನಲ್ಲಿ. ಈ ಕಾರಣದಿಂದ ಅವರು ಬಾಲಮುರಳಿ ಅವರ ಸುದೂರಪೇಲವಚ್ಛಾಯೆಗಳಾದರೇ ಹೊರತು ಪ್ರಖರತೇಜಸ್ವಿಗಳಾಗಿ ಬೆಳಗಲಿಲ್ಲ. ಬಾಲಮುರಳಿ ಅವರಿಗೆ ತಮ್ಮದೆಂಬ ಪ್ರತ್ಯಕ್ಷಶಿಷ್ಯವೃಂದವಿಲ್ಲ. ಆದರೆ ಅವರ ಪ್ರಭಾವ ಮಾತ್ರ ಅವರಿಂದೀಚೆಗೆ ಬಂದ ಪ್ರತಿಯೊಬ್ಬ ಗಾಯಕನ ಮೇಲೂ ಕೂಡ - ಧನಾತ್ಮಕವಾಗಿಯೋ ಋಣಾತ್ಮಕವಾಗಿಯೋ (either positive or negative) - ಆಗಿಯೇ ಇದೆ. ಯಾವ ಮಟ್ಟಕ್ಕೆಂದರೆ, ಇಲ್ಲವೇ ಬಾಲಮುರಳಿ ಅವರನ್ನು ಒಪ್ಪಬೇಕು, ಅಥವಾ ತಿರಸ್ಕರಿಸಬೇಕು. ಇದೆರಡದಲ್ಲದೆ ತಟಸ್ಥವಾಗಿ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂಬ ಒಂದು ಪರಿಸ್ಥಿತಿಯನ್ನು ತಂದರು. ಶಂಕರಭಗವತ್ಪಾದರ ಬಳಿಕ ವೇದಾಂತಮಾರ್ಗದಲ್ಲಿಯೇ ಒಂದು ಸಂಚಲನವಾಯಿತು - ಅವರನ್ನು ಒಪ್ಪಬೇಕು ಇಲ್ಲವೇ ಅವರನ್ನು ನಿರಾಕರಿಸಬೇಕು ; ಅದನ್ನು ಬಿಟ್ಟು ಅವರನ್ನು ಉಪೇಕ್ಷಿಸುವುದು ಸಾಧ್ಯವಿಲ್ಲ ಎಂದಾಯಿತು. ಇದು ಮಹತ್ತಾದ ಪ್ರತಿಭೆಯ ಒಂದು ಉಪಲಕ್ಷಣವೂ ಹೌದು.

M S Subbulakshmi

ಬಾಲಮುರಳಿ ಅವರು ಅನೇಕ ವಾಗ್ಗೇಯಕಾರರ ರಚನೆಗಳನ್ನು ಹಾಡಿದರು. ಹಾಗಲ್ಲದೆ, ಮಾತು ಮಾತ್ರ ಇದ್ದು ಧಾತು ಇಲ್ಲದೆ ಹೋದ ರಚನೆಗಳಿಗೂ ಕೂಡ - ಧಾತುವನ್ನು ತಾವೇ ಸೇರಿಸಿಕೊಂಡು ಹಾಡಿದ ಪ್ರಸಂಗಗಳು ಎಷ್ಟೋ ಉಂಟು. ಅನ್ನಮಾಚಾರ್ಯರ ಕೃತಿಗಳನ್ನಾಗಲಿ ಅಥವಾ ಭದ್ರಾಚಲ ರಾಮದಾಸರ ರಚನೆಗಳನ್ನಾಗಲಿ, ಕನ್ನಡದ ಹರಿದಾಸರ ರಚನೆಗಳನ್ನಾಗಲಿ, ಸ್ವಾತಿತಿರುನಾಳರ ಕೃತಿಗಳನ್ನಾಗಲಿ, ಜಯದೇವನ ಅಷ್ಟಪದಿಗಳನ್ನಾಗಲಿ, ಅವರು ತಮ್ಮ ಪ್ರತಿಭೆಯಿಂದಲೇ ಹೊಸದಾದ ರೀತಿಯ ಸ್ವರಕಲ್ಪನೆಯನ್ನು ಮಾಡಿ ಜನರ ಮನಸ್ಸನ್ನು ತಣಿಸಿದ್ದಾರೆ. ಇಲ್ಲೆಲ್ಲದರಲ್ಲಿಯೂ ಅವರ ಅನನ್ಯವಾದ ಮುದ್ರೆ ಕಂಡುಬರುತ್ತದೆ. ಹೀಗೆ ನೋಡಿದಾಗ ಅವರಿಗಿಂತ ತುಂಬ ದೊಡ್ಡ ಹೆಸರನ್ನೂ ಲೋಕದ ಭಕ್ತಿ-ಗೌರವಗಳನ್ನೂ ಪಡೆದಂಥ ಎಂ.ಎಸ್.ಸುಬ್ಬುಲಕ್ಷ್ಮಿ ಅವರು ಒಬ್ಬ ಸಂತೆಯ ಸ್ಥಾನವನ್ನು ಗಳಿಸಿದ್ದಾರೆ. ಆದರೆ ಅವರು ತಾವಾಗಿ ಸಂಗೀತಸಂಯೋಜನೆ ಮಾಡಿದ್ದು ಪ್ರಾಯಶಃ ಇಲ್ಲವೆಂಬಷ್ಟು ವಿರಳ. ಇದನ್ನು ಕಂಡಾಗ ಅವರಿಗಿಂತ ಎಷ್ಟೋ ಪಾಲು ಹೆಚ್ಚಿನ ಸಂಗೀತದ ಬೌದ್ಧಿಕ ಮತ್ತು ಭಾವನಾತ್ಮಕಸಿದ್ಧಿ ಬಾಲಮುರಳಿ ಅವರದ್ದಾಗಿತ್ತು ಎಂಬುದು ತಿಳಿಯುತ್ತದೆ. ಹಾಗೆಂದಮಾತ್ರಕ್ಕೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರನ್ನಾಗಲಿ, ಅವರ ಕೊಡುಗೆಯನ್ನಾಗಲಿ ಹೀಗಳೆಯುವುದೆಂದಲ್ಲ. ಯಾವುದೇ ವಿದ್ವಾಂಸರ ಬಗೆಗೆ ಅಥವಾ ಕಲಾವಿದರ ಬಗೆಗೆ ಮಾತನಾಡುವಾಗ ತರ-ತಮಗಳನ್ನು ಹೇಳುವುದು ಅವರನ್ನು ಹೀನಾಯ ಮಾಡುವುದಕ್ಕಾಗಿ ಅಲ್ಲ ; ನಮ್ಮ ಮೌಲ್ಯಗಳನ್ನು ದೃಢೀಕರಣ ಮಾಡಿಕೊಳ್ಳುವುದಕ್ಕಾಗಿ ಅಷ್ಟೆ.

ಬಾಲಮುರಳಿ ಅವರು ಎಳೆವಯಸ್ಸಿಂದಲೇ ಅವಲೀಲೆಯೋ ಎಂಬಂತೆ ಸಂಗೀತವನ್ನು ದಕ್ಕಿಸಿಕೊಂಡರೆಂದು ಅವರೇ ಹೇಳಿದ್ದಾರೆ. ಅವರು ಇನ್ನೂ ಒಂದು ಹಂತ ಮುಂದುವರೆದು, “ಸಂಗೀತ ನನಗೆ ಬಂದಿತು ; ನಾನು ಸಂಗೀತವನ್ನು ಕಲಿತದ್ದಲ್ಲ. ಸಂಗೀತವೇ ನನ್ನ ಮೂಲಕ ಹಾಡುತ್ತದೆ. ನನಗಾವ ಸಂಗೀತವೂ ಗೊತ್ತಿಲ್ಲ, ಆದರೆ ಸಂಗೀತಕ್ಕೆ ಮಾತ್ರ ನಾನು ಚೆನ್ನಾಗಿ ಗೊತ್ತು.” ಎನ್ನುತ್ತಾರೆ. ಹಾಗಾಗಿಯೇ ಅವರು ತಾವು ಸಂಗೀತಕ್ಕೆ ಒಂದು ಮಾಧ್ಯಮ ಎಂದು ಭಾವಿಸಿದರೇ ಹೊರತು ಸಂಗೀತ ತಮಗೆ ಒಂದು ಮಾಧ್ಯಮ ಎಂದು ಹೇಳಿಕೊಂಡಿಲ್ಲ. ಬಾಲಮುರಳಿ ಜಾಣ್ಮೆಯ ಮನುಷ್ಯರೂ ಹೌದು. ಅವರ ಕಾಣ್ಮೆ ಎಷ್ಟು ದೊಡ್ಡದೋ ಅವರ ಜಾಣ್ಮೆ ಅದಕ್ಕಿಂತಲೂ ಏನೇನೂ ಕಡಿಮೆಯಿಲ್ಲದ್ದು. ಹೀಗೆ ಕಂಡಾಗ, ನಮ್ರತೆಗಿಂತ ಅವರಲ್ಲಿ ಇದ್ದದ್ದು ಅಹಂಭಾವವೇ, ಅಭಿಮಾನವೇ. ಆದರೆ ಸಮರ್ಥರಾದ ಕಾರಣ ಆ ಅಹಂಕಾರವೂ ಒಂದು ಆಭರಣವಾಗಿದೆ. ಆದರೆ ನಿರಾಭರಣ ಮತ್ತೂ ಶೋಭೆ. ಅದನ್ನೇಕೋ ದಕ್ಕಿಸಿಕೊಳ್ಳಲಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಎಂ.ಎಸ್.ಸುಬ್ಬುಲಕ್ಷ್ಮಿ ಅವರಂಥವರು ನಿರಾಭರಣಸೌಂದರ್ಯದ ದೇದೀಪ್ಯಮಾನಸ್ಥಾನಕ್ಕೆ ಮುಟ್ಟುತ್ತಾರೆ. ಈ ಅರ್ಥದಲ್ಲಿ ಆನಂದ ಕುಮಾರಸ್ವಾಮಿ ಅವರು ಕಲೆಯನ್ನು ‘divinity enshrined’ ಎಂದು ಕರೆದಿರುವುದು ಸತ್ಯವಾಗುತ್ತದೆ, ಹೆಚ್ಚು ಸಂಗತವಾಗುತ್ತದೆ. ರಸ ಎಂದರೆ ಅದೇ ಆಗಿದೆ. ಸ್ವಸ್ವರೂಪದರ್ಶನವೇ ರಸಸ್ವಸ್ವರೂಪದರ್ಶನದಲ್ಲಿ ಸ್ಮಯವಿಲ್ಲದ ವಿಸ್ಮಯ ಮಾತ್ರ ಇರುತ್ತದೆ. ಅಹಂಕಾರವನ್ನು ಕಳೆದುಕೊಂಡು, ಅಭಿಮಾನವನ್ನು ನಿರಾಕರಿಸಿಕೊಂಡು ತನ್ನದಲ್ಲದ್ದು ಯಾವುದೂ ಇಲ್ಲ ಎಂಬ ಅನನ್ಯಸ್ಥಿತಿಯನ್ನು ಪಡೆಯುವುದಾಗುತ್ತದೆ. ಆ ಹಂತಕ್ಕೆ ಬಾಲಮುರಳಿ ಕೆಲವೊಮ್ಮೆ ಏರುತ್ತಾರೆ, ಮತ್ತೆ ಕೆಲವೊಮ್ಮೆ ಜಾರುತ್ತಾರೆ. ಈ ದೃಷ್ಟಿಯಿಂದ ಕಂಡಾಗ, ಪ್ರತಿಭೆ, ಪಾಂಡಿತ್ಯ, ವ್ಯುತ್ಪತ್ತಿಗಳೆಲ್ಲವೂ ಕೂಡ ಸಮಪಾಕಗೊಂಡಾಗಲೂ “ಆವುದೋ ವಿವರವೊಂದಿರದೆ ಪೂರ್ಣವದಲ್ಲ ; ಆ ವಿವರ ನಿನ್ನೊಳಗೆ ಮಂಕುತಿಮ್ಮ” ಎಂಬ ಡಿ.ವಿ.ಜಿ. ಅವರ ಮಾತು ನೆನಪಾಗದಿರದು. ಹೀಗೆಂದಮಾತ್ರಕ್ಕೆ ಬಾಲಮುರಳಿಯವರ ಸಾಧನೆಯನ್ನು ಯಾವುದೇ ದೃಷ್ಟಿಯಿಂದ ಉಪೇಕ್ಷಿಸಿದಂತಲ್ಲ. ಅವರ ಸಾಧನಸಂಪನ್ಮೂಲ ಬಹಳ ಮಿಗಿಲಾದದ್ದು.

ಬಾಲಮುರಳಿ ಅವರು ಗುರುಮುಖೇನ ಪಡೆದದ್ದು ಸ್ವಲ್ಪವೇ. ಅವರ ಪ್ರತಿಭೆ ಅಪಾರವಾದದ್ದು. ಪ್ರಯತ್ನ ಅಲ್ಪದಿಂದಲೇ ಆಗಿದ್ದಿರಬಹುದು. ಆದರೆ ಆ ಪ್ರತಿಭೆಗೆ ಒಂದು ಸ್ವಲ್ಪವಾದರೂ ಅಭ್ಯಾಸವಿತ್ತು, ಮತ್ತು ಸಾಕಷ್ಟು ವ್ಯುತ್ಪತ್ತಿ ಇತ್ತು ಎಂಬುದನ್ನು ಮರೆಯುವಂತಿಲ್ಲ.  ಬಾಲಮುರಳಿಯವರೂ ಸೇರಿದಂತೆ ಹಲವು ಅಭಿಜಾತಕಲಾವಿದರು ತಮ್ಮ ನಿರ್ಮಾಣಕಾಲವನ್ನು ಲೋಕಕ್ಕೆ ತೆರೆದಿಡುವುದಿಲ್ಲ. ಎಂಥ ಮಹಾವೃಕ್ಷಕ್ಕೂ ಮೊಳಕೆಯ ಸ್ಥಿತಿಯೊಂದು ಇತ್ತೆಂಬುದನ್ನು ಒಪ್ಪಿಕೊಂಡರೆ ಎಲ್ಲಿ ತಮ್ಮ ಅಭಿಮಾನಕ್ಕೆ ಅಡ್ಡವಾದೀತೋ ಎಂಬಂತೆ ಕೆಲವೊಮ್ಮೆ ಮಾಡುವುದುಂಟು. ಅಸಾಧಾರಣಸಂದರ್ಭದಲ್ಲಿ ಮಹಾವೃಕ್ಷವೇ ಸ್ವಯಂಭುವಾಗಿ  ರೂಪಗೊಳ್ಳುವುದೂ ಸಾಧ್ಯ. ತಾವು ಆಗರ್ಭಜೀವನ್ಮುಕ್ತರಾಗಿದ್ದರೂ ಲೋಕಹಿತದಿಂದಾಗಿ ಜೀವನ್ಮುಕ್ತಿಯ ಸೋಪಾನವಾಗಿ ಸಾಧನಸಂಪತ್ತಿ ಎಂಥದ್ದೆಂಬುವುದನ್ನು ಶಂಕರಭಗವತ್ಪಾದರಂಥವರು ವಿವರಿಸಿರುವುದನ್ನು ಕಂಡಾಗ ಸಿದ್ಧನಾದ ಒಬ್ಬ ಮಹಾಕಲಾವಿದನು ಸಾಧ್ಯರಾದ ಕಲಾವಿದರಿಗೆ, ಕಲಾಸಾಧಕರಿಗೆ ಏನನ್ನು ತೋರ್ಪಡಿಸಬೇಕೋ ಅದನ್ನು ತಾನೇ ಗ್ರಹಿಸಿ ಅಥವಾ ಊಹಿಸಿ ಹೇಳುವುದೇನೂ ಕಷ್ಟವಲ್ಲ ಎಂಬುದು ಸ್ಪಷ್ಟವಾಗದಿರದು. ಆ ಕಷ್ಟವನ್ನು ಇವರು ತೆಗೆದುಕೊಳ್ಳಲಿಲ್ಲ. ಅದು ಸಮಾಜಕ್ಕಾದ ನಷ್ಟ. ಅವರನ್ನು ಕಂಡು ಬರಿದೇ ಬೆರಗಾಗುವುದು ಉಳಿಯಿತು, ಅವರ ದಾರಿಯಲ್ಲಿ ನಡೆಯುವುದು ಅಳಿಯಿತು. ಹೀಗೆ, ಪರಂಪರೆಯ ಅನುಸ್ಯೂತತೆಯ ದೃಷ್ಟಿಯಿಂದ, ತಾವು ನಡೆದ ಹಾದಿಯನ್ನು ಬಿಚ್ಚಿ ತೋರಿಸಿದಾಗ - ಅವರ ದಾರಿಯಲ್ಲಿ ನಡೆಯಲು ಯಾರಿಗೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ - ಆದರೆ  ಆದವರಿಗೆ ಬಹಳ ದೊಡ್ಡ ಬೆಲೆ, ನೆಲೆ ಸಿಗುತ್ತವೆ. ಇದನ್ನು ನಮ್ಮ ಪರಂಪರೆ ಸದಾ ಭಾವಿಸಿದೆ. ನಮ್ಮ ಶಾಸ್ತ್ರಕಾರರೆಲ್ಲ - ತಾವು ಸಿದ್ಧರಾದರೂ ಅಥವಾ ಸಾಧ್ಯರಾದರೂ - ಯಾರೂ ಕೂಡ ಈ ಸಾಧನೆಯ ಪ್ರಕ್ರಿಯೆಯನ್ನು ಉಪೇಕ್ಷಿಸಿಲ್ಲ. ಯಾವುದೇ ವಿದ್ಯಾಸ್ಥಾನದ ಲಕ್ಷಣ ಇಲ್ಲುಂಟು. ಆ ಲಕ್ಷಣವನ್ನೂ ಅವರು ಪೂರ್ಣಮಾಡಿದ್ದಲ್ಲಿ ಅದಕ್ಕೆ ಇನ್ನೂ ಹೆಚ್ಚಿನ ಅರ್ಥ ಬರುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಂಥ ಕಲಾಸ್ವಾದಕರಿಗೆ ಹೆಚ್ಚಿನ ಪರಮಾರ್ಥ ಸಿಗುತ್ತಿತ್ತೆನ್ನಿಸುತ್ತದೆ. ಆದರೆ ಇಲ್ಲದಿರುವುದಕ್ಕಾಗಿ ಮನಸ್ಸನ್ನು ಕ್ಷೋಭೆ ಮಾಡಿಕೊಂಡು ಇರುವುದನ್ನು ಉಪೇಕ್ಷಿಸುವುದು ಅನ್ಯಾಯ. ಡಿ.ವಿ.ಜಿ. ಅವರು ಹೇಳುತ್ತಾರೆ, “ಯಾವ ಹೂವು ಅರಳುವುದಕ್ಕೆ ಯಾವ ಗೊಬ್ಬರ ಬೇಕೋ” ಎಂದು. ಯಾವ ದ್ರವ್ಯಯನ್ನು ಹಾಕಿದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಬರುತ್ತದೆಯೋ ಎಂದು. ಬಾಲಮುರಳಿ ಅವರು ಈ ಪ್ರಕ್ರಿಯೆಯ ಕಡೆ ಹೋಗಿದ್ದರೆ ಅತ್ಯದ್ಭುತವಾದ ಫಲಗಳು ನಮ್ಮಿಂದ ದೂರವಾಗುತ್ತಿದ್ದವೋ ಏನೋ ಗೊತ್ತಿಲ್ಲ. ಇದೂ ಒಂದು ಸಮಾಧಾನ. ಮತ್ತೆ  ಡಿ.ವಿ.ಜಿ. ಅವರ ಮಾತಿನಲ್ಲಿ ಹೇಳುವುದಾದರೆ, “ಇದೂ ಸಮಾಧಾನ, ಆದರೆ ಸಂತೋಷವಿಲ್ಲದ ಸಮಾಧಾನ.” ಆದರೆ ಅಸಂತೋಷ ಮಹಾವಾಗ್ಗೆಯಕಾರನ ಸ್ವರಸಿದ್ಧಿಯನ್ನು ಆಸ್ವಾದನೆ ಮಾಡುವ ಸೌಖ್ಯವನ್ನು ನಿರಾಕರಿಸುವ ಮಟ್ಟದ್ದಾಗಲಿ, ಅದನ್ನು ಮರೆಯುವ ಮಟ್ಟದ್ದಾಗಲಿ ಅಲ್ಲ ಎನ್ನುವುದೇ ನಮ್ಮ ಭಾಗಧೇಯ.

ಬಾಲಮುರಳಿ ಅವರು ಪೂರ್ವಪ್ರಸಿದ್ಧವಾದ ಕೃತಿಗಳನ್ನು ಹಾಡಿದ್ದುಂಟು, ರಾಗಗಳನ್ನು ಹಾಡಿ ವಿಸ್ತರಿಸಿದ್ದುಂಟು. ಹಾಗೆ ಮಾಡುವಲ್ಲಿ ಒಂದು ನಾವೀನ್ಯವನ್ನು ತಂದುಕೊಡುತ್ತಿದ್ದರು. ಇದು ಅವರ ಮಹಾಸಿದ್ಧಿ. ಅವರ ಸಿದ್ಧಿಗಳು ಅನೇಕ ; ಅದರೊಳಗೆ ಇದೂ ಒಂದು. ಪರಿಚಿತವನ್ನು ಅನೂಹ್ಯವಾದ ರೀತಿಯಲ್ಲಿ ಅಪರಿಚಿತ ಮಾಡಿ, ಆದರೆ ಅಪರಿಚಿತತೆಯ ವೈಷಮ್ಯವನ್ನು ತರದೆ ಅಪರಿಚಿತತೆಯಲ್ಲಿ ಆನಂದವನ್ನು ತರುತ್ತಿದ್ದರು. ತನ್ಮೂಲಕವಾಗಿ ಪರಿಚತತೆಯಿಂದ ಉಂಟಾಗುವ ಉಪೇಕ್ಷೆಯನ್ನು ಕಡೆಗಣಿಸುವಂತೆ ಮಾಡಿ ಆ ರಾಗಗಳಿಗೆ, ಆ ಕೃತಿಗಳಿಗೆ ಪುನರ್ಜನ್ಮ ನೀಡುತ್ತಿದ್ದರು, ಹೊಸ ಬದುಕನ್ನೇ ನೀಡುತ್ತಿದ್ದರು. ಈ ಅರ್ಥದಲ್ಲಿ ಅವರ ಕಟ್ಟಾ ವಿರೋಧಿಗಳು ಗಮನಿಸಬೇಕಾದ ಅಂಶವೆಂದರೆ - ಆ ರಾಗಗಳಿಗೆ ಇನ್ನೂ ಹಲವು ಮುಖಗಳಿವೆ, ಆ ಕೃತಿಗಳಿಗೆ ಮತ್ತೂ ಹತ್ತೆಂಟು ದಿಕ್ಕುಂಟು ಎಂಬುದನ್ನು ತೋರಿಸಿಕೊಟ್ಟವರಾದ್ದರಿಂದ ಒಪ್ಪಲಿ ಬಿಡಲಿ, ಅವರ ಮಾರ್ಗದಲ್ಲಿ ಸತ್ತ್ವ ಇದೆ ಎಂಬುದನ್ನು ಮಾತ್ರ ಗುರುತಿಸಲೇಬೇಕು. ಪ್ರತ್ಯಭಿಜ್ಞಾನ ಬಹಳ ಮುಖ್ಯ. ಈ ರೀತಿಯಲ್ಲಿ ಅಪರಿಚಿತವಾದ, ಅಜಾತವಾದ, ಅಚಿಂತ್ಯವಾದ ಎಷ್ಟೋ ರಾಗಗಳಿಗೆ - ಮೂರು ಸ್ವರಗಳ, ನಾಲ್ಕು ಸ್ವರಗಳ ರಾಗಗಳಿಗೆ, ಯಾವುದನ್ನು ಶಾಸ್ತ್ರಕಾರರು ಸ್ವರಾಂತರವೇ ಮೊದಲಾಗಿ ಹೆಸರಿಸಿ, ರಾಗಗಳಾಗಿಯೇ ಗುರುತಿಸಲಿಲ್ಲವೋ ಅಂಥವಕ್ಕೂ ರಂಜನೆಯನ್ನು ತಂದುಕೊಟ್ಟರು. ರಂಜನೆಯೇ ದೊಡ್ಡ ಪರಿಚಯವಲ್ಲವೇ? ಅದಕ್ಕಿಂತ ಮಿಗಿಲಾದ ಆತ್ಮೀಯತೆ ಏನುಂಟು? ಹಾಗಾಗಿ ಹೊಸ ಸ್ವರಸಂಗತಿಗಳಿಗೆ ಅವರು ಆತ್ಮೀಯತೆಯನ್ನು, ಪ್ರೀತಿಯನ್ನು ತಂದುಕೊಟ್ಟರು. ಪ್ರೀತಿಗಿಂತ ಮಿಗಿಲಾದ ರಸವಿಲ್ಲವಷ್ಟೆ. ಹೀಗೆ ಕಂಡಾಗ ಪರಿಚಿತದಲ್ಲಿ ಅಪರಿಚಿತದ ಸ್ವಾರಸ್ಯವನ್ನೂ ಅಪರಿಚಿತದಲ್ಲಿ ಪರಿಚಿತದ ಸೌಲಭ್ಯವನ್ನೂ ತಂದುಕೊಡುವ ಮೂಲಕ ಸಂಗೀತದ ಎಷ್ಟೋ ದ್ವೀಪಗಳಿಗೆ ಅವರು ಶಾಶ್ವತವಾದ ಸ್ವರಸುವರ್ಣಸೇತುವೆಗಳನ್ನು ಕಟ್ಟಿದರು. ಇದು ಅವರ ದೊಡ್ಡ ಸಾಧನೆಯೆಂದು ನನ್ನ ಭಾವನೆ.

 

ಅವರು ಹೊಸ ರಾಗಗಳನ್ನೂ ರಚನೆಗಳನ್ನೂ ತಾಳಗಳನ್ನೂ ಮಾಡಿದರು. ಅವುಗಳಲ್ಲಿ ಗೆಲ್ಲುವಂಥವೂ ಸೋಲುವಂಥವೂ ಇವೆಯಾದರೂ ಸಲ್ಲುವಂಥವುಗಳ ಸಂಖ್ಯೆ ಹೆಚ್ಚು. ಇದಕ್ಕೆ ರಸಿಕಜಗತ್ತೇ ಸಾಕ್ಷಿಯಾಗಿದೆ. ಅವರ ಅನೇಕ ಸುಂದರಪೂರ್ವಪ್ರಸಿದ್ಧರಾಗಗಳ ರಚನೆಗಳನ್ನಾಗಲಿ ಅಥವಾ ಅವರಿಂದಲೇ ಉತ್ಸೃಷ್ಟವಾದ ಹೊಸ ರಾಗಗಳ ಸ್ವಾರಸ್ಯವನ್ನಾಗಲಿ ರಸಿಕಜಗತ್ತು ಅಂಗೀಕರಿಸಿದೆ. ಅಷ್ಟು ಮಾತ್ರವಲ್ಲ, ಶಾಸ್ತ್ರೀಯಸಂಗೀತದ ವಲಯವಲ್ಲದೆ, ಸುಗಮಸಂಗೀತ ಅಥವಾ ಲಲಿತಸಂಗೀತದಲ್ಲಿ, ಮತ್ತು ಯಾವುದನ್ನು ನಾವು ಅನ್ವಿತಸಂಗೀತ (functional music) ಎನ್ನುತ್ತೇವೆ ಅಲ್ಲಿ ಕೂಡ ಅವರ ರಚನೆಗಳ ಬಳಕೆಯಾಗಿದೆ. ಆದರೆ ಅವರು ಆಸ್ಥೆಯಿಂದ ರೂಪಿಸಿದ್ದ ಕೆಲವೊಂದು ಲೋಕಕ್ಕೆ ಆಪ್ಯಾಯನವಾಗಲಿಲ್ಲ. ತ್ರಿಮುಖೀ-ಪಂಚಮುಖೀ-ಸಪ್ತಮುಖಿಗಳೇ ಮುಂತಾದ ತಾಳವಿನ್ಯಾಸ ಇದರ ಜ್ವಲಂತ ಉದಾಹರಣೆ (ಈ ಸಂದರ್ಭದಲ್ಲಿಯೇ ಅವರ ಸಂಗೀತಚಿಕಿತ್ಸೆಯ ಭ್ರಾಂತಿವಿಲಾಸದ ಬಗೆಗೂ ಹೇಳಬೇಕಾದರೆ ಅದೊಬ್ಬ ಮಹಾಕಲಾವಿದನ ಮೈಮರೆವು ಅಥವಾ ಕಲೆಯಡವು ಎನ್ನಬೇಕು). ತಾಳವಿನ್ಯಾಸದ ಬೆಳವಣಿಗೆಯೇ ಎಷ್ಟೋ ಮಟ್ಟಿಗೆ ಕೃತಕವೆಂದು ಪರಮಾರ್ಥತಃ ತಿಳಿದವರಿಗೆ, ಮೂಲಭೂತವಾದ ಗತಿಗಳಿಗಿಂತ ಭಿನ್ನವಾಗಿ ಯಾವ ತಾಳಗಳೂ ಸಹೃದಯನ ಕಿವಿಗೆ ಮುಟ್ಟುವುದಿಲ್ಲ ಎಂದು ಗೊತ್ತಿದ್ದವರಿಗೆ ಇದೆಲ್ಲ ಕೇವಲ ಕೃತಕಪ್ರಯತ್ನಸಾಧ್ಯವಾದ ವಿರಚನೆಯೆಂದು ಅನ್ನಿಸದಿರದು. ಹಾಗಾಗಿ ಅವು ನಿಲ್ಲಲಿಲ್ಲ ; ನಿಲ್ಲದ್ದಕ್ಕಾಗಿ ಯಾರೂ ದುಃಖಿಸಬೇಕಿಲ್ಲ. ಆದರೆ ಅವರು ರಾಗದಲ್ಲಿ ಮಾಡಿದ ಸಾಧನೆ ಬಹಳ ದೊಡ್ಡದು. ವಸ್ತುತಃ ಭಾರತೀಯಸಂಗೀತವು ತಾಳಕ್ಕಿಂತಲೂ ರಾಗದಲ್ಲಿಯೇ ನೆಲೆನಿಂತಿರುವುದು. ಏಕೆಂದರೆ, ತಾಳವಿಲ್ಲದೆಯೂ ರಾಗ ನಿಲ್ಲುತ್ತದೆ, ಆದರೆ ರಾಗವಿಲ್ಲದೆ ತಾಳ ಬಹುಕಾಲ ನಿಲ್ಲುವಂಥದ್ದಲ್ಲ. ಇದು ನಮಗೆ ಸ್ಪಷ್ಟವಾಗಿರುವುದರಿಂದ, ಬಾಲಮುರಳಿ ಅವರ ರಾಗಸಿದ್ಧಿ ನಿಜವಾಗಿ ಸರ್ವಜನರ ಅನುರಾಗಸಿದ್ಧಿ. ಇಷ್ಟಾಗಿಯೂ ಅವರ ತಾಳಸಿದ್ಧಿ ಸೌಖ್ಯಪ್ರದವಲ್ಲವೆಂದಲ್ಲ. ನಿಜವಾಗಿಯೂ ನಿಶ್ಶಬ್ದಕ್ರಿಯೆಯ ಮೂಲಕ ತಾಳವನ್ನು ಶ್ರುತಿಹಿತವಾಗಿ ಮಾಡಿದವರು ಅವರು. ತಾಳದ ಜೋರು ಇಲ್ಲದೆ ಲಯಸೌಖ್ಯವನ್ನು ಸಾಧಿಸಿದವರು ಅವರಂತೆ ಹಲವರಿಲ್ಲ.    

ಬಾಲಮುರಳಿ ಅವರು ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ - ಅದು ಗಾನವಿರಬಹುದು ಅಥವಾ ವಾದನವಿರಬಹುದು ; ವಾದನದಲ್ಲಿ ಶ್ರುತಿವಾದ್ಯವಿರಬಹುದು, ಲಯವಾದ್ಯವಿರಬಹುದು, ಇನ್ನು ಗಾಯನದಲ್ಲಿ ಶುದ್ಧಶಾಸ್ತ್ರೀಯ, ಲಲಿತ, ಚಲನಚಿತ್ರವೇ ಮೊದಲಾದ ಹಲವು ಪ್ರಕಾರಗಳಲ್ಲಿ - ಅನನ್ಯವಾಗಿ ನಿಂತವರು. ಹಿಂದೂಸ್ಥಾನಿ ಸಂಗೀತಗಾರರ ಜೊತೆಗೆ ಜುಗಲ್ಬಂದಿ ಮಾಡಿ ತಮ್ಮದೇ ಆದ ಛಾಪನ್ನು ಒತ್ತಿದವರು. ಸಾಮಾನ್ಯವಾಗಿ ಉತ್ತರಭಾರತೀಯರಿಗೆ ದಾಕ್ಷಿಣಾತ್ಯಸಂಗೀತಗಾರರ ಬಗೆಗೆ ಒಂದು ವಿಧವಾದ ಉಪೇಕ್ಷೆ. ಇವರಿಗೆ ಯಾವ ಶ್ರುತಿಯಿದೆ? ಯಾವ ಸ್ವರಸೌಖ್ಯವಿದೆ? ಯಾವ ನಿರಾಲಂಬವಾದ ರಾಗವಿನ್ಯಾಸದ ಶಕ್ತಿಯುಂಟು? ಎಂಬುದಾಗಿ. ಇವುಗಳಲ್ಲಿ ಒಂದಷ್ಟು ಸತ್ಯ ಒಂದಷ್ಟು ಅಸತ್ಯಗಳು ಇದ್ದಿರಬಹುದು. ಅದೇ ರೀತಿಯ ವೈಷಮ್ಯವೋ ವಿರೋಧಭಾವವೋ ಉಪೇಕ್ಷೆಯೋ ದಾಕ್ಷಿಣಾತ್ಯರಿಗೆ ಉತ್ತರಭಾರತೀಯರ ಬಗೆಗೆ ಇದೆ. ಅವರದ್ದು ಪ್ರಬಂಧಾಶ್ರಿತವಾದ ಸಂಗೀತವಲ್ಲ, ತಾಳನಿಷ್ಕರ್ಷೆಯಿರುವ ಸಂಗೀತವಲ್ಲ, ಅವರಲ್ಲಿ ವ್ಯವಸ್ಥಿತವಾದ ಲಯಕ್ಕೆ ಅವಕಾಶವಿಲ್ಲ ಎಂಬುದಾಗಿ. ಆಗ್ರಹಗಳಿಗೆ ಕಾರಣ ಬೇಕಿಲ್ಲ. ಆಗ್ರಹ ಅವಿದ್ಯಾಮೂಲವಾದ್ದರಿಂದ, ಅವಿದ್ಯೆಯೇ ಎಲ್ಲ ಕಾರ್ಯ-ಕಾರಣಗಳಿಗೂ ಮೂಲವಾದ್ದರಿಂದ ಅದಕ್ಕೆ ಕಾರಣ ಹುಡುಕುವುದು ಒಂದು ಹುಚ್ಚುಸಾಹಸ. ಇಷ್ಟನ್ನು ಮಾತ್ರ ಹೇಳಬಹುದು - ಉತ್ತರಭಾರತದ ಸಂಗೀತಗಾರರೆಲ್ಲ ಇವರೊಬ್ಬರನ್ನು ಮಾತ್ರ ಪ್ರಶ್ನಾತೀತವಾಗಿ ಗೌರವದಿಂದ ಕಾಣುತ್ತಿದ್ದರು. ಒಂದಿಷ್ಟು ಭಯವನ್ನೂ ಪಡುತ್ತಿದ್ದರೆಂದರೆ ಸರಿಯಾದೀತು. ಕಾರಣ ಏನೆಂದರೆ, ಅವರೇನು ಮಾಡುತ್ತಾರೊ ಅದೆಲ್ಲವನ್ನೂ ಇವರು ಮಾಡಬಲ್ಲವರಾಗಿದ್ದರು, ಆದರೆ ಇವರು ಮಾಡಿದ್ದನ್ನೆಲ್ಲ ಅವರು ಮಾಡಲಾಗುತ್ತಿರಲಿಲ್ಲ. ಇವರು ಸಂಗೀತವನ್ನು ಯಾವುದೇ ಸೋಪಾಧಿಕವಾದ, ಸವಿಶಿಷ್ಟವಾದ ಚೌಕಟ್ಟಿನಲ್ಲಿ ಕಾಣದೆ ಶ್ರುತಿಯ ಮಟ್ಟದಲ್ಲಿ - ಕೇವಲ ಆಹಾತನಾದ, ಮತ್ತೂ ಮುಂದುವರೆದು ಕೇವಲ ಅನಾಹತನಾದದ ಮಟ್ಟದಲ್ಲಿ ಕೇಳಬಲ್ಲ ಸ್ಥೈರ್ಯವನ್ನು ಉಳಿಸಿಕೊಂಡವರು. ಮತ್ತು ಈ ಸ್ಥೈರ್ಯ ತನಗುಂಟು ಎಂಬುದನ್ನು ನಗಾರಿ ಬಾರಿಸಿ ಲೋಕಕ್ಕೆಲ್ಲ ಸಾಬೀತು ಮಾಡಿಕೊಟ್ಟವರು. ಎಷ್ಟೋ ಜನರಿಗೆ ಪ್ರತಿಭೆಯಿದ್ದರೂ ಈ ಆತ್ಮಪ್ರತ್ಯಯ ಇರುವುದಿಲ್ಲ. ಈ ದೃಷ್ಟಿಯಿಂದ ಕಂಡರೆ ಶ್ರೀಹರ್ಷ, ಪಂಡಿತರಾಜ ಜಗನ್ನಾಥ, ಆಂಧ್ರದ ಕವಿಸಾರ್ವಭೌಮ ಶ್ರೀನಾಥ - ಇಂಥವರ ಸಾಲಿಗೆ ಸಲ್ಲುವಂಥವರು ಅವರು. ಎಲ್ಲಿಯೂ ಎಂದೂ ಕೂಡ ತಮ್ಮ ವ್ಯಕ್ತಿತ್ವಕ್ಕೆ, ತಮ್ಮ ಅಸ್ಮಿತೆಗೆ ಚ್ಯುತಿಯಾಗದಂತೆ ನೋಡಿಕೊಳ್ಳುತ್ತಿದ್ದರು. ಇದು ಒಂದು ಗುಣವೂ ಹೌದು ದೋಷವೂ ಹೌದೆಂಬಂತೆ ತೋರುತ್ತಿತ್ತು. ರಸದ ಮಟ್ಟಕ್ಕೆ ಮುಟ್ಟಿದಾಗ ಎಲ್ಲ ಭಾವಗಳೂ ಆದರಣೀಯವಾಗುತ್ತವೆ. ಅರ್ಥದಲ್ಲಿ ಅವರ ಪಾಂಡಿತ್ಯವೀರರಸದ ಮಟ್ಟಕ್ಕೆ ವೇದಿಕೆಯ ಮೇಲೆ ಮುಟ್ಟುತ್ತಿತ್ತು. ವೇದಿಕೆಯ ಆಚೆಯ ಅವರ ಬದುಕು ಎಚ್ಚರಿಕೆಯೇ ಹೊರತು ಸ್ಫೂರ್ತಿಯಾಗಲಾರದೇನೋ.

ಬಾಲಮುರಳಿ ಅವರಲ್ಲಿದ್ದ ಅತ್ಯದ್ಭುತವಾದ ಪ್ರಸಂಗಾವಧಾನ ತುಂಬ ಆಕರ್ಷಕವಾಗಿರುತ್ತಿತ್ತು. ಪಕ್ಕವಾದ್ಯವರನ್ನು ನಡೆಸುಕೊಳ್ಳುವುದಾಗಲಿ, ಸಹಕಲಾವಿದರೊಡನೆ ವರ್ತಿಸುವುದಾಗಲಿ ಎಲ್ಲದರಲ್ಲಿಯೂ ವಿಶ್ವಾಸ ಮತ್ತು ಸ್ನೇಹದ ಅಧಿಕಾರ ಎದ್ದುಕಾಣುತ್ತಿತ್ತು. ನಾನು ನಿನಗಿಂತ ಉತ್ತಮ, ಅದು ನಿನಗೇ ಗೊತ್ತಿದೆಯಲ್ಲವೇ ಎಂದು ಹೇಳುವಂಥ ಬಗೆ. ಹೀಗೆ ಸೂಜಿಮಲ್ಲಿಗೆಯಂತೆ ಅವರ ಮೊನಚುತನ. ಆ ಮೊನಚು ಘಾಸಿಮಾಡುವಂಥದ್ದಲ್ಲ. ಅವರು ಎಂದಿಗೂ ರಸಿಕರೊಡನೆ ಸ್ನೇಹದಿಂದ ನಡೆದವರು. ಅವರ ವರ್ತನೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರು ಈರ್ಷ್ಯಾಳುಗಳಾಗಿದ್ದಿರಬೇಕು. ಅಂಥವರಿಗೆ ಮಾತ್ರ ಇವರ ವ್ಯಂಗ್ಯ ಮತ್ತು ಚಾಟೂಕ್ತಿಗಳು ನೋವುಂಟುಮಾಡಿರುತ್ತವೆ. ಅವರ ಸಂಗೀತಕ್ಕೆ ಒಲಿದವರಿಗೆ ಸರ್ವಥಾ ಅಲ್ಲ. ಇವರು ತಮ್ಮ ಹದಿಹರೆಯದಲ್ಲಿಯೇ ವಾಗ್ಗೇಯಕಾರರಾಗಿ ಮೇಳಕರ್ತಗಳೆಲ್ಲದರಲ್ಲಿಯೂ ರಚನೆ ಮಾಡಿದರು. ಅವರು ಹೇಳುವುದುಂಟು, “ಇವೆಲ್ಲವೂ ನನಗೆ ಅಯತ್ನವಾಗಿ ಬಂದವು” ಎಂದು. ಆದರೆ ಆ ಮಾತಿನ ಅರ್ಥ - ಪ್ರಯತ್ನವಿದೆ, ಆದರೆ ತಾನದನ್ನು ಗಮನಿಸಿಲ್ಲ ಎಂಬಂತೆ ತೋರುತ್ತದೆ. ಎಷ್ಟೋ ಬಾರಿ ನಮ್ಮ ಪ್ರೀತಿಯ ಸ್ಥಾನದಲ್ಲಿ ಮಾಡುವ ಪ್ರಯತ್ನ ನಮ್ಮರಿವಿಗೆ ಬರುವುದಿಲ್ಲ. ನಾವು ಎಷ್ಟೋ ಕಷ್ಟಗಳನ್ನು ಕೈಗೊಂಡಿರುತ್ತೇವೆ, ಆದರೆ ಸ್ವತಾವಿಸ್ಮೃತಿಯಿಂದ ಕಷ್ಟ ನಮ್ಮ ಅರಿವಿಗೆ ಬರುವುದಿಲ್ಲ. ಈ ದೃಷ್ಟಿಯಿಂದ ಬಾಲಮುರಳಿ ಅವರು “ನನಗೆ ಅವು ತಾವಾಗಿ ಬಂದವು” ಎಂದು ಹೇಳಿರಬೇಕು. “ಇಷ್ಟೇ ವಸ್ತುನ್ಯುಪಚಿತರಸಾಃ ಪ್ರೇಮರಾಶೀಭವಂತಿ” ಎಂಬ ಕಾಳಿದಾಸನ ಮಾತಿನಂತೆ ಪ್ರಯತ್ನ ನಮ್ಮ ಮನೋಧರ್ಮದ್ದಾದಾಗ ಅದೂ ಒಂದು ಸೌಖ್ಯದ ಭಾಗ, ರಸದ ಭಾಗವಾಗಿರುತ್ತದೆ. ಕಲಾವಿದನ ಕಲಾನಿರ್ಮಾಣ ಕಾಲದ ಆನಂದ ಮಾತ್ರವಲ್ಲದೆ ಕಲಾಸಿದ್ಧತಾಕಾಲವೂ ಆನಂದಪ್ರಾಯವೇ ಹೌದು ಎನ್ನುವುದನ್ನು ನಾವು ನಚ್ಚುವುದಾದರೆ ಈ ಮಾತಿನ ಅರ್ಥ ಹೊಳೆದೀತು. ಅವರು ಮಾತು-ಧಾತುಗಳ ಪ್ರಬುದ್ಧತೆಗಾಗಿ ಪರಿಶ್ರಮಿಸಿರಬೇಕು. ಅದರಲ್ಲಿಯೂ ಮಾತುವಿಗೆ ಹೆಚ್ಚಾಗಿ ಪರಿಶ್ರಮಿಸಿರಬೇಕು ಎಂದು ತೋರುತ್ತದೆ. ಏಕೆಂದರೆ ಸಾಹಿತ್ಯ ವ್ಯಾಸಂಗವಿಲ್ಲದೆ ಬಾರದು. ಕಲ್ಪನೆಯು ಬರಬಹುದಾದರೂ ಶಿಲ್ಪನೆಯು ಬರುವುದಿಲ್ಲ. ಶಿಲ್ಪನೆ ಬರಬೇಕೆಂದರೆ ವಾಗರ್ಥವ್ಯವಸಾಯ ಮಾಡಬೇಕು. ಅವರು ತಮ್ಮನ್ನು ಕವಿ ಎಂದು ಹಲವು ಬಾರಿ ಹೇಳಿಕೊಂಡದ್ದುಂಟು. ಅವರ ಕವಿತ್ವ ಗೇಯಕವಿಗಳ ಮಟ್ಟದ್ದೇ ಹೊರತು ಅದಕ್ಕಿಂತ ಮೇಲ್ಮಟ್ಟದ್ದಲ್ಲ. ರಾಳ್ಲಪಲ್ಲಿ ಅನಂತಕೃಷ್ಣಶರ್ಮರಂಥ ಮಹಾವಿದ್ವಾಂಸರು ತ್ಯಾಗರಾಜರನ್ನು ವಿಮರ್ಶೆ ಮಾಡುವಾಗ, “ತ್ಯಾಗರಾಜರನ್ನು ನಾವು ಆಶ್ರಯಿಸಬೇಕಾದದ್ದು ಗಾನಕ್ಕಲ್ಲದೆ ಭಕ್ತಿಗೂ ಅಲ್ಲ ಸಾಹಿತ್ಯಕ್ಕೂ ಅಲ್ಲ. ಭಕ್ತಿ ನಮ್ಮ ಎಟುಕಿಗೆ ಮೀರಿದ್ದು ; ಸಾಹಿತ್ಯ ನಮಗೆ ಸಾಲದ್ದು”   ಎಂದು ಹೇಳುತ್ತಾರೆ. ಬಾಲಮುರಳಿ ಅವರಲ್ಲಿ ಭಕ್ತಿಯಿತ್ತೋ ಇಲ್ಲವೋ ನಾನರಿಯೆ. ಸಾಹಿತ್ಯಸಿದ್ಧಿಯಂತೂ ಇತ್ತು. ಆದರೆ ಸಂಸ್ಕೃತ, ತೆಲುಗು, ಕನ್ನಡಗಳಂಥ ಹಲವು ಭಾಷೆಗಳ ಮಹಾಕವಿಗಳ ಸಾಹಿತ್ಯವನ್ನು ಆಸ್ವಾದ ಮಾಡಿದ ನಮಗೆ ಅದು ದೊಡ್ಡದಲ್ಲ. ಅವರ ಮಟ್ಟದಲ್ಲಿ ನಮ್ಮ ನಡುವೆ ಇಷ್ಟು ಸಮರ್ಥವಾಗಿ ಮಾತು-ಧಾತುಗಳನ್ನು ಯಾರೂ ಕೂಡಿಸಿಕೊಂಡಿಲ್ಲವೆಂಬುದೂ ನಿಜ. ಅರ್ಥದಲ್ಲಿ ಅವರು ತ್ಯಾಗರಾಜರ ಪರಂಪರೆಯಲ್ಲಿ ಬಂದ ಎಲ್ಲ ವಾಗ್ಗೇಯಕಾರರಿಗಿಂತ ಉತ್ಕೃಷ್ಟವಾದ ವಾಕ್ಕಾರರು, ಒಳ್ಳೆಯ ಗೇಯಕಾರರೂ ಹೌದೆನಿಸುತ್ತದೆ.

ಬಾಲಮುರಳಿ ಅವರ ಪ್ರತಿಭೆಯ ಬಗೆಗೆ ಮಾತನಾಡುವಾಗ ಅವರ ಸಮಕಾಲೀನರನ್ನು ನಾವು ಗಮನಿಸಲೇಬೇಕು. ಏಕೆಂದರೆ ಒಂದು ವಸ್ತುವಿನ ಮೌಲ್ಯಮಾಪನ ನಡೆಯುವುದು ಅದಕ್ಕೆ ಸಂಬಂಧಪಟ್ಟ ವಾತಾವರಣದಲ್ಲಿ. ನಿರ್ವಾತದಲ್ಲಿ ಯಾವ ಮೌಲ್ಯಮಾಪನವೂ ನಡೆಯುವುದಿಲ್ಲ. ಇಂತಿದ್ದರೂ ಎಲ್ಲ ಮೌಲ್ಯಮಾಪನಗಳೂ ಸಾಪೇಕ್ಷವೇ. ಹಾಗಾಗಿ ಬಾಲಮುರಳೀಕೃಷ್ಣರನ್ನು ಕಾಳಿದಾಸನ ಕವಿತೆಗೋ ಕುಮಾರವ್ಯಾಸನ ಕವಿತೆಯೊಂದಿಗೋ ಹೋಲಿಸುವುದು ನಮ್ಮ ಅವಿವೇಕವಾದೀತು. ಅವರನ್ನು ಹೊಲಿಸಬೇಕಾದದ್ದು ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ, ಶ್ಯಾಮಾಶಾಸ್ತ್ರಿ, ಸ್ವಾತಿ ತಿರುನಾಳ್ - ಇಂಥವರ ಜೊತೆಗೆ. ಹಾಗೆ ಕಂಡಾಗ ಇವೆರೆಲ್ಲರಿಗಿಂತ ಹೆಚ್ಚಿನ ಸೌಂದರ್ಯ ಅವರಲ್ಲಿ ಉಂಟು. ಇದಕ್ಕೆ ಕಾರಣವೇನು ಎಂದು ನನಗನಿಸುವುದು ಬಾಲಮುರಳಿ ಅವರು ಸಮೃದ್ಧವಾದ ಸಂಸ್ಕೃತಭಾಷೆಯ ಪರ್ಯಾವರಣವಿದ್ದ ತೆಲುಗಿನ ವಾತಾವರಣದಲ್ಲಿದ್ದುದು. ತಮಿಳು, ಕನ್ನಡ, ಮಲಯಾಳಂ ಮುಂತಾದ ಭಾಷೆಗಳಿಗೂ ಮಿಗಿಲಾಗಿ ತೆಲುಗಿನಲ್ಲಿ ನಾದಮಯತೆ ಉತ್ಕೃಷ್ಟವಾಗಿದೆ. ತೆಲುಗಿನವರು ನಿಸ್ಸಂಕೋಚವಾಗಿ ಸಿನಿಮಾಸಂಗೀತದಲ್ಲಿಯೂ ಬಳಸುವ ಸಮೃದ್ಧಸಾಹಿತ್ಯಸೌಂದರ್ಯದ ಕಾರಣ “ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್” ಎಂದಾಗುವಂತೆ ಇವರಿಗೆ ಆ ಸಿದ್ಧಿ ಬಂದಿತು. ಇದನ್ನು ನಾವು ಎಲ್ಲ ಆಂಧ್ರಮೂಲದ ಕಲಾವಿದರಲ್ಲಿಯೂ ಕಾಣಬಹುದು. ಅವರ ಭಾಷೆಯಲ್ಲಿ ತೋರುವಷ್ಟು ಸಂಸ್ಕೃತಶಬ್ದಗಳು ಬೇರೆ ಯಾವ ಭಾಷೆಯಲ್ಲಿಯೂ ಕಾಣುವುದಿಲ್ಲ. ಸಂಸ್ಕೃತಕ್ಕೆ ಸಹಜವಾಗಿರುವ ಅಪಾರಪದಸಿದ್ಧಿ, ಮತ್ತು ಗುರುಬಾಹುಳ್ಯದ, ಲಘುಬಾಹುಳ್ಯದ, ದೀರ್ಘಾಕ್ಷರಯುಕ್ತ, ದೀರ್ಘಾಕ್ಷರರಹಿತ, ಸಾಜಾತ್ಯವರ್ಣ, ವೈಜಾತ್ಯವರ್ಣ - ಹೀಗೆ ಅನೇಕವಿಧವಾದ ವರ್ಣವೈಭವವುಳ್ಳ ಸಾಹಿತ್ಯಕ್ಕೆ ಬೇಕಾದ ಸೌಲಭ್ಯ ಅಯತ್ನವೆಂಬಂತೆ ಸಂಸ್ಕೃತದಲ್ಲಿ ದಕ್ಕುತ್ತದೆ. ಅದನ್ನು ಹೆಚ್ಚಿನ ಮಟ್ಟಿಗೆ ತೆಲುಗಿನವರು ಉಳಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಅರ್ಥಾಲಂಕಾರಗಳಿಂದ ಪರಿಪ್ಲುತವಾದದ್ದೇನೂ ಅಲ್ಲ, ಆದರೆ ಅದರಲ್ಲಿ ಕಂಡುಬರುವ ಶಬ್ದಾಲಂಕಾರಸೌಂದರ್ಯಕ್ಕೆ ಸಂಸ್ಕೃತಭಾಷೆ ದೊಡ್ಡ ದೋಹದವನ್ನು ಕೊಟ್ಟಿತು. ಚಿಕಿತ್ಸಕವಾಗಿ ಕಂಡಾಗ ಅವರ ಸಂಸ್ಕೃತಕೃತಿಗಳಲ್ಲಿ ವ್ಯಾಕರಣದೋಷ ಕಾಣುವುದುಂಟು. ಭಾಷೆ ಮತ್ತು ಅದರ ಒಳಿತು-ಕೆಡುಕುಗಳೆಲ್ಲವೂ ತನಗೆ ಸಹಜಪ್ರಸಾದ ಎಂದಲ್ಲಿ ಇದು ಸಹಜ. ಆದರೆ ಇವುಗಳ ಬಗೆಗೆ ನಮ್ರತೆ ಇರುವುದು ಒಳಿತು. ಅವರಿಗದು ಇರಲಿಲ್ಲವೆಂಬುದು ಸತ್ಯ. ಇವೆಲ್ಲವೂ ಗೌಣ. ಅದರಲ್ಲಿ ಅವರು ಸಾಧಿಸಿದ ಗಾನಮಾಧುರ್ಯ ಮತ್ತು ಲಯಸೌಖ್ಯ ಅದ್ಭುತವಾದದ್ದು. ಉದಾಹರಣೆಗೆ ಅವರು ಸರಸಾಂಗಿ ರಾಗದ “ಹನುಮಾ ಅನುಮಾ” ಎನ್ನುವ ಕೃತಿಯಲ್ಲಿ ಮತ್ತೆ ಮತ್ತೆ ‘ಮಾ’ ಎಂಬ ಅಕ್ಷರ ಬಂದಂತೆಲ್ಲ ಮಧ್ಯಮ ಬರುತ್ತದೆ. ಈ ರೀತಿಯ ಸಾಹಿತ್ಯವನ್ನು ರಚನೆ ಮಾಡುವುದು ಅವರಿಗೆ ಲೀಲಾಜಾಲವಾಗಿತ್ತು. ಜತಿಗಳಿಗೆ ತಕ್ಕಂತೆ, ತಾಳ-ಗತಿಗಳಿಗೆ ತಕ್ಕಂತೆ, ಶುಷ್ಕಾಕ್ಷರಗಳಿಗೆ (ಪಾಟಾಕ್ಷರ) ತಕ್ಕಂತೆ ಅವರು ಪದಪುಂಜಗಳನ್ನು ಹೊಂದಿಸಬಲ್ಲವರಾಗಿದ್ದರು. ಹಾಗಾಗಿ ಲಯಸಮತ್ವ ಅವರ ಮಾತಿನಲ್ಲಿ ತಾನಾಗಿ ಬರುತ್ತಿತ್ತು. “ಗಾಯಕ-ಕುಲ-ವರದಾಯಕ-ವರ-ವಾಗ್ಗೇಯಾಕಾರ-ಕುಲ-ವಂದನೀಯ-ಮಹನೀಯ-ತ್ಯಾಗರಾಯ” - ಇಂಥವೆಷ್ಟೋ ಪದಪುಂಜಗಳು ಬಹಳ ಸುಂದರವಾಗಿ ಬರುವಂತೆ ಆಗಿತ್ತು. ಪದಪುಂಜಗಳನ್ನು ಮತ್ತು ರಾಗಗಳನ್ನು ಜೋಡಿಸುವಲ್ಲಿ ಅವರ ಸಮನಾದವರು ಪ್ರಾಯಶಃ  ಮತ್ತೊಬ್ಬರಿಲ್ಲ.       

Balamurali

ಬಾಲಮುರಳಿ ಅವರ ಸಾಹಿತ್ಯದಲ್ಲಿ ಸೌಂದರ್ಯವಿದ್ದರೂ ಅದರ ಅರ್ಥದಲ್ಲಿ ನಾವೀನ್ಯ ಹೆಚ್ಚಾಗಿ ಇಲ್ಲವೆಂದು ಗಮನಿಸಿದೆವಷ್ಟೆ. ಅದು ಬಹಳ ನಿಜ. ಏಕೆಂದರೆ ಅವರು ತ್ಯಾಗರಾಜರು, ತಮ್ಮ ಗುರುಗಳು - ಹೀಗೆ ಕೆಲವರನ್ನು ಕುರಿತು ಮಾಡಿದ ರಚನೆಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ದೇವತಾಸ್ತುತಿಗಳೇ ಆಗಿವೆ (ಹಲವೊಂದು ಸಂಗೀತಸ್ತುತಿಪರವಾದ ಕೃತಿಗಳೂ ಇವೆಯೆನ್ನಿ). ಈ ಅರ್ಥದಲ್ಲಿ ಅವರು ಪೂರ್ವವಾಗ್ಗೇಯಕಾರರ ಹಾದಿಯಲ್ಲಿಯೇ  ನಡೆದರು. ಅವರಲ್ಲಿ ಸಹಜವಾಗಿ ಇದ್ದ ಭಗವದ್ಭಕ್ತಿ ಉತ್ಕೃಷ್ಟ ಹೌದೋ ಅಲ್ಲವೋ ಬೇರೆಯೇ ಮಾತಾಗುವುದು. ಆದರೆ ದೇವತಾಸ್ತೋತ್ರಗಳು, ದೇವತಾನಾಮಧೇಯಗಳು, ದೇವತಾವಿಶೇಷಣಗಳು ತುಂಬ ಇಂಪಾಗಿ, ಸಿದ್ಧಸಾಮಗ್ರಿಯಾಗಿ ಒದಗಿ ಬರುತ್ತದೆ. ಹೀಗಾಗಿ ಪೂರ್ವಸಿದ್ಧಸಾಮಗ್ರಿ ಅವರಿಗೆ ಸಾಕಷ್ಟು ಸಹಾಯವನ್ನು ಒದಗಿಸಿದೆ. ಆದರೆ ಧಾತುವಿನಲ್ಲಿ ಮಾತ್ರ ಅವರ ಸ್ವೋಪಜ್ಞಸಾಮಗ್ರಿಯ ಪ್ರಮಾಣ ಮಿಗಿಲಾದದ್ದು. ಈ ಕಾರಣದಿಂದಲೇ ಅವರು ದೊಡ್ಡ ಗಾಯಕ. ಇದನ್ನು ನಾವು ಮರೆಯುವಂತಿಲ್ಲ.

ಬಾಲಮುರಳಿ ಅವರು ಲಿಲಿತಸಂಗೀತ ಎಂಬ ಪ್ರಕಾರಕ್ಕೆ ಸಲ್ಲಿಸಿದ ಕೊಡುಗೆ ಬಹಳ ವಿಶೇಷವಾದದ್ದು. ವಿಜಯವಾಡ ಆಕಾಶವಾಣಿಯಲ್ಲಿ ಅವರು ನಿರ್ಮಾಪಕರಾಗಿದ್ದಾಗ ಅನೇಕ ವರ್ಷಗಳ ಕಾಲ ಅವೆಷ್ಟೋ ಮಧುರಗೀತಗಳನ್ನು, ಸ್ತೋತ್ರಗಳನ್ನು, ಭಾವಗೀತೆಗಳನ್ನು ಸುಂದರವಾಗಿ ಸ್ವರಪಡಿಸಿ ಲೋಕಕ್ಕೆ ಮಹೋಪಕಾರ ಮಾಡಿದ್ದರೆ. ವಿಶೇಷತಃಏಕಾಂತಸೇವಮುಂತಾದ ಗೇಯಪ್ರಬಂಧಗಳನ್ನು ಅವರು ಸ್ವರಸಂಯೋಜನೆ ಮಾಡಿಕೊಟ್ಟ ಬಗೆ ಇಂದಿಗೂ ಆಂಧ್ರದಲ್ಲಿ ಮನೆಮಾತಾಗಿದೆ. ಅನೇಕ ಆಚಾರ್ಯರುಗಳ ಸ್ತೋತ್ರಗಳಿಗೂ ಕೂಡ ಅವರು ಸ್ವರಸಂಯೋಜನೆ ಮಾಡಿರುವುದು ಅದ್ಭುತವಾದ ಕೊಡುಗೆ ಎಂದು ಹೇಳಬೇಕು. ಒಂದು ಉದಾಹರಣೆಯಾಗಿ ಹೇಳುವುದಿದ್ದರೆ ಶಂಕರಭಗವದ್ಪಾದರದೆಂದು ಪ್ರಸಿದ್ಧವಾದ ಶಿವನಾಮಾವಲ್ಯಷ್ಟಕದ ಚರಣಗಳನ್ನು ಭಿನ್ನ-ಭಿನ್ನ ರಾಗಗಳಲ್ಲಿ ಸ್ವರಸಂಯೋಜನೆ ಮಾಡಿದಾಗಲೂ ಒಂದು ರಾಗದಿಂದ ಮತ್ತೊಂದು ರಾಗಕ್ಕೆ ಹೋಗುವಾಗ ಬಿರುಕಿಲ್ಲದ ಹಾರು (seamless gliding) ನಿರ್ವಿವಾದವಾಗಿ ತೋರುತ್ತದೆ. ಜೊತೆಗೆ ಆ ರಾಗಗಳಲ್ಲಿ ನಾವೀನ್ಯವನ್ನು ತಂದಿದ್ದಾರೆ. ಆ ಸಾಹಿತ್ಯದ ವಸಂತತಿಲಕಚ್ಛಂದಸ್ಸು ಸುಲಲಿತವಾದ ಚತುರಶ್ರಗತಿಗೆ ಒಗ್ಗಿಬರುವಂತೆ ಮಾಡಿರುವ ಬಗೆ ಸಂಗೀತರಸಿಕರಿಗೆ ಬೆಲೆಯುಳ್ಳ ಪಾಠ ಕಲಿಸುತ್ತದೆ ಎಂದು ಹೇಳಬಹುದು. ಅವರು ಜಯದೇವನ ಅಷ್ಟಪದಿಗಳಿಗೆ ಮಾಡಿದ ಸ್ವರಸಂಯೋಜನೆ ದಂತಕಥೆಯೇ ಆಯಿತು. ‘ಹಂಸಗೀತೆ’ ಎಂಬ ಚಲನಚಿತ್ರದ ಸ್ವರಸಂಯೋಜನೆಗಾಗಿ ಅವರು ಕೇಂದ್ರಪ್ರಭುತ್ವದ ಪ್ರಶಸ್ತಿಯನ್ನೂ ಪಡೆದರು. ಗಾಯಕರಾಗಿ, ಸ್ವರಸಂಯೋಜಕರಾಗಿ ಮತ್ತು ಶಾಸ್ತ್ರೀಯಗಾಯಕರಾಗಿ - ಚಲನಚಿತ್ರದ ಎರಡು ವಿಭಾಗಗಳಲ್ಲಿ ಮತ್ತು ಗೀತದ ಒಂದು ವಿಭಾಗದಲ್ಲಿ - ಮೂರು ಸ್ತರದಲ್ಲಿಯೂ ರಾಷ್ಟ್ರಪತಿಗಳ ಪುರಸ್ಕಾರವನ್ನು ಪಡೆದ ಏಕಮೇವಾದ್ವಿತೀಯ ವ್ಯಕ್ತಿ ಅವರು ಎಂದಾಯಿತು. ಪೂರ್ವದ ವಾಗ್ಗೇಯಕಾರರು ರಚನೆ ಮಾಡಿದ ಅಪೂರ್ವರಾಗಗಳ ಕೃತಿಗಳನ್ನು ಆ ವಾಗ್ಗೇಯಕಾರರ ಮುಂದೆಯೇ ಹಾಡಿ, ಅವರೂ ಕೂಡ “ನಮ್ಮ ಕಲ್ಪನೆಯನ್ನು ಮೀರಿದ್ದು ನಿಮ್ಮ ಹಾಡು” ಎಂದು ಮೆಚ್ಚುಗೆಯ ಮಾತುಗಳನ್ನಾಡುವಂತೆ ಮಾಡುತ್ತಿದ್ದರು. ಇಂಥ ಹಲವಾರು ಸಂದರ್ಭಗಳುಂಟು. ‘ದೇವಾದಿ ದೇವ’ ಎಂಬ ಸುನಾದವಿನೋದಿನಿಯ ಕೃತಿಯನ್ನು ಅದರ ನಿರ್ಮಾಪಕರಾದ ಮೈಸೂರು ವಾಸುದೇವಾಚಾರ್ಯರ ಎದುರಿಗೆ ಹಾಡಿದಾಗ ವಾಸುದೇವಾಚಾರ್ಯರು, “ನನ್ನ ಮೂಲಕೃತಿಯದ್ದು ಬಡ ಮನೆಯ ಹೆಣ್ಣುಮಗಳೊಬ್ಬಳನ್ನು ಶ್ರೀಮಂತರ ಮನೆಗೆ ಮದುವೆ ಮಾಡಿಕೊಟ್ಟಿರುವ ಸ್ಥಿತಿಯಂತಾಗಿದೆ ; ಆಮೇಲೆ ಅವಳು ಹೆರಿಗೆಗೆ ಬರುವಾಗ ಮೈದುಂಬಿಕೊಂಡು, ಮನದುಂಬಿಕೊಂಡು ನಗ-ನಾಣ್ಯಗಳಿಂದ ಶೋಭಿಸಿ ಬಂದಾಗ ಯಾವ ಅನಿರೀಕ್ಷಿತವಾದ ಆನಂದವಾಗುತ್ತದೆಯೋ ಆ ರೀತಿಯಾದ ಆನಂದ ನನ್ನ ರಚನೆಯನ್ನು ನಿಮ್ಮ ಬಾಯಲ್ಲಿ ಕೇಳಿದಾಗ ಆಯಿತು. ಈ ಕೃತಿಯನ್ನು ರಚನೆ ಮಾಡಿದ್ದು ನಾನೆಂಬುದು ಒಂದು ತಥ್ಯ (fact) ಆದರೂ  ನೀವೆಂಬುದು  ಒಂದು ಮೌಲ್ಯ (value)” ಎಂಬಂತೆ ಅವರು ಹೇಳಿರುವ ಸಂಗತಿ ಉಂಟು. ಸ್ವಯಂ ಕೃತಿರಚನೆ ಮಾಡದೆ ಇದ್ದರೂ ಅದನ್ನು ಮೂಲಕೃತಿಕಾರರೂ ಊಹಿಸದಂತೆ ಅನ್ಯಾದೃಶವಾಗಿ ಹಾಡಿದಾಗ ಆ ಕೃತಿ ಗಾಯಕರದ್ದಾಗುತ್ತದೆ. ಇದು ಲೋಕೋತ್ತರವಾದ ಚಮತ್ಕಾರ. ಇಂಥದ್ದನ್ನು ಅವರೆಷ್ಟೋ ಮಾಡಿದ್ದಾರೆ. ಯಾರ ಕಂಠದಲ್ಲಿ ಉದ್ದಿಷ್ಟವಲ್ಲದ ಅನುದ್ದಿಷ್ಟಸ್ವರ ಬಂದಾಗಲೂ ಆ ಸ್ವರಕ್ಕೆ ತಕ್ಕ ಪರ್ಯಾವರಣವನ್ನು ರೂಪಿಸಿ ತನ್ಮೂಲಕ ಒಂದೇ ಸ್ವರವೆಂಬ ಬೀಜದ ಸುತ್ತಲು ಇಡೀ ರಾಗವೊಂದು ಹೆಪ್ಪುಗಟ್ಟುವಂತೆ ಮಾಡಿದ್ದು ಪ್ರತಿಮಧ್ಯಮಾವತಿ ಎಂಬ ರಾಗದ ನಿರ್ಮಾಣದ ಸಂದರ್ಭ ಎಂಬುದಾಗಿ ಬಲ್ಲವರು ಹೇಳುತ್ತಾರೆ. ಪ್ರಸಿದ್ಧವಾದ ಕೃತಿಯನ್ನು, ಪ್ರಸಿದ್ಧವಾದ ರಾಗವನ್ನು ಆರಿಸಿಕೊಂಡು ಹಾಡುವಾಗಲೂ ಅವರು ನಾವೀನ್ಯವನ್ನು ತರುತ್ತಿದ್ದರು. ಆ ಕೃತಿಯ ಪಲ್ಲವಿಯಲ್ಲಿ ನಾವು ವಿಶೇಷವಾದ ಸಂಗತಿಗಳನ್ನು ನಿರೀಕ್ಷೆ ಮಾಡಿದ್ದರೆ ಅಥವಾ ಮೂಲದ ವಾಗ್ಗೇಯಕಾರರು ಅದನ್ನು ರಚನೆ ಮಾಡಿದ್ದರೆ ಕೆಲವೊಮ್ಮೆ ಅದನ್ನು ಪಕ್ಕಕ್ಕಿಟ್ಟು ಅನುಪಲ್ಲವಿಗೆ ಸಾಗುತಿದ್ದರು. ಅನುಪಲ್ಲವಿಯಲ್ಲಿ ವಿಶೇಷವಾದ, ಸ್ವಯಂಸಿದ್ಧವಾದ ಸಂಗತಿಗಳನ್ನು ಹಾಡುತಿದ್ದರು. ಹಾಗೆಯೇ ಚರಣದಲ್ಲಿ. ಹೀಗೆ ಎಲ್ಲಿ ಚಮತ್ಕಾರ ಸಾಧ್ಯವಿಲ್ಲ ಎಂಬ ಭಾವ ನಮಗೆ ಇರುತ್ತದೆಯೋ ಅಲ್ಲಿ ಚಮತ್ಕಾರವನ್ನು ಮಾಡಿತೋರಿಸುತಿದ್ದರು. ನಮ್ಮ ನಿರೀಕ್ಷೆ ಎಲ್ಲಿ ಇರುತ್ತದೆಯೋ, ನಿರೀಕ್ಷೆಯನ್ನು ಭಂಗಿಸಿ ನಿರೀಕ್ಷಾಭಂಗದ ದುಃಖವಾಗದಂತೆ ಅನಿರೀಕ್ಷಿತವಾದ, ಅದಕ್ಕೆ ಹತ್ತುಪಟ್ಟು ಮೇಲ್ಪಟ್ಟ ಆನಂದವನ್ನು ಕೊಡುತ್ತಿದ್ದರು. ಇದನೆಲ್ಲಾ ಕಂಡಾಗ “ಸರ್ವಂ ಬಲವತಾಂ ಪಥ್ಯಂ”  ಎಂಬ ವ್ಯಾಸವಾಕ್ಯ ನೆನಪಾಗುತ್ತದೆ. “ನನ್ನು ಪಾಲಿಂಬ ನಡಚಿ ವಚ್ಚಿತಿವೋ” ಎಂಬ ಮೋಹನ ರಾಗದ ಕೃತಿಯನ್ನು ಅವರಂತೆ ಹಾಡಿದವರು ಮತೊಬ್ಬರಿಲ್ಲ. ಹಿಂದೋಳ ರಾಗದ ಎರಡು ಕೃತಿಗಳು - “ಸಾಮಜವರಗಮನ” ಮತ್ತು “ಮನಸುಲೋನಿ ಮರ್ಮಮು” - ಭಿನ್ನ-ಭಿನ್ನವಾಗಿ ಬೆಳದಂಥ ಕೃತಿಗಳು. ಅವುಗಳನ್ನು ಆ ಮನೋಧರ್ಮವನ್ನೇ ಗಮನಿಸಿ ಹಾಡಿದರು. ದೊಡ್ಡ ಉದಾಹರಣೆಯಾಗಿ ಹೇಳುವುದಾದರೆ ತ್ಯಾಗರಾಜರ ಪಂಚರತ್ನಕೃತಿಗಳನ್ನು ಹಾಡುವಾಗ ಯಾಂತ್ರಿಕವಾದ ತಾಳದ ಪೆಟ್ಟನ್ನೇ ಗಮನದಲ್ಲಿಟ್ಟುಕೊಂಡು ಸಾಹಿತ್ಯಕ್ಕೆ ಕವಡೆಯಷ್ಟೂ ಕಿಮ್ಮತ್ತು ಕೊಡದೆ ಎಲ್ಲ ಗಾಯಕರೂ ಹಾಡುತಿದ್ದಾಗ ಸಾಹಿತ್ಯದ ವಿರಾಮ ಎಲ್ಲಿದೆ ಎಂಬುದನ್ನು ಗಮನಿಸಿಕೊಂಡು ಆ ವಿರಾಮದಲ್ಲಿ ಎದ್ದುತೋರುವಂತೆ ಉಚ್ಚಾರ ಮಾಡಿ, ಮತ್ತು ಎಲ್ಲಿ ತಾಳದ ಆವರ್ತನದ ಪೆಟ್ಟು ಬೀಳುತ್ತದೆ ಅಲ್ಲಿ ನಿಶ್ಶಬ್ದಕ್ರಿಯೆ ಮಾಡಿ ಆ ಇಡಿಯ ಪಂಚರತ್ನಕೃತಿಗಳ ಸಾಹಿತ್ಯದ ಸ್ವಾರಸ್ಯವೇನು ಎನ್ನುವುದನ್ನು ತೋರಿಸಿದರು. ಒಗ್ಗಿದ ಕಿವಿಗಳಿಗೆ ಯಾಂತ್ರಿಕವಾದ ಪೆಟ್ಟಿಗೆ-ಪೆಟ್ಟಿಗೆ ಪ್ರಾಸಕ್ಕೆ-ಪ್ರಾಸಕ್ಕೆ ಬಂದ ಆ ಲಯ ಒಂದು ಹೆಚ್ಚಿನ ಉಲ್ಲಾಸವನ್ನು ತಂದುಕೊಟ್ಟೀತು. ಆದರೆ ಬಾಲಮುರಳಿ ಗಾಯನದಲ್ಲಿ ಕೃತಿಯ ಹಿಂದಿರುವ ರಾಗದ, ರಾಗಕ್ಕೂ ಹಿಂದಿನ ಮನೋಧರ್ಮದ ನಮ್ರತೆ ಮತ್ತು ಉಪಶಾಂತಿ ಗೊತ್ತಾಗುತ್ತಿತ್ತು. ಇದು ತ್ಯಾಗರಾಜರಿಗೆ ಮಾಡಿದ ಮಹೋಪಕಾರ. ಪದವರ್ಣ ತಾನವರ್ಣಾದಿಗಳನ್ನು ರಚನೆಮಾಡುವಲ್ಲಿಯೂ ಕೂಡ ತುಂಬ ದೊಡ್ಡ ನಾವೀನ್ಯವನ್ನು ಅವರು ತೋರಿಸುತಿದ್ದರು. ಅದಕ್ಕೆ ಒಂದು ಉದಾಹರಣೆ ಗಂಭೀರನಾಟ ವರ್ಣದಲ್ಲಿ ಬರುವಂಥ “ಶಿವೇ ಶಿವೇ ಶಿವೇ ವೇ ವೇಲ ವರಾಲ ರಾಶಿವೇ” ಎಂಬ ಯಮಕಾದಿಗಳು. ಅದಕ್ಕಿಂತಲೂ ಹತ್ತು ಪಟ್ಟು ನೂರು ಪಟ್ಟು ವಿಶೇಷಗಳನ್ನೆಷ್ಟೋ ಅವರು ಮಾಡಿದ್ದಾರೆ. ಬೆಂಗಳೂರಿನ ಗಾಯನಸಮಾಜದ ಸಮಾವೇಶದಲ್ಲೊಮ್ಮೆ ವೀಣಾವಿದ್ವಾನ್ ಸಂಗೀತಕಲಾರತ್ನ ದೊರೈಸ್ವಾಮಿ ಅಯ್ಯಂಗಾರ್ಯರು ಆ ಅಧಿವೇಶನದ  ಸರ್ವಾಧ್ಯಕ್ಷರಾದ ಸಂದರ್ಭದಲ್ಲಿ ಸಭೆಯಲ್ಲಿದ್ದ ಯಾರೂ ಕೂಡ ರಾಗವನ್ನು ಸೃಷ್ಟಿ ಮಾಡಬಹುದು ; ರಾಗಗಳ ಸೃಷ್ಟಿಗೆ ಕೊನೆ-ಮೊದಲಿಲ್ಲ ಎಂದು ಹೇಳುತ್ತಾ, ಸಭೆಯಲ್ಲಿದ್ದವರನ್ನೇ ಕುರಿತು, “ನೀವು ಯಾವ ಯಾವ ಸ್ವರಗಳನ್ನು ಆಯ್ಕೆ ಮಾಡಿಕೊಡುವಿರೋ, ಅವಕ್ಕೆ  ಯಾವ ಅಂಶ, ಗ್ರಹ, ನ್ಯಾಸ, ಅಲ್ಪತ್ವ, ಬಹುತ್ವಾದಿಗಳನ್ನು ಕೊಡುವಿರೋ ಕೊಡಿ” ಎಂಬುದಾಗಿ ಕೇಳಿ ಸಾಧ್ಯವಿದ್ದ ಎಲ್ಲಾ ಸಂಕೀರ್ಣಬೇಡಿಕೆಗಳನ್ನು ಕಲೆಹಾಕಿ ಅವನ್ನು ಸಮರ್ಥವಾಗಿ ಮುಟ್ಟುವಂತೆದೊರೈಎಂಬ ಹೊಸರಾಗವನ್ನು ನಿರ್ಮಾಣಮಾಡಿ, ಅಲ್ಲಿಂದಲ್ಲಿಗೇ ಹಾಡಿ, ಸಂಜೆ ಅವರ ಕಛೇರಿಯಲ್ಲಿ ಅದೇ ರಾಗದಲ್ಲಿ ವಿಸ್ತೃತವಾಗಿ ಸಾಹಿತ್ಯಪುರಸ್ಸರವಾಗಿ ಹಾಡಿ ಸ್ವರವಿನ್ಯಾಸವನ್ನು  ಮಾಡಿದ್ದು ಇನ್ನೂ ಹಸುರಾಗಿದೆ. ಇಂಥ ಸಂದರ್ಭಗಳು ಎಷ್ಟೋ.

ಒಮ್ಮೆ ಒಂದು ಸಭೆಯಲ್ಲಿ ಅವರಿಗೆ ಸನ್ಮಾನವಿದ್ದಾಗ ನಾನು ಅಭಿನಂದನಭಾಷಣ ಮಾಡಬೇಕಾಗಿದ್ದಿತು. ಆಗ ನಾನು ಆಶುವಾಗಿ ಅವರನ್ನು ಕುರಿತು ತೆಲುಗು-ಸಂಸ್ಕೃತ-ಕನ್ನಡ ಭಾಷೆಗಳಲ್ಲಿ ಪದ್ಯಗಳನ್ನು ಹೇಳಿದಾಗ ಅವರು “ನಿಮಗಾಗಿ ನಾನು ಒಂದು ಹಾಡು ಮಾಡುತ್ತೇನೆ” ಎಂದು ಹೇಳಿ ಅವರ ಸುಮುಖ ರಾಗದಲ್ಲಿ ಗಣಪತಿಯನ್ನು ಕುರಿತು ಹಾಡುತ್ತಾ ಚರಣದಲ್ಲಿ ನನ್ನ ಪ್ರಸ್ತಾವನೆ ಬರುವಂತೆ ಆಶುಸಾಹಿತ್ಯದ ಶ್ಲೇಷದಿಂದ ಗಣಪತಿಯನ್ನು ಅಭಿನಂದಿಸಿದ್ದುಂಟು. ಈ ರೀತಿಯಾದ ಚಮತ್ಕಾರಗಳು ಅವರಲ್ಲಿ ಸದಾ ಕಾಣುತ್ತವೆ. ಅವರ ಕಾರ್ಯಕ್ರಮ ಎಂದೂ ಜಡವಾಗುತ್ತಿರಲಿಲ್ಲ. ಅದು ಮೂರು ಘಂಟೆಯದಾಗಿರಲಿ ಒಂದು ಘಂಟೆಯದಾಗಿರಲಿ, we always used to feel the artist apart from the art and both used to be very hearty. ಹೀಗೆ ಕಲಾವಿದ ತನ್ನತನವನ್ನು ಹಿತಕಾರಿಯಾಗಿ ವ್ಯಕ್ತಪಡಿಸಿ,  ಪ್ರೇಕ್ಷಕರು ನಿಬ್ಬೆರಗಾಗುವಂತೆ, ಮೆಚ್ಚುಗೆಯ, ಸಂತೋಷದ ಸೋಲಿನ ನೋಟದಲ್ಲಿ ನೋಡುವಂತೆ ಮಾಡುವುದು ತುಂಬ ದೊಡ್ಡ ಸಾಧನೆ. ಅಭಿಜಾತಭಾರತೀಯಕಲೆಗಳ ವೈಶಿಷ್ಟ್ಯವೇ ಇಲ್ಲಡಗಿದೆ. ಪೂರ್ವಸಿದ್ಧತೆಯಿಲ್ಲದೆ ಬಂದು ಪ್ರತಿಯೊಂದು ಹಂತದಲ್ಲಿಯೂ ಉತ್ಕಟತೆಯನ್ನೂ ರೋಚಕತೆಯನ್ನೂ ಉಳಿಸಿ ಅಧ್ಬುತವಾದ ಕಲಾಸೃಷ್ಟಿ ಮಾಡುವುದು ಮತ್ತು ತನ್ಮೂಲಕ ನಿರತಿಶಯಾನಂದವನ್ನು ತಂದುಕೊಡುವುದು ಇದರ ಹಿರಿಮೆ. ಬಾಲಮುರಳಿ ಅವರ ಸಕಲಸಂಗೀತಪ್ರಕಾರಗಳಿಗೂ ತಮ್ಮನ್ನು ತೆರೆದುಕೊಂಡಿದ್ದರು ಎನ್ನುವುದಕ್ಕೆ ಮತ್ತೊಂದು ನಿದರ್ಶನ, ೨೦೦೫ರಲ್ಲಿ ಫ್ರಾನ್ಸನಲ್ಲಿ ಅವರಿಗೆ ವಿಶೇಷ ಆಹ್ವಾನ ಬಂದಿದ್ದಾಗ  ಅವರು ಹೋದೊಡನೆ ಅವರ ಪೂರ್ವಾಪರವನ್ನು (biodata) ಸಭೆಗೆ ವಿನಿಕೆಮಾಡಿದರು. ಗಾನದಲ್ಲಿ, ಸ್ವರಸಂಯೋಗನೆಯಲ್ಲಿ, ಮೃದಂಗದಲ್ಲಿ, ಖಂಜಿರದಲ್ಲಿ, ವಯೋಲಾದಲ್ಲಿ, ವಯೊಲಿನ್ನಲ್ಲಿ ಮತ್ತು ಲಲಿತಸಂಗೀತದಲ್ಲಿ - ಎಲ್ಲದರಲ್ಲಿಯೂ ಆಕಾಶವಾಣಿಯ ‘ಏ ಆರ್ಟಿಸ್ಟ್’ ಇವರಾಗಿದ್ದಾರೆ ಎಂದು ಘೋಷಿಸಿದಾಗ, ಇದು ಹೇಗೆ ಸಾಧ್ಯ ಎಂದು ಅಲ್ಲಿದ್ದ ಒಬ್ಬ ಕಲಾವಿದರು ಕೇಳಿ, “ನಮ್ಮ ರಾಷ್ಟ್ರದ ಪ್ರಸಿದ್ಧವಾದ ಒಂದು ಗೀತವನ್ನು ನಾವು ಹಾಡುತ್ತೇವೆ, ಅದನ್ನು ನೀವು ಹಾಡುವಿರಾ ಅಥವಾ ನುಡಿಸುವಿರಾ?” ಎಂದಾಗ “ಎರಡನ್ನೂ ಮಾಡುತ್ತೇನೆ” ಎಂದು ಹೇಳಿ ಏಕಸಂಧಿಗ್ರಾಹಿಯಾಗಿ ಇಡಿಯ ಹಾಡನ್ನು ಒಮ್ಮೆ ಕೇಳಿಸಿಕೊಂಡು ಮರುಕ್ಷಣವೇ ಹಾಡಿದ್ದಲ್ಲದೆ ಅದನ್ನು ವಯೋಲಾದಲ್ಲಿ ಒಡನೆಯೇ ನುಡಿಸಿ ತೋರಿಸಿದ್ದು, ಆಮೇಲೆ ಅವರಿಗೆ ಅಲ್ಲಿನ ಪ್ರಸಿದ್ಧ ಪ್ರಶಸ್ತಿಯೊಂದು ಬಂದಿದ್ದು, ಇವೆಲ್ಲಾ ನಂಬಲಾಗದ ಸಂತೋಷದ ಸತ್ಯಗಳಾಗಿವೆ.

ಬಾಲಮುರಳಿ ಅವರಷ್ಟು ಮನಮುಟ್ಟುವಂಥ ಗೇಯರಚನೆಗಳನ್ನು ಮತ್ತಾರೂ ಮಾಡಿ ಪ್ರಸಿದ್ಧಿ ಪಡೆದಿಲ್ಲ. ಹಾಗೆ ಮಾಡುವಲ್ಲಿಯೂ ತಮ್ಮ ನಮ್ರತೆಯನ್ನು ತೋರಿಸುಕೊಳ್ಳುವಂತೆಯೇ ಹೆಮ್ಮೆಯನ್ನೂ ತೋರಿಸಿಕೊಳ್ಳುವಂಥ ಜಾಣ್ಮೆ ಅವರದೇ. ‘ಅಮ್ಮಾ ... ನೀ ಅಭಿಮಾನಕುಮಾರುಡನಮ್ಮ’ ಎಂಬ ಖಮಾಚ್ ರಾಗದ ಕೃತಿಯೊಂದೇ ಸಾಕು - ಅಲ್ಲಿ ಹುಟ್ಟುವಾಗಲೇ ನನ್ನನ್ನು ಬಾಲಮುರಳಿ ಎಂದು ಹೆಸರಿಸಿ ಕೊಳಲನ್ನು ಕೊಟ್ಟು ಕಳುಹಿಸಿರುವೆಯಲ್ಲ! ಎಂದಾಗ ಅದು ದೇವಿಯ ಸ್ತುತಿಯೋ ಆತ್ಮಸ್ತುತಿಯೋ ತಿಳಿಯದು. ಇದು ತೆಲುಗಿನ ಮಹಾಕವಿ ವಿಶ್ವನಾಥಸತ್ಯನಾರಾಯಣ ಅವರು ತಮ್ಮ ಗುರುವನ್ನು ಪ್ರಶಂಸೆ ಮಾಡಿಕೊಂಡ ಪದ್ಯವನ್ನು ಸ್ಮರಿಸುತ್ತದೆ -

ಅಲ ನನ್ನಯಕು ಲೇದು ತಿಕ್ಕನಕು ಲೇದಾಭೋಗಮಸ್ಮಾದೃಶುಂ-
ಡಲಘುಸ್ವಾದುರಸಾವತಾರಧಿಷಣಾಹಂಕಾರಸಂಭಾರದೋ-
ಹಲಬ್ರಾಹ್ಮೀಮಯಮೂರ್ತಿಶಿಷ್ಯುಡೈನಾಡನ್ನಟ್ಟಿದಾ ವ್ಯೋಮಪೇ-
ಶಲಚಾಂದ್ರೀಮಯಕೀರ್ತಿ ಚಳ್ಳಪಿಳ ವಂಶಸ್ವಾಮಿ ಕುನ್ನಟ್ಲುಗನ್ ||

ಹಿಂದಿನ ಮಹಾಕವಿಗಳಾದ ತಿಕ್ಕನ, ಪೋತನ, ಎರ್ರನ, ನನ್ನಯ ಮುಂತಾದವರಿಗೆ ಇರದ ಹೆಚ್ಚುಗಾರಿಕೆ ನನ್ನ ಗುರುವಾದ ಶತಾವಧಾನಿ ಚಳ್ಳಪಿಳ ವೆಂಕಟಶಾಸ್ತ್ರಿಗಳಿಗಿದೆ. ಏಕೆಂದರೆ ಅವರಾರಿಗೂ ನನ್ನ ಗುರುವಿಗಿರುವಂತೆ ನನ್ನಂಥ ಶಿಷ್ಯನಿರಲಿಲ್ಲ! ಇದು ಗುರುಸ್ತುತಿಯೋ ಆತ್ಮಪ್ರಶಂಸೆಯೋ ತಿಳಿಯದು!! ಬಾಲಮುರಳಿ ಅವರ ರಚನೆಯೂ ಅದೇ ರೀತಿಯಾದದ್ದು. ಆದರೆ ಇದು ಅವರು ಪ್ರಾರಂಭಿಸಿದ್ದೇನಲ್ಲ. ಸಂಸ್ಕೃತಸಾಹಿತ್ಯದ ಬಾಣಭಟ್ಟನೇ ಮೊದಲಾದವರು ಬೇಕಾದಷ್ಟು ಜನರಿದ್ದಾರೆ. ಇದು ಆ ಭವ್ಯವಿದ್ವತ್ಪರಂಪರೆಯ ಮುಂದುವರಿಕೆಯಷ್ಟೆ. ಅಹಂಕಾರವೂ ಕಲೆಯ ಮಾಧ್ಯಮದ ಮೂಲಕ ಬಂದಾಗ ರಸವಾದೀತು ಎಂಬುದನ್ನು ನಾವಿಲ್ಲಿ ಕಾಣುತ್ತೇವೆ. ಮತ್ತು ಬಾಲಮುರಳಿ ಅವರ ತಿಲ್ಲಾನಗಳೂ ಕೂಡ ಅನ್ಯಾದೃಶವಾದವು. ಹಿಂದೊಮ್ಮೆ ನನ್ನ ಗುರುಗಳಾದ ನಾಗವಲ್ಲಿ ನಾಗರಾಜ್ ಅವರ ಜೊತೆ ಸೇರಿ ಅವರ ತಿಲ್ಲಾನಗಳ ಬಗೆಗೆ ವಿಶೇಷಕಾರ್ಯಕ್ರಮವೊಂದನ್ನು ನಡೆಸಿದಾಗ ಪ್ರತಿಯೊಂದು ತಿಲ್ಲಾನವನ್ನೂ ಚಿಕಿತ್ಸಕವಾಗಿ ಅಭ್ಯಾಸ ಮಾಡಿದ್ದುಂಟು. ಆ ತಿಲ್ಲಾನಗಳ ವೇಗ ಅವಕ್ಕೇ ಸಾಟಿಯಾದದ್ದು. ಸಾಮಾನ್ಯವಾಗಿ ಆ ವೇಗದಲ್ಲಿ ಮಾತನಾಡುವುದೇ ಸಾಧ್ಯವಿಲ್ಲ ; ಇನ್ನು ಸ್ವರಗಳನ್ನೂ ಜತಿಗಳನ್ನೂ ನುಡಿಯುವುದೆಂದರೆ ಹೇಗೆ! ಅದರಲ್ಲಿಯೂ ಲಯತಪ್ಪದಿರುವುದೆಂದರೆ ಹೇಗೆ! ಇಂಥ ಅಸಾಮಾನ್ಯವಾದ ಸಿದ್ಧಿಗಳನ್ನು ಮಾಡಿಕೊಂಡವರು ಅವರು. ರಾಗಮುದ್ರಿಕೆಯನ್ನು ತರುವಲ್ಲಿ ಅವರು ತೋರಿಸುತ್ತಿದ್ದ ಚಮತ್ಕಾರವಂತೂ ಅವಿಸ್ಮರಣೀಯ. ಕಥನಕುತೂಹಲ ರಾಗ ಕದನಕುತೂಹಲ ಎಂದಾಗಿದೆ. ಇದು ತಮಿಳುಭಾಷೆಯ ಪ್ರಸಾದ. ಅದನ್ನು ಅವರು ಬಹಳ ಚೆನ್ನಾಗಿ ‘ಮದನಕದನಕುತೂಹಲುಡು ರಮ್ಮನೆ ಬಿರಾನ ಬಿರಾನ ಬಿರಾನ ರಾವೆ’ ಎಂದು ಹಾಡಿ ಕದನಕುತೂಹಲವನ್ನು ಕೃಷ್ಣನ ಮದನಕದನಕುತೂಹಲವನ್ನಾಗಿ ಮಾಡಿಬಿಟ್ಟರು. ಹೀಗೆ ರಣರಂಗವನ್ನು ಶೃಂಗಾರರಸರಂಗವನ್ನಾಗಿ ಮಾಡಿದ ಬಗೆ ದಿಟವಾಗಿ ಅದ್ಭುತವಾದದ್ದು. ರಾಗಮಾಲಿಕೆಯಲ್ಲಿ ಮಾಡಿದ ಚಮತ್ಕಾರಗಳು ಹಲವಾರು. ರಾಗಠಾಯ ಎಂಬುದಾಗಿ ಗ್ರಹಭೇದದಿಂದ ಮೊದಲುಮಾಡುವುದು, ತಾಳಮಾಲಿಕೆಯಲ್ಲಿ ರಚಿಸುವುದು, ಸಮಾನರಾಗಕುಟುಂಬದೊಳಗೆ ರಚನೆ ಮಾಡುವುದು, ಅನೇಕಭಾಷೆಗಳಲ್ಲಿ ರಚನೆ ಮಾಡುವಾಗ ಆಯಾ ಭಾಷೆಗಳ ಜಾಯಮಾನಕ್ಕೆ ಒಪ್ಪುವಂತೆ ಮಾಡುವುದು - ಇವೆಲ್ಲವೂ ಅವರಿಗೆ ಮಾತ್ರ  ಸಾಧ್ಯವಾದ ಕೃತ್ಯಗಳೆಂದರೆ ತಪ್ಪಾಗಲಾರದು. ತ್ಯಾಗರಾಜರನ್ನು ಕುರಿತು ರಚನೆ ಮಾಡುವಾಗ ಅವರ ಶೈಲಿಯಲ್ಲಿಯೇ ಮಾಡುವುದು, ಮುತ್ತುಸ್ವಾಮಿ ದೀಕ್ಷಿತರನ್ನು ಕುರಿತು ‘ಸುಚರಿತ್ರ’ ಎಂಬ ಮೇಳಕರ್ತರಾಗದಲ್ಲಿ ರಚನೆ ಮಾಡುವಾಗ ಅವರ ಶೈಲಿಯನ್ನು ಆಶ್ರಯಿಸುವುದು - ಇವನ್ನೆಲ್ಲ ಕಂಡಾಗ ಅವರು ಪೂರ್ವಸೂರಿಗಳ ರಚನೆಗಳನ್ನು, ಅವುಗಳ ಕಲಾಸೂಕ್ಷ್ಮಗಳನ್ನು ಅದೆಷ್ಟು ಎಚ್ಚರಿಕೆಯಿಂದ ಗಮಸಿದ್ದರೆಂದು ತಿಳಿಯದಿರದು. ಪದವರ್ಣಗಳನ್ನೂ ಜಾವಳಿಗಳನ್ನೂ ಅವರು ರಚಿಸಿದ್ದಾರೆ.

ಬಾಲಮುರಳಿ ಅವರು ಚಲನಚಿತ್ರಸಂಗೀತಕ್ಕೆ ಕೊಟ್ಟ ಕೊಡುಗೆಯೂ ಬಹಳ ಮೇಲ್ಮಟ್ಟದ್ದು. ಸಾಮಾನ್ಯವಾಗಿ ಶಾಸ್ತ್ರೀಯಸಂಗೀತಗಾರರು ಚಲನಚಿತ್ರಗಳಲ್ಲಿ ಇಷ್ಟು ಉನ್ನತಮಟ್ಟದ ಹಾಡುಗಳನ್ನು ಹಾಡಿಲ್ಲ, ಮತ್ತು ಅವು ಅಷ್ಟು ಜನಪ್ರಿಯವೂ ಆಗಿಲ್ಲ. ಅವರಾದ ಮೇಲೆ ಸಿನಿಮಾಸಂಗೀತವನ್ನು ಹಲವು ಜನ ಶಾಸ್ತ್ರೀಯಸಂಗೀತಗಾರರು ಹಾಡಿದ್ದಾರಾದರೂ ಅವರು ಸರ್ವಾತ್ಮನಾ ಅದಕ್ಕೇ ತೆತ್ತುಕೊಂಡಿದ್ದರೂ ಕೂಡ - ಅವರ ಕಲೆ ಬಾಲಮುರಳಿ ಅವರ ಮಟ್ಟಕ್ಕೆ ಏರುವುದನ್ನು ನಾವು ಕಾಣುವುದಿಲ್ಲ. ಹಾಗಾಗಿ ಅವರ ಬಗೆಗೆ ಪ್ರಸ್ತಾವಿಸಲೇಬೇಕಿಲ್ಲ. ಹೀಗೆ ಮಹಾಗಾಯಕನೊಬ್ಬ ಚಲನಚಿತ್ರರಂಗದಲ್ಲಿ ಸಮರ್ಥಹಿನ್ನೆಲೆಗಾಯಕನಾಗಿ ನಿಂತದ್ದು ದೊಡ್ಡಸಂಗತಿ. ಇದರಿಂದ ತಿಳಿಯುವುದೇನೆಂದರೆ ಶಾಸ್ತ್ರಜ್ಞರು, ಪಾಠಜ್ಞರೆಲ್ಲ ಕಲಾವಿದರಲ್ಲ. ಈ ಸಂದರ್ಭದಲ್ಲಿ ಭೋಜಪ್ರಬಂಧದ ಒಂದು ಮಾತು ನೆನಪಾಗುತ್ತದೆ -

ಯತ್ಸಾರಸ್ವತವೈಭವಂ ರಸಸುಧಾಸಿದ್ಧಂ ಸಮಿದ್ಧಾದ್ಭುತಂ
ತಲ್ಲಭ್ಯಂ ಕವಿನೈವ ನೈವ ಹಠತಃ ಪಾಠಪ್ರತಿಷ್ಠಾಜುಷಾಮ್ |
ಕಾಸಾರೇ ದಿವಸಂ ವಸನ್ನಪಿ ಪಯಃ ಪೂರಂ ಪರಂ ಪಂಕಿಲಂ
ಕುರ್ವಾಣಃ ಕಮಲಾಕರಸ್ಯ ಲಭತೇ ಕಿಂ ಸೌರಭಂ ಸೈರಿಭಃ ||

ದಿನವಿಡೀ ಎಮ್ಮೆ ಸರೋವರದಲ್ಲಿದ್ದರೂ ಅದಕ್ಕೆ ಸರೋವರದ ಕಮಲದ ಪರಿಮಳ ಬರುವುದಿಲ್ಲ. ಹಾಗಾಗಿ ಸಾಹಿತ್ಯಸೌಂದರ್ಯ, ಕಲಾಸೌಂದರ್ಯ ಪ್ರತಿಭೆ ಇದ್ದವನಿಗೆ ಮಾತ್ರ ಬರುವುದಲ್ಲದೆ ಪಾಠಕೋವಿದನಿಗೆ ಬರುವುದಲ್ಲ. ನಮ್ಮಲ್ಲಿರುವ ಎಷ್ಟೋ ಜನ ಸಂಗೀತದ ಪಾಠ ಮಾಡುವವರಿಗೂ ಬಾಲಮುರಳಿ ಅವರಿಗೂ ಇರುವ ಅಂತರ ಹಸ್ತಿಮಶಕಾಂತಾರ. ಚಲನಚಿತ್ರರಂಗದಲ್ಲಿ ಆಪಾತಮಧುರತ್ವಕ್ಕೆ ಎಲ್ಲಿಲ್ಲದ ಬೆಲೆಯುಂಟು. ಕೇವಲ ಮೂರರಿಂದ ಐದು ನಿಮಿಷಗಳೊಳಗೆ ತನ್ನೆಲ್ಲ ಪ್ರತಿಭೆಯನ್ನು ತೋರಿಸಬೇಕೆಂಬ ನಿರ್ಬಂಧ ಅದರಲ್ಲಿದೆ. ಬಾಲಮುರಳಿ ಅವರು ಪ್ರತಿಭಾಸಂಪನ್ನರೂ ಶಾಸ್ತ್ರಕೊವಿದರೂ ಆದದ್ದರಿಂದಲೇ ಅವರನ್ನು ಈ ನಿರ್ಬಂಧಗಳಾವುವೂ ಕಟ್ಟಿಕ್ಕಲಾಗಲಿಲ್ಲ. ಎಲ್ಲೆಲ್ಲಿಯೂ ಅವರದ್ದು ಧೀರಸ್ವೈರವಿಹಾರ. ೧೯೫೭ರಿಂದಲೇ ಅವರು ಚಲನಚಿತ್ರಕ್ಕೆ ಬಂದರು. ಸಾಕಷ್ಟು ದೀರ್ಘಕಾಲದ ಅವರ ಈ ಯಾತ್ರೆಯಲ್ಲಿ ಅನೇಕ ಮೈಲಿಗಲ್ಲುಗಳಿವೆ. ಉದಾಹರಣೆಗೆ ‘ಕಲೈಕೋವಿಲ್’ ಎಂಬ ಚಲನಚಿತ್ರದಲ್ಲಿ ಬರುವ ‘ತಂಗರಥಂ’ ಎಂಬ ಆಭೋಗಿರಾಗದ ರಚನೆ ಮತ್ತು ‘ನರ್ತನಶಾಲಾ’ ಚಲನಚಿತ್ರದಲ್ಲಿ ದ ಯಮುನಾಕಲ್ಯಾಣಿರಾಗದ ‘ಸಲಲಿತರಾಗಸುಧಾರಸ’ ಎಂಬ ರಚನೆ ವಿಶೇಷವಾಗಿ ಎದ್ದುತೋರುತ್ತವೆ. ಒಂದೇ ಬಿಡಿ ರಾಗದಲ್ಲಿ ಅವರು ‘ಅಮ್ಮ’ ಎಂಬ ಕನ್ನಡ ಚಲನಚಿತ್ರಕ್ಕೆ ಹಾಡಿದ ಪುರಂದರದಾಸರ ‘ಧರ್ಮವೇ ಜಯ’ ಎಂಬ ಖರಹರಪ್ರಿಯ ರಾಗದ ಕೃತಿಯಾಗಲಿ, ‘ಗುಪ್ಪೆಡುಮನಸು’ ಎಂಬ ತೆಲುಗು ಚಲನಚಿತ್ರಕ್ಕೆ ‘ಸಾಮರಾಗದ ಮೌನಮೆ ನೀ ಭಾಷ’ ಇರಬಹುದು, ‘ಮೇಘಸಂದದೇಶಂ’ ಚಿತ್ರಕ್ಕೆ ಹಾಡಿದ ‘ಪಾಡನಾ ವಾಣಿ ಕಲ್ಯಾಣಿ’ ಇರಬಹುದು - ಇವೇ ಮುಂತಾದವು ಕಾಣಸಿಗುತ್ತವೆ. ಇದನ್ನಲ್ಲದೆ ಅವರು ರಾಗಮಾಲಿಕೆಯಾಗಿ ಹಾಡಿದ ಹಲವು ಹಾಡುಗಳುಂಟು. ಕ್ಲಿಷ್ಟವಾದ ಸಂಗತಿಗಳು, ಬಿಕ್ಕಟ್ಟಾದ ಸ್ವರಕಲ್ಪನೆ ಮತ್ತು ತಬ್ಬಿಬ್ಬಾಗಿಸುವ ಲಯವಿನ್ಯಾಸ ಇರುವ ರಚನೆಗಳೆಷ್ಟನ್ನೋ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ವಿಶೇಷತಃ ‘ಸ್ವರ್ಣಗೌರಿ’ ಚಿತ್ರದಲ್ಲಿ ಅವರು ಹಾಡಿದ ‘ನಟವರ ಗಂಗಾಧರ’ ಎಂಬ ಮೂರು ರಾಗಗಳ ಮಾಲಿಕೆ, ‘ಭಕ್ತಪ್ರಹ್ಲಾದ’ ಚಿತ್ರದ ‘ಆದಿ ಅನಾದಿಯು ನೀ’ ಎಂಬ ಐದು ರಾಗಗಳ ರಾಗಮಾಲಿಕೆಯಾಗಲೀ ‘ಶ್ರೀಮದ್ವಿರಾಟಪರ್ವಮು’ ಚಲನಚಿತ್ರದ ‘ಜೀವಿತಮೇ ಕೃಷ್ಣಸಂಗೀತಮು’ ಎಂಬುದಾಗಲೀ ‘ಋತುಗಾನ’ ಚಲನಚಿತ್ರದ ಶೀರ್ಷಕಗೀತವಾಗಲೀ ಸರ್ವಜನಪ್ರಿಯ ಹಾಡುಗಳಾಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ವ್ಯಕ್ತಿತ್ವವೇ ಎಂದು ತೋರುವ ‘ತಿರುವಿಳೈಯಾಡಲ್’ ಚಲನಚಿತ್ರದ ‘ಒರುನಾಳ್ ಪೋದುಮಾ’ ಅತ್ಯುತ್ಕೃಷ್ಟ ರಚನೆ.

ಅವರ ಸಂಗೀತದಲ್ಲಿ ತೋರುತ್ತಿದ್ದ ನವನವೀನತೆಗಳು ಇನ್ನೂ ಎಷ್ಟೋ ಇವೆ. ಅವೆಲ್ಲದರ ಬಗೆಗೆ ಬರೆಯುವುದಾದರೆ ಹಲವು ಗ್ರಂಥಗಳೇ ಆದಾವು. ಕೆಲವನ್ನಾದರೂ ನಾವೀಗ ಗಮನಿಸಬಹುದು. ಅವರು ಎಂದೂ ಸಾಹಿತ್ಯವನ್ನು ರಚಿಸಿ ನಂತರ ಸಂಗೀತಸಂಯೋಜನೆ ಮಾಡುತ್ತಿರಲಿಲ್ಲ, ಸಂಗೀತದ ಹಂದರವನ್ನು ಕಲ್ಪಿಸಿಕೊಂಡು ಅನಂತರ ಪದಗಳಿಗಾಗಿ ತಡಕಾಡುತ್ತಿರಲಿಲ್ಲ. ಅವೆರಡೂ ಒಟ್ಟಿಗೆ ಬರುತ್ತಿದ್ದವು. ನನಗೆ ಅವರು ಮುಖತಃ ಹೇಳಿದ್ದುಂಟು, ಒಂದು ಲಹರಿಯಲ್ಲಿ ಎರಡೂ ಬರುತ್ತವೆ, ಅವನ್ನು ನಾನು ರೂಪಿಸಿಕೊಳ್ಳುತ್ತಾ ಹೋಗುತ್ತೇನೆ. ಕಟ್ಟಕಡೆಯಲ್ಲಿ ಗಮನಿಸಿದಾಗ ಅದು ಈಗಾಗಲೇ ಸಿದ್ಧವಾದ ರಾಗ-ತಾಳ ಆಗಿದ್ದರೆ ಅದು, ಇಲ್ಲವಾದರೆ ಹೊಸ ರಾಗ, ಹೊಸ ತಾಳಎಂದು. ಮಗು ಹುಟ್ಟಿದ ಮೇಲೆ ಹೆಸರಿಡುವುದಲ್ಲದೆ ಹುಟ್ಟುವ ಮುನ್ನವೇ ಹೆಸರಿಡುವ ಪದ್ಧತಿ ಅವರದ್ದಲ್ಲ. ಆ ಮಟ್ಟಕ್ಕೆ ಅವರಿಗೆ ಸಂಗೀತ-ಸಾಹಿತ್ಯಗಳ ರಚನೆ ಸಹಜವಾಗಿತ್ತು. ಅವರು ಹಳೆಯ ಪ್ರಸಿದ್ಧರಾಗಗಳಲ್ಲಿಯೂ ಒಂದು ಹೊಸತನ ತರುತ್ತಿದ್ದರೊಳಗೆ ಪ್ರಸಿದ್ಧನಿದರ್ಶನ ‘ನಗು ಮೊಮೊ’ ಎಂಬ ಕೃತಿ. ಮೂರು ನಾಲ್ಕು ರೀತಿಗಳಲ್ಲಿ ಅದನ್ನು ಹಾಡಿ ಧ್ವನಿಮುದ್ರಣ ಮಾಡಿದ್ದುಂಟು, ಸಾವಿರಾರು ವೇದಿಕೆಗಳಲ್ಲಿ ಅವನ್ನು ಪ್ರಸ್ತುತಪಡಿಸಿದ್ದುಂಟು. ಅವೆಲ್ಲವೂ ಅನನ್ಯವಾದ ರೀತಿಯಲ್ಲಿವೆ. ಆಭೇರಿ ರಾಗ ತನ್ನ ಕೊಮಲತೆಗೆ, ಆರ್ದ್ರತೆಗೆ, ಶೃಂಗಾರದ ಛಾಯೆಯಿರುವ ಕರುಣಕ್ಕೆ ಪ್ರಸಿದ್ಧ. ಅದರಲ್ಲಿ ಒಂದು ಗಾಂಭೀರ್ಯವನ್ನು, ಆಳವನ್ನು, ವಿಷಾದದ ಗಹನತೆಯನ್ನು ತರುವ ಪ್ರಯತ್ನವನ್ನು ಅವರು ಮಾಡಿದರು. ಅದನ್ನು ಕೇಳಿದಾಗ ನನಗೆ ಬಹಳ ಆಶ್ಚರ್ಯವಾಯಿತು, “ಈ ರಾಗಕ್ಕೆ ಈ ಭಾವ ಹೇಗೆ ಬಂದಿತು?” ಎಂದು. ಆಗ ಗೊತ್ತಾಯಿತು - ಅವರು ಆರೋಹದ ಮೇಲೆ ಹೆಚ್ಚಾಗಿ ಸಂಚರಿಸಿದ್ದಾರೆ ಎಂದು. ಆರೋಹವು ಶುದ್ಧಧನ್ಯಾಸಿ ಅಥವಾ ಉದಯರವಿಚಂದ್ರಿಕಾ. ಅಲ್ಲಿರುವ ಭಾರ ಒಂದು ಬಗೆಯ ಬಿಕ್ಕಟ್ಟನ್ನು ತಂದು sustained melancholy ಯನ್ನು ತೋರಿಸಿದೆ. ಈ ತೆರನಾದದ್ದು ಅವರ ಶಕ್ತಿ. ಯಾವುದೇ ರಾಗದ ಸ್ವರೂಪಕ್ಕೆ ಧಕ್ಕೆ ಬರದಂತೆ ಪ್ರತ್ಯೇಕವಾದ ಸ್ವರಸಂಕ್ರಮವನ್ನು ಇಟ್ಟುಕೊಳ್ಳುತ್ತಿದ್ದರು. ತನ್ಮೂಲಕ ರಾಗಮೂರ್ಛನೆಯಲ್ಲಿಯೇ ತಮ್ಮದಾದ ಆಯ್ಕೆ ಮಾಡಿಕೊಂಡು ಇದುವರಿಗೆ ಆವಿಷ್ಕೃತವಾದ ವಾದಿ-ಸಂವಾದಿಗಳಿಗಿಂತ ಭಿನ್ನವಾದುವನ್ನು ತಾತ್ಕಾಲಿಕವಾಗಿಯಾದರೂ ತಂದು ನಮ್ಮನ್ನು ಒಪ್ಪಿಸುತ್ತಿದ್ದರು. ಆ ಬಗೆಯ ಪ್ರಾತಿಭ ವಿಶೇಷವಾದದ್ದು. ‘ಸುಬ್ಬಾಶಾಸ್ತ್ರಿ’ ಚಲನಚಿತ್ರಕ್ಕೆ ಸಂಗೀತನಿರ್ದೇಶನ ಮಾಡಿದವರು ಪ್ರಸಿದ್ಧ ವೀಣಾವಿದ್ವಾಂಸರಾದ ದೊರೈಸ್ವಾಮಿ ಅಯ್ಯಂಗಾರ್ಯರು ಮತ್ತು ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಕೃಷ್ಣಮೂರ್ತಿ. ಕೃಷ್ಣಮೂರ್ತಿ ಅವರೇ  ನನಗೆ ಹೇಳಿದ ಸಂಗತಿ ನೆನಪಿಗೆ ಬರುತ್ತದೆ. ಆ ಚಲನಚಿತ್ರದ ಸ್ವರಸಂಯೋಜನೆ ಮಾಡಬೇಕೆಂದು ಬಾಲಮುರಳಿ ಅವರನ್ನು ಬರಮಾಡಿಕೊಂಡು ಧ್ವನಿಮುದ್ರಣಕ್ಕಾಗಿ ನಿಲ್ಲಬೇಕೆಂದರೆ, ಅವರು ದೊಡ್ಡ ಪರಿವಾರದೊಡನೆ ಬಂದು ಅವರ ಜೊತೆಗಿನ ವಿಲಾಸದಲ್ಲಿಯೇ ಕಾಲಕ್ಷೇಪ ಮಾಡುತ್ತಿದ್ದರು. ವಾದ್ಯಗೋಷ್ಠಿಯನ್ನು ಸಜ್ಜುಮಾಡಿ, ಸ್ವರಸಂಯೋಜನೆ ಮಾಡಿ ತಂದುಕೊಟ್ಟರೆ ಅದನ್ನು ನೋಡಿದೊಡನೆಯೇ ಸಾಹಿತ್ಯವನ್ನು ಬರೆದುಕೊಂಡು, ಎತ್ತುಗಡೆಯ ಸ್ವರವನ್ನು ಮಾತ್ರ ಗುರುತು ಮಾಡಿಕೊಂಡು, ರಾಗ ಯಾವುದೆಂದು ನೋಡಿಕೊಂಡು “ಇಂತೇನಾ” ಎಂದು ತೆಲುಗಿನಲ್ಲಿ ಹೇಳುತ್ತಿದ್ದರಂತೆ. ಅದನ್ನು ತತ್ಕ್ಷಣವೇ ಹಾಡುತ್ತಿದ್ದರು. ಬೆಳ್ಳಿಯ ತೆರೆಯ ಮೇಲೆ ಆ ಹಾಡು ಎಷ್ಟು ಕಾಲ ಬರುವುದೋ ಅಷ್ಟೇ ಕಾಲದಲ್ಲಿ recording ಮುಗಿಯುತ್ತಿತ್ತು. ಆಮೇಲೆ ಅವರು ಮತ್ತೆ ತಮ್ಮ ಪರಿವಾರದೊಂದಿಗೆ ಲೀನವಾಗುತ್ತಿದ್ದರು. ಅವರ ವಿನೋದ, ಹರಟೆ ನಿರಂತರವಾಗಿ ಸಾಗುತ್ತಿದ್ದವು. ಸಂಗೀತನಿರ್ದೇಶಕರು ಮತ್ತೆ ಮುಂದಿನ ಹಾಡನ್ನು ಎರಡು ಮೂರು ಘಂಟೆಗಳಲ್ಲಿ ತಯಾರಿಸಿ ತಂದುಕೊಟ್ಟರೆ ಇದೇ ಗತಿ. ಹೀಗೆ ಒಂದು ದಿವಸದಲ್ಲಿಯೇ ಚಲನಚಿತ್ರದ ಎಲ್ಲ ಹಾಡುಗಳ ಧ್ವನಿಮುದ್ರಣವಾಯಿತು. ಆದರೆ ಅದೇ ಚಲನಚಿತ್ರದ ಮತ್ತೊಂದು ಹಾಡನ್ನು ಮತ್ತೊಬ್ಬ ಕಲಾವಿದರಿಂದ ಹಾಡಿಸುವಾಗ ಎರಡು ದಿವಸ ಶ್ರಮಿಸಬೇಕಾಯಿತಂತೆ. ಅದೇ ರೀತಿಯಲ್ಲಿ ಅವರ ಕ್ಯಾಸೆಟ್ ಧ್ವನಿಮುದ್ರಿಕೆಗಳೂ ಕೂಡ ಅಪಾರಜನಪ್ರೀತಿಯನ್ನು ಪಡೆದುಕೊಂಡವು. ಅದು ದೊಡ್ಡ ಯೋಗದಾನವಾಯಿತು. ನಾವು ಸದಾ ಅದಕ್ಕೆ ಕೃತಜ್ಞರಾಗಿರಬೇಕು. ಅವಿಲ್ಲದಿದ್ದಲ್ಲಿ ಬಾಲಮುರಳೀಕೃಷ್ಣರ ಮಧ್ಯವಯಸ್ಸಿನಲ್ಲಿ ವಿಕಸಿಸಿದ ಗಾನಮಾಧುರ್ಯ ನಮ್ಮ ಪಾಲಿಗೆ ದಕ್ಕುತ್ತಿರಲಿಲ್ಲ.

ಬಾಲಮುರಳಿ ಅವರಂಥ ಮಹಾಪ್ರತಿಭೆಗೂ ಕೂಡ ವಿರೋಧ ಎದುರಾಯಿತೆಂದರೆ ಅದೊಂದು ಆಶ್ಚರ್ಯವಲ್ಲದ ಆದರೆ ಅನ್ಯಾಯವಾದ ಸಂಗತಿ. ಈ ರೀತಿಯಾದ ಪ್ರತಿಭೆಯುಳ್ಳ ದೊಡ್ಡಕಲಾವಿದರಿಗೆ ಎಲ್ಲ ಕಾಲದಲ್ಲಿಯೂ ವಿರೋಧವಿದ್ದದ್ದೇ. ಮಾತೊಂದುಂಟಲ್ಲವೇ - ದೊಡ್ಡ ಕಲಾವಿದ ಬಂದಾಗ ಮೊದಲು ತೋರುವುದು ವಿರೋಧ, ಆಮೇಲೆ ಉಪೇಕ್ಷೆ, ತದನಂತರ ಆರಾಧನೆ. ಪುಣ್ಯವಶಾತ್ ತುಂಬುಜೀವನವನ್ನು ನಡೆಸಿದ ಬಾಲಮುರಳಿ ಅವರು ಮೂರನೆಯ ಹಂತವನ್ನೂ ಚೆನ್ನಾಗಿ ಕಾಣುವಂತಾಯಿತು. ಎಷ್ಟೋ ಬಾರಿ ಅವೆಲ್ಲ ಸೇರಿ ಬರುತ್ತಿದ್ದದ್ದೂ ಉಂಟು. ರಾಗಗಳ ಆವಿಷ್ಕಾರದ ಬಗೆಗಿನ ತಗಾದೆಯಿಂದಾಗಿ ಅವರನ್ನು ಕೆಲವರು ಅಹಂಬ್ರಾಹ್ಮೀಭವಿಸಿದ ಗಾಯಕರು ಹಾಗೂ ವಾದಕರು ಬಹಳ  ಅನುದಾರವಾಗಿ ನಡೆಸಿಕೊಂಡರು. ಷಡ್ಯಂತ್ರವೊಂದನ್ನು ಕಲ್ಪಿಸಿ ಅವರನ್ನು ನ್ಯಾಯಾಲಯಕ್ಕೆ ಎಳೆದರು. ಆದರೆ ಬಾಲಮುರಳೀ ಅವರು ದಿಟ್ಟತನದಿಂದ ನಿಂತು ವಾದದಲ್ಲಿ ಗೆದ್ದದ್ದಲ್ಲದೆ ಅವರೆಲ್ಲರ ಶೃಂಗಭಂಗವನ್ನು ಸಭಾಮುಖದಲ್ಲಿಯೇ ಮಾಡಿದ್ದು ಒಂದು ಇತಿಹಾಸವೇ ಆಯಿತು. ಇಂತಹ ವಿಷಮಸಂದರ್ಭದಲ್ಲಿಯೂ ಅವರು ತರ್ಕನಿಷ್ಠತೆಯನ್ನು ಮರೆಯಲಿಲ್ಲ. ಹಾಗಾಗಿಯೇ ಅವರು ಪೂರ್ವಾಚಾರ್ಯರನ್ನು, ಸಮಕಾಲಿಕರನ್ನು ತಮ್ಮದಾದ ರೀತಿಯಲ್ಲಿ ವಿಮರ್ಶಿಸಲು ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ಉಲ್ಲೇಖಾರ್ಹವಾದ ಮತ್ತೊಂದು ಸಂದರ್ಭವಿದೆ.  ಅವರನ್ನೊಮ್ಮೆ “ನೀವು ಸಂಪ್ರದಾಯವನ್ನು ಪಾಲಿಸುವುದಿಲ್ಲ,  ದಾಕ್ಷಿಣಾತ್ಯಸಂಗೀತವನ್ನು ಹಾಡುವುದಿಲ್ಲ, ತ್ರಿಮೂರ್ತಿಸಂಗೀತವನ್ನು ಹೆಚ್ಚಾಗಿ ಹಾಡುವುದಿಲ್ಲ” ಎಂಬುದಾಗಿ ಆಕ್ಷೇಪ ಮಾಡಿದಾಗ ಅವರು, ಯಾವುದು ಸಂಪ್ರದಾಯ? ನನಗಿರುವುದು ಒಂದೇ ಸಂಪ್ರದಾಯ - ರಿ ನಿ. ಅದಕ್ಕಿಂತ ಮಿಗಿಲಲ್ಲ.” ಎಂದಿದ್ದರು.

Dr Padma Subrahmanyam

ಇದೇ ಮಾತನ್ನೊಮ್ಮೆ ಪದ್ಮಾ ಸುಬ್ರಹ್ಮಣ್ಯಂ ಅವರನ್ನು ಕೇಳಿದಾಗ ಅವರು, “ಯಾವ ಕಾಲದ ಸಂಪ್ರದಾಯ? ೧೨ನೇ ಶತಮಾನದ್ದೋ ೧೬ನೇ ಶತಮಾನದ್ದೋ ೧೮ನೇ ಶತಮಾನದ್ದೋ” ಎಂದು ಕೇಳಿ ಆಯೋಜಕರೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದರು. ಬಾಲಮುರಳಿ ಅವರೇ ಹೇಳಿದ ಮತ್ತೊಂದು ಮಾತು. ಅವರ ವಿರೋಧಿಗಳು ಹೇಳುತ್ತಿದ್ದರಂತೆ, “ನಿಮ್ಮ ಶ್ರುತಿ ಮಿಕ್ಕೆಲ್ಲರೂ ಶ್ರುತಿ ಮಾಡಿಕೊಳ್ಳುವಷ್ಟು ಶುದ್ಧವಾದದ್ದು. ನಿಮ್ಮ ಲಯ ಬೇರೆಲ್ಲರನ್ನೂ ಲಯವಾಗಿಸುತ್ತದೆ. ನಿಮ್ಮ ಸಾಹಿತ್ಯಶುದ್ಧಿ ಸರಸ್ವತಿಯ ಸಿದ್ಧಿ. ಆದರೂ ನಿಮ್ಮ ಹಾಡು ಶಾಸ್ತ್ರೀಯವಲ್ಲ" ಎಂದು. ಅವರು ಕೇಳಿದ್ದರಂತೆ, “ಹಾಗಿದ್ದರೆ ಶಾಸ್ತ್ರೀಯಸಂಗೀತಕ್ಕೆ ಲಯಶುದ್ಧಿ, ಭಾವ ಮತ್ತು ಸಾಹಿತ್ಯಶುದ್ಧಿ ಬೇಡವೇ?” ಎಂದು. ಇಂಥವರನ್ನು ವಿಮರ್ಶಿಸುವುದು ದುಸ್ಸಾಹಸ ಮಾತ್ರವಲ್ಲ ಕಲೆಗೇ ಮಾಡುವ ಅಪಚಾರವಾದೀತು.     

ಬಾಲಮುರಳಿ ಅವರು ಸಂಗೀತದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅದನ್ನು ಸಂಗೀತವಾಗಿಯೇ ಉಳಿಸಿದರು, ಅದನ್ನು ಬೇರಾವುದೇ ವಾಮಾಚಾರಕ್ಕೂ ಬಳಸಲಿಲ್ಲ. ಸಾಮಾಜಿಕನ್ಯಾಯದ ನೆವದಲ್ಲಿ ಅವರು ತಮ್ಮ ಅಪಾರಪ್ರತಿಭೆಯನ್ನು ದುರ್ವಿನಿಯೋಗ ಮಾಡಲಿಲ್ಲ. ಆದರೆ ಅವರ ಪ್ರತಿಭೆಯಲ್ಲಿ ತಿಲಾಂಶವೂ ಇಲ್ಲದವರು, ಪ್ರಾಮಾಣಿಕತೆಯನ್ನೇ ಬಲ್ಲದವರು ಈ ರೀತಿಯಾದ ಅಡ್ಡದಾರಿಗಳನ್ನು ಹಿಡಿಯುತ್ತಿರುವುದನ್ನು ನೋಡಿದಾಗ ಪ್ರತಿಭಾರಹಿತನಾದ ಧೂರ್ತನೊಬ್ಬ ಯಾವೆಲ್ಲ ರೀತಿಯಲ್ಲಿ ಲೋಕಕಂಟಕನಾಗಬಲ್ಲ, ಮತ್ತು ಮಹಾಪ್ರತಿಭಾಶಾಲಿ ಎಷ್ಟೆಲ್ಲಾ ಆನಂದವನ್ನು ಲೋಕಕ್ಕೆ ವಿತರಿಸಬಲ್ಲ ಎಂಬುದು ತಿಳಿಯುತ್ತದೆ. ಕಲೆಯ ಮೂಲಕ ಆನಂದವನ್ನು ವಿತರಿಸಿಬಿಟ್ಟರೆ ಬೇರೆಲ್ಲ ಸಾಮಾಜಿಕನ್ಯಾಯಗಳೂ ಸಾಧಿತವಾಗಿಬಿಡುತ್ತವೆ ಎಂಬ ಸತ್ಯ ಅವರಿಗೆ ಆಂತರಂಗಿಕವಾಗಿ ತಿಳಿದಿತ್ತು. ಹಾಗಾಗಿಯೇ ಸಂಗೀತದ ಮೂಲಕವಾಗಿ ಅವರು ಬೇರಾವುದನ್ನೂ ಜನರಿಗೆ ಮುಟ್ಟಿಸುವುದಕ್ಕೆ ಇಷ್ಟಪಡಲಿಲ್ಲ.

ಸ್ವರಗಳಿಗೆ ನಿರುಪಾಧಿಕವಾದ ಕೇವಲಾದ್ವೈತಸ್ಥಿತಿಯನ್ನು ಕಲ್ಪಿಸಿದ ಈ ಮಹಾಕಲಾವಿದರಿಗೆ ನಮ್ಮ ದೇಶ ಎಷ್ಟೋ ಮುನ್ನವೇ ಭಾರತರತ್ನದಂಥ ಪ್ರಶಸ್ತಿ ಕೊಡಬೇಕಿತ್ತು. ಮಿಕ್ಕ ಸಂಗೀತಗಾರರಿಗೆ ಈ ಪ್ರಶಸ್ತಿ ಬಂದಿರುವುದುಂಟು. ಅವರವರ ಸಾಧನೆಗಳು ಏನೇ ಇರಲಿ. ಅವೆಲ್ಲಕ್ಕೂ ಮಿಗಿಲಾದ ಸಮಗ್ರಸಾಧನೆ ಇವರದ್ದು ಎಂಬುದನ್ನು ಎಲ್ಲ ಗುಣಗ್ರಾಹಿಗಳೂ ಒಪ್ಪಬೇಕು. ಆ ಪ್ರಶಸ್ತಿಯನ್ನು ಅವರು ಭೌತಿಕವಾಗಿ ಇದ್ದಾಗಲೇ ಕೊಟ್ಟಿದ್ದರೆ ಮರ್ಯಾದೆಯ ಜೊತೆಗೆ ಸಂತೋಷವೂ ಇರುತ್ತಿತ್ತು. ಮುಂದೆಂದೋ ಬರಬಹುದು ; ಮರ್ಯಾದೆ ದಕ್ಕೀತು ಆದರೆ ಆನಂದ ಉಳಿದೀತೆ? ಇದನ್ನು ಅಧಿಕಾರದಲ್ಲಿರುವವರು ಗಮನಿಸಬೇಕು. ಯಾರೇ ಒಪ್ಪಲಿ ಬಿಡಲಿ ಬಾಲಮುರಳೀಕೃಷ್ಣ ಅವರು ನಮ್ಮ ಪಾಲಿಗೆ ಇಸೈ ದೈವಂ’. ಅವರಿಂದು ಇಲ್ಲವಾಗಿದ್ದಾರೆ. ಈಚೆಗಷ್ಟೇ ಯಾರೋ ಹೇಳಿದಂತೆ ‘ಕೃಷ್ಣ ನೀ ಬೇಗನೆ ಬಾರೋ’ ಎಂದು ನಾವು ಹಾಡಬೇಕಿದೆ. ಅವರು ತಮ್ಮ ಸಂಗೀತಸ್ವರೂಪದಲ್ಲಿ ಎಂದೆಂದಿಗೂ ನಮ್ಮ ಮಧ್ಯೆ ಇರುತ್ತಾರೆ.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Indian Perspective of Truth and Beauty in Homer’s Epics is a unique work on the comparative study of the Greek Epics Iliad and Odyssey with the Indian Epics – Rāmāyaṇa and Mahābhārata. Homer, who laid the foundations for the classical tradition of the West, occupies a stature similar to that occupied by the seer-poets Vālmīki and Vyāsa, who are synonymous with the Indian culture. The author...

Karnataka’s celebrated polymath, D V Gundappa brings together in the sixth volume of reminiscences character sketches of prominent public figures, liberals, and social workers. These remarkable personages hailing from different corners of South India are from a period that spans from the late nineteenth century to the mid-twentieth century. Written in Kannada in the 1970s, these memoirs go...

An Introduction to Hinduism based on Primary Sources

Authors: Śatāvadhānī Dr. R Ganesh, Hari Ravikumar

What is the philosophical basis for Sanātana-dharma, the ancient Indian way of life? What makes it the most inclusive and natural of all religio-philosophical systems in the world?

The Essential Sanātana-dharma serves as a handbook for anyone who wishes to grasp the...

Karnataka’s celebrated polymath, D V Gundappa brings together in the fifth volume, episodes from the lives of traditional savants responsible for upholding the Vedic culture. These memorable characters lived a life of opulence amidst poverty— theirs  was the wealth of the soul, far beyond money and gold. These vidvāns hailed from different corners of the erstwhile Mysore Kingdom and lived in...

Padma Bhushan Dr. Padma Subrahmanyam represents the quintessence of Sage Bharata’s art and Bhārata, the country that gave birth to the peerless seer of the Nāṭya-veda. Padma’s erudition in various streams of Indic knowledge, mastery over many classical arts, deep understanding of the nuances of Indian culture, creative genius, and sublime vision bolstered by the vedāntic and nationalistic...

Bhārata has been a land of plenty in many ways. We have had a timeless tradition of the twofold principle of Brāhma (spirit of wisdom) and Kṣāttra (spirit of valour) nourishing and protecting this sacred land. The Hindu civilisation, rooted in Sanātana-dharma, has constantly been enriched by brāhma and safeguarded by kṣāttra.
The renowned Sanskrit poet and scholar, Śatāvadhānī Dr. R...

ಛಂದೋವಿವೇಕವು ವರ್ಣವೃತ್ತ, ಮಾತ್ರಾಜಾತಿ ಮತ್ತು ಕರ್ಷಣಜಾತಿ ಎಂದು ವಿಭಕ್ತವಾದ ಎಲ್ಲ ಬಗೆಯ ಛಂದಸ್ಸುಗಳನ್ನೂ ವಿವೇಚಿಸುವ ಪ್ರಬಂಧಗಳ ಸಂಕಲನ. ಲೇಖಕರ ದೀರ್ಘಕಾಲಿಕ ಆಲೋಚನೆಯ ಸಾರವನ್ನು ಒಳಗೊಂಡ ಈ ಹೊತ್ತಗೆ ಪ್ರಧಾನವಾಗಿ ಛಂದಸ್ಸಿನ ಸೌಂದರ್ಯವನ್ನು ಲಕ್ಷಿಸುತ್ತದೆ. ತೌಲನಿಕ ವಿಶ್ಲೇಷಣೆ ಮತ್ತು ಅಂತಃಶಾಸ್ತ್ರೀಯ ಅಧ್ಯಯನಗಳ ತೆಕ್ಕೆಗೆ ಬರುವ ಬರೆಹಗಳೂ ಇಲ್ಲಿವೆ. ಶಾಸ್ತ್ರಕಾರನಿಗಲ್ಲದೆ ಸಿದ್ಧಹಸ್ತನಾದ ಕವಿಗೆ ಮಾತ್ರ ಸ್ಫುರಿಸಬಲ್ಲ ಎಷ್ಟೋ ಹೊಳಹುಗಳು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿವೆ. ಈ...

Karnataka’s celebrated polymath, D V Gundappa brings together in the fourth volume, some character sketches of the Dewans of Mysore preceded by an account of the political framework of the State before Independence and followed by a review of the political conditions of the State after 1940. These remarkable leaders of Mysore lived in a period that spans from the mid-nineteenth century to the...

Bharatiya Kavya-mimamseya Hinnele is a monograph on Indian Aesthetics by Mahamahopadhyaya N. Ranganatha Sharma. The book discusses the history and significance of concepts pivotal to Indian literary theory. It is equally useful to the learned and the laity.

Sahitya-samhite is a collection of literary essays in Kannada. The book discusses aestheticians such as Ananda-vardhana and Rajashekhara; Sanskrit scholars such as Mena Ramakrishna Bhat, Sridhar Bhaskar Varnekar and K S Arjunwadkar; and Kannada litterateurs such as DVG, S L Bhyrappa and S R Ramaswamy. It has a foreword by Shatavadhani Dr. R Ganesh.

The Mahābhārata is the greatest epic in the world both in magnitude and profundity. A veritable cultural compendium of Bhārata-varṣa, it is a product of the creative genius of Maharṣi Kṛṣṇa-dvaipāyana Vyāsa. The epic captures the experiential wisdom of our civilization and all subsequent literary, artistic, and philosophical creations are indebted to it. To read the Mahābhārata is to...

Shiva Rama Krishna

சிவன். ராமன். கிருஷ்ணன்.
இந்திய பாரம்பரியத்தின் முப்பெரும் கதாநாயகர்கள்.
உயர் இந்தியாவில் தலைமுறைகள் பல கடந்தும் கடவுளர்களாக போற்றப்பட்டு வழிகாட்டிகளாக விளங்குபவர்கள்.
மனித ஒற்றுமை நூற்றாண்டுகால பரிணாம வளர்ச்சியின் பரிமாணம்.
தனிநபர்களாகவும், குடும்ப உறுப்பினர்களாகவும், சமுதாய பிரஜைகளாகவும் நாம் அனைவரும் பரிமளிக்கிறோம்.
சிவன் தனிமனித அடையாளமாக அமைகிறான்....

ऋतुभिः सह कवयः सदैव सम्बद्धाः। विशिष्य संस्कृतकवयः। यथा हि ऋतवः प्रतिसंवत्सरं प्रतिनवतामावहन्ति मानवेषु तथैव ऋतुवर्णनान्यपि काव्यरसिकेषु कामपि विच्छित्तिमातन्वते। ऋतुकल्याणं हि सत्यमिदमेव हृदि कृत्वा प्रवृत्तम्। नगरजीवनस्य यान्त्रिकतां मान्त्रिकतां च ध्वनदिदं चम्पूकाव्यं गद्यपद्यमिश्रितमिति सुव्यक्तमेव। ऐदम्पूर्वतया प्रायः पुरीपरिसरप्रसृतानाम् ऋतूनां विलासोऽत्र प्रपञ्चितः। बेङ्गलूरुनामके...

The Art and Science of Avadhānam in Sanskrit is a definitive work on Sāhityāvadhānam, a form of Indian classical art based on multitasking, lateral thinking, and extempore versification. Dotted throughout with tasteful examples, it expounds in great detail on the theory and practice of this unique performing art. It is as much a handbook of performance as it is an anthology of well-turned...

This anthology is a revised edition of the author's 1978 classic. This series of essays, containing his original research in various fields, throws light on the socio-cultural landscape of Tamil Nadu spanning several centuries. These compelling episodes will appeal to scholars and laymen alike.
“When superstitious mediaevalists mislead the country about its judicial past, we have to...

The cultural history of a nation, unlike the customary mainstream history, has a larger time-frame and encompasses the timeless ethos of a society undergirding the course of events and vicissitudes. A major key to the understanding of a society’s unique character is an appreciation of the far-reaching contributions by outstanding personalities of certain periods – especially in the realms of...

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhānī Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective to every discussion. These essays deal with the philosophy, history, aesthetics, and practice of...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...