“ಕನ್ನಡಸಾಹಿತ್ಯವನ್ನು ಓದಬೇಕು ಎಂದು ಬಯಸುತ್ತಿರುವ ನಮ್ಮ ಮುಂದಿನ ತಲೆಮಾರಿನ ಮಕ್ಕಳಿಗೆ ನಾವು ಹೇಗೆ ಮಾರ್ಗದರ್ಶನ ಮಾಡಬಹುದು? ಅವರು ಯಾವುದನ್ನು ಮೊದಲು ಪ್ರಾರಂಭಿಸಬೇಕು? ಯಾವ ಲೇಖಕರಿಂದ ಪ್ರಾರಂಭಿಸಿದರೆ ಓದಿನಲ್ಲಿ ಆಸಕ್ತಿ ಬೆಳೆಯುತ್ತದೆ? ಯಾವ ಯಾವ ಲೇಖಕರು ಯಾವ ಯಾವ ರೀತಿಯ ಸಾಹಿತ್ಯವನ್ನು ರಚಿಸಿದ್ದಾರೆ? ಅವು ಯಾವ ಯಾವ ವಯಸ್ಸಿನ ವಿದ್ಯಾರ್ಥಿಗಳಿಗೆ ಸುಬೋಧವಾಗಿರಬಹುದು? ಮೊಬೈಲು, ಅಂತರ್ಜಾಲದ ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಓದುವ ಹವ್ಯಾಸವನ್ನು ಹೇಗೆ ಬೆಳೆಸಬೇಕು?” ಎಂಬ ಅನೇಕ ಪ್ರಶ್ನೆಗಳನ್ನು ನಾವೆಲ್ಲ ಸ್ನೇಹಿತರು ಹಲವು ಬಾರಿ ಚರ್ಚಿಸಿದ್ದುಂಟು. ನಮ್ಮ ಗೆಳೆಯರ ಬಳಗದಲ್ಲಷ್ಟೇ ಅಲ್ಲದೆ, ಕರ್ಣಾಟಕದ ಹಲವು ಕಡೆಗಳಲ್ಲಿ ಇರುವವರು, ಭಾರತದ ಇತರ ಕಡೆಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಕ್ಕಳಿಗೋಸ್ಕರ ಈ ನಿಟ್ಟಿನಲ್ಲಿ ವಿಚಾರಿಸಿಯೂ ಇದ್ದಾರೆ. ಮಕ್ಕಳಿಗೋಸ್ಕರವಷ್ಟೇ ಅಲ್ಲದೇ ತಮಗಾಗಿಯೂ ಕೆಲವರು ಹಿರಿಯರು ಕೇಳಿದ್ದಾರೆ. ಶೈಕ್ಷಣಿಕ ಪಾಠ್ಯಪುಸ್ತಕಗಳು ಈ ಬಗೆಯಲ್ಲಿ ಉತ್ಕೃಷ್ಟವಾದ ಶುದ್ಧಸಾಹಿತ್ಯವನ್ನು ಪರಿಚಯಿಸುವ ದಿಶೆಯಲ್ಲಿ ಹಿಂದುಳಿದಿವೆಯೆಂದೂ, ಇದಕ್ಕಾಗಿ ಶುದ್ಧಸಾಹಿತ್ಯಕದೃಷ್ಟಿಯಿಂದ ಕ್ರಮಬದ್ಧವಾದ ಪಾಠ್ಯವಿಷಯದ ಅವಶ್ಯಕತೆ ಇದೆ ಎಂದೂ ಅನೇಕ ಶಿಕ್ಷಣತಜ್ಞರೂ, ಮಕ್ಕಳ ಪಾಲಕರೂ ಅಭಿಪ್ರಾಯಪಟ್ಟಿದ್ದಾರೆ. ಆ ಕಾರಣದಿಂದ ಕನ್ನಡ ಸಾಹಿತ್ಯದಲ್ಲಿ ಪ್ರಾತಿನಿಧಿಕವಾದ ಲೇಖನ, ಕಥೆ, ಕಾದಂಬರಿ ಕಾವ್ಯ ಮೊದಲಾದ ಎಲ್ಲ ಪ್ರಕಾರಗಳಲ್ಲೂ ಸಾರವತ್ತಾದ ಭಾಗವನ್ನು ಸಂಗ್ರಹಿಸಿ ಕೊಡಬೇಕು ಎಂದು ಭಾವಿಸಿಕೊಂಡು ಈ ಪ್ರಯತ್ನವನ್ನು ಮೊದಲು ಮಾಡಿದೆವು. ಹೀಗೆ ಸಂಗ್ರಹಿಸಿದ್ದನ್ನು ಹಲವು ಸ್ತರಗಳಲ್ಲಿ ವಿಭಾಗಿಸಿ ಬೇರೆ ಬೇರೆ ವಯೋಮಾನಕ್ಕೆ ತಕ್ಕಂತೆ ಅದನ್ನು ವಿಂಗಡಿಸಿ ಕೊಟ್ಟರೆ ಮಕ್ಕಳು ಶಾಲೆಯ ಪಾಠ್ಯಪುಸ್ತಕವನ್ನು ಪರೀಕ್ಷೆಗೋಸ್ಕರ ಓದುವುದರ ಜೊತೆಯಲ್ಲಿ, ಈ ಸಾಹಿತ್ಯವನ್ನೂ ವರ್ಷಾವಧಿ ಕಾಲದಲ್ಲಿ ಓದಿಕೊಂಡು ಆನಂದವನ್ನು ಪಡೆಯಬಹುದು ಎಂಬುದು ಇದರ ಮುಖ್ಯ ಉದ್ದೇಶವಾಯಿತು.
ಈ ಸಂಗ್ರಹದಲ್ಲಿ ಗದ್ಯಭಾಗ ಪದ್ಯಭಾಗ ಎಂಬುದು ಎರಡು ಮುಖ್ಯ ವಿಭಾಗಗಳು ಎಂದು ಭಾವಿಸಿಕೊಂಡರೆ, ಕಾವ್ಯದ ವಿಭಾಗದಲ್ಲಿ ಹಳಗನ್ನಡ-ನಡುಗನ್ನಡ ಹಾಗೂ ಹೊಸಗನ್ನಡದ ಹಲವು ಶ್ರೇಷ್ಠ ಕೃತಿಗಳ ಭಾಗಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವುಗಳಲ್ಲಿ ಕಾವ್ಯಗುಣವೇ ಪ್ರಧಾನವಾದ ಅಳತೆಗೋಲಾಗಿದ್ದು, ಗೇಯತೆ, ಛಂದೋಬದ್ಧತೆ ಮೊದಲಾದವುಗಳು ಅವುಗಳ ಆಯ್ಕೆಗೆ ಉಳಿದ ಪ್ರಮುಖ ಮಾನದಂಡಗಳಾಗಿವೆ. ಆ ಕಾರಣ ನವೋದಯದ ನಂತರದ ಕಾಲಘಟ್ಟದ ಕಾವ್ಯಗಳು ಈ ಗುಣಗಳಿಗೆ ಅಳವಟ್ಟವುಗಳು ಮಾತ್ರ ವಿರಳವಾಗಿ ಇವೆ. ಉಳಿದ ಕಾವ್ಯಗಳಲ್ಲಿಯೂ ಚಂಪೂ- ಮುಕ್ತಕ- ಷಟ್ಪದಿ- ವಚನ- ಕೀರ್ತನೆ- ಭಾವಗೀತೆ- ಕಥನಕವನ ಇತ್ಯಾದಿ ಎಲ್ಲ ವಿಧಗಳ ಪರಿಚಯಾತ್ಮಕವಾದ ಪ್ರಾತಿನಿಧಿಕ ಸಂಗ್ರಹ ಇದರಲ್ಲಿ ಇದೆ.
ಗದ್ಯಭಾಗದಲ್ಲಿ ಪುನಃ ಕಾಲ್ಪನಿಕ ಹಾಗೂ ಕಾಲ್ಪನಿಕವಲ್ಲದವು ಎರಡು ಮುಖ್ಯ ವಿಭಾಗಗಳು, ಅವುಗಳಲ್ಲಿ ಕಾಲ್ಪನಿಕವಾದವುಗಳಲ್ಲಿ ಕಥೆ, ಕಾದಂಬರಿಯ ಆಯ್ದ ಭಾಗಗಳು, ನೀಳ್ಗತೆಗಳನ್ನು ಆರಿಸಿಕೊಳ್ಳಲಾಗಿದೆ. ಕಾಲ್ಪನಿಕವಲ್ಲದ ಲೇಖನಗಳ ವಿಭಾಗದಲ್ಲಿ ಲಲಿತಪ್ರಬಂಧ, ವೈಚಾರಿಕಪ್ರಬಂಧ, ಪ್ರವಾಸಕಥನ, ವೈಚಾರಿಕಲೇಖನ, ಐತಿಹಾಸಿಕಲೇಖನಗಳು, ವ್ಯಕ್ತಿಚಿತ್ರ, ಹರಟೆ ಇತ್ಯಾದಿಗಳೇ ಪ್ರಧಾನವಾಗಿವೆ. ಕೇವಲ ಪರಿಚಯಕ್ಕೋಸ್ಕರ ವೈಜ್ಞಾನಿಕ ಲೇಖನಗಳನ್ನೂ, ಭಾಷಾಶಾಸ್ತ್ರದ ಲೇಖನಗಳನ್ನೂ ಒಂದೆರಡನ್ನು ತೆಗೆದುಕೊಳ್ಳಲಾಗಿದೆ. ಈ ವಿಭಾಗದಲ್ಲಿಯೂ ಪ್ರಮುಖವಾಗಿ ನವೋದಯದ ಕಾಲದ ವರೆಗಿನವೂ ಆ ನಂತರದ ರಚನೆಗಳಲ್ಲಿ ಉತ್ತಮಗುಣದವು ಎನಿಸಿದವುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇವೆರಡು ಮುಖ್ಯವಿಭಾಗಗಳಲ್ಲದೇ ಮೂರನೆಯದಾಗಿ ನಾಟಕ ವಿಭಾಗವೂ ಇದೆ. ಅದರಲ್ಲಿ ಕೆಲವು ಪ್ರಸಿದ್ಧ ನಾಟಕಗಳ ಆಯ್ದ ಭಾಗಗಳನ್ನು ಆರಿಸಿಕೊಳ್ಳಲಾಗಿದೆ. ಇಲ್ಲಿ ಮುಖ್ಯವಾಗಿ ನವೋದಯ ಅಥವಾ ಅದಕ್ಕೂ ಪೂರ್ವದ ನಾಟಕಗಳು, ಹಾಗೂ ಸಂಸ್ಕೃತ- ಇಂಗ್ಲಿಷ್ ಮೊದಲಾದ ನಾಟಕದ ಅನುವಾದಿತ ಭಾಗಗಳನ್ನು ಆರಿಸಿಕೊಳ್ಳಲಾಗಿದೆ. ನವ್ಯ-ನವ್ಯೋತ್ತರ ಕಾಲದ ಸಾಮಾಜಿಕ ನಾಟಕಗಳನ್ನು ಕೈಬಿಡಲಾಗಿದೆ.
ಈ ಎಲ್ಲ ವಿಭಾಗಗಳಲ್ಲಿಯೂ ಬೇರೆ ಬೇರೆ ಸ್ತರದಲ್ಲಿ ಪುನಃ ವಿಂಗಡಿಸಲಾಗಿದೆ. ಅವುಗಳನ್ನು ವಿದ್ಯಾರ್ಥಿಗಳ ವಯೋಮಾನಕ್ಕೆ ತಕ್ಕಂತೆ, ಅವರ ಪ್ರಬುದ್ಧತೆಗೆ ಯುಕ್ತವಾಗುವಂತಹ ಲೇಖನಗಳನ್ನು ಎಲ್ಲಾ ವಿಭಾಗಗಳಿಂದಲೂ ಆರಿಸಿಕೊಂಡು ಮೂರು ಹಂತದಲ್ಲಿ ವರ್ಗೀಕರಿಸಿದ್ದೇವೆ. ಮೊದಲ ಹಂತವು ೭,೮ ಹಾಗೂ ೯ನೇ ತರಗತಿಯ ವಿದ್ಯಾರ್ಥಿಗಳ ಮಟ್ಟಕ್ಕೆ, ಎರಡನೇ ಹಂತವು- ೧೦, ೧೧ ಹಾಗೂ ೧೨ನೇ ತರಗತಿ (ಪಿ.ಯು.ಸಿ) ಹಂತದವರಿಗೆ ಯುಕ್ತವೆಂದೂ ಮೂರನೇ ಹಂತವು ತದನಂತರದ ಪದವಿ ವಿದ್ಯಾರ್ಥಿಗಳ ಮಟ್ಟಕ್ಕೆ ತಕ್ಕದ್ದೆಂದು ಒಂದು ಸ್ಥೂಲವಾದ ವರ್ಗೀಕರಣ. ಮೊದಲ ಹಂತದಲ್ಲಿ ಹೆಚ್ಚು ಕಥಾನಕಯುಕ್ತವಾದವೂ, ಹಾಸ್ಯವೇ ಮೊದಲಾದ ಹೆಚ್ಚು ಮನೋರಂಜಕವಾದವುಗಳನ್ನು ತೆಗೆದುಕೊಂಡಿದ್ದರೆ, ಎರಡನೇ ಹಂತದಲ್ಲಿ ಮೊದಲ ಹಂತಕ್ಕಿಂತ ಸ್ವಲ್ಪ ಹೆಚ್ಚಿನ ಪ್ರೌಢತೆಯುಳ್ಳ ಲೇಖನಗಳನ್ನು ಆರಿಸಿಕೊಳ್ಳಲಾಗಿದೆ. ಪಿಯುಸಿ ಹಾಗೂ ಪದವಿಯ ಹಂತಕ್ಕೆ ಬಂದ ಬಳಿಕ ವಿದ್ಯಾರ್ಥಿಗಳ ವೈಚಾರಿಕ ಶಕ್ತಿ ಇನ್ನಷ್ಟು ಪ್ರಬುದ್ಧವಾಗುವ ಕಾರಣ ಗಂಭೀರವಾದ ಸಾಹಿತ್ಯಕೃತಿಗಳು, ವೈಚಾರಿಕಪ್ರಧಾನವಾದವುಗಳನ್ನೂ ಅಳವಡಿಸಿಕೊಳ್ಳಲಾಗಿದೆ.
ಇಲ್ಲಿ ಮುಖ್ಯವಾಗಿ ಕನ್ನಡದ ಪ್ರಮುಖ ಲೇಖಕರ ಶ್ರೇಷ್ಠ ಕೃತಿಗಳನ್ನು ಆರಿಸಿಕೊಂಡಿದ್ದೇವೆ. ಅವುಗಳಲ್ಲಿಯೂ ಸಾರ್ವಕಾಲಿಕವಾದ ರಚನೆಗಳು ಎನ್ನುವಂತಹ ಬರೆಹಕ್ಕೆ ಪ್ರಾಮುಖ್ಯ ನೀಡಿದ್ದೇವೆ. ಶುದ್ಧ ಸಾಹಿತ್ಯವನ್ನಷ್ಟೇ ಪರಿಚಯಿಸುವುದು ಮುಖ್ಯವಾದ ಉದ್ದೇಶವಾದ ಕಾರಣ ಯಾವುದೋ ದುರಾಗ್ರಹಪೂರಿತವಾದ, ಸಾಮಾಜಿಕ ಚಳುವಳಿ- ಅಜೆಂಡಾ ಇತ್ಯಾದಿಗಳಿಗೆ ಒಳಪಟ್ಟ ಲೇಖನಗಳಗಳನ್ನು ಯಾವುದನ್ನೂ ಆರಿಸಿಕೊಂಡಿಲ್ಲ. ಹಾಗಲ್ಲದೆ ಆರಿಸಿಕೊಂಡ ಪುಸ್ತಕಗಳಲ್ಲಿಯೂ ʼಇಂತಹ ಭಾಗವನ್ನು ಓದಬೇಕುʼ ಎಂದು ನಿರ್ದಿಷ್ಟವಾಗಿ ಹೇಳದೇ ಪೂರ್ತಿಯಾಗಿ ಪುಸ್ತಕವನ್ನೋ ಅಥವಾ ʼಆಯ್ದ ಭಾಗಗಳುʼ ಎಂದೋ ಉಲ್ಲೇಖಿಸಿದ್ದೇವೆ. ಉದಾಹರಣೆಗೆ “ಡಿವಿಜಿ ಅವರ ಜ್ಞಾಪಕಚಿತ್ರಶಾಲೆಯ ಆಯ್ದ ಭಾಗಗಳು” ಎಂದು ಹೇಳಿದಲ್ಲಿ, ಯಾವ ಭಾಗವನ್ನು ಆರಿಸಿಕೊಳ್ಳಬೇಕೆಂಬ ವಿವರಣೆಯನ್ನು ಕೊಟ್ಟಿಲ್ಲ. ಆಸಕ್ತರು ಅಂತಹ ಸಂದರ್ಭದಲ್ಲಿ ಮೂಲವನ್ನು ಪರಾಮರ್ಶಿಸಿ ಅದರಲ್ಲಿ ಸಾರವತ್ತಾದ ಯಾವ ಭಾಗವನ್ನು ಆರಿಸಿಕೊಳ್ಳಬಹುದು ಎಂದು ಇನ್ನೊಂದು ಹಂತ ಮುಂದಕ್ಕೆ ತೆಗೆದುಕೊಂಡು ನೋಡಬಹುದು. ಹಾಗೂ ಮಕ್ಕಳ ವಯಸ್ಸಿಗೆ ಅನುಗುಣವಾಗಿ, ಆಯಾ ಪಾಠ್ಯಭಾಗಗಳು ಎಷ್ಟು ದೀರ್ಘವಾಗಿರಬೇಕು ಎಂಬುದನ್ನು ನಿರ್ಧರಿಸುವ ಕೆಲಸವೂ ಉಳಿದಿದೆ.
ಈ ಪ್ರಾತಿನಿಧಿಕ ಸಂಗ್ರಹ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವುದಕ್ಕೆ ಅನುಕೂಲಕರವಾಗಬಹುದೆಂದು ನಮ್ಮ ಭಾವನೆ. ಈ ಸಂಗ್ರಹವನ್ನು ರಚಿಸುವುದಕ್ಕೆ ನಮ್ಮನ್ನು ಪ್ರೇರಿಸಿದ ಸ್ನೇಹಿತರಾದ ಹರಿ ರವಿಕುಮಾರ್ ಅವರಿಗೆ ಮುಖ್ಯವಾಗಿ ಕೃತಜ್ಞತೆಗಳು. ಇದನ್ನು ಪ್ರಾಥಮಿಕ ಹಂತದಲ್ಲಿ ಪರಿಶೀಲಿಸಿ ಆ ಬಳಿಕ ಈ ಪಟ್ಟಿ ಇನ್ನಷ್ಟು ವಿಸ್ತರಿಸಲು ನಮ್ಮ ಜೊತೆ ಕೈ ಜೋಡಿಸಿದ ಸ್ನೇಹಿತರುಗಳಾದ ಶ್ರೀಶಕಾರಂತ, ಪ್ರತಾಪ್ ಸಿಂಹ, ಸೋಮಶೇಖರಶರ್ಮ ಅವರಿಗೂ ಕೃತಜ್ಞತೆಗಳು. ನಮ್ಮ ಈ ಸಂಗ್ರಹವನ್ನು ಕೂಲಂಕಷವಾಗಿ ನೋಡಿ ಇನ್ನಷ್ಟು ಸ್ವಾರಸ್ಯಕರವಾದ ಕೃತಿಗಳನ್ನು ಸೇರಿಸಿಕೊಟ್ಟು ನಮ್ಮ ಶ್ರಮಕ್ಕೆ ಬೆಂಬಲವನ್ನು ಸೂಚಿಸಿದ ಶತಾವಧಾನಿ ಡಾ. ಆರ್ ಗಣೇಶ್ ಅವರಿಗೂ ನಮ್ಮ ಕೃತಜ್ಞತೆಗಳು. ನಮ್ಮ ಈ ಸಂಗ್ರಹ ಸಾಗುತ್ತಿರುವುದನ್ನು ಕೇಳಿ ಅದಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿ ಮುಂದುವರೆಯಲು ಉತ್ಸಾಹವನ್ನು ಕೊಟ್ಟ ಪ್ರೇಕ್ಷಾ ಹಾಗೂ ಪದ್ಯಪಾನದ ಎಲ್ಲ ಮಿತ್ರರಿಗೂ ವಂದನೆಗಳು.
ನೀಲಕಂಠ ಕುಲಕರ್ಣಿ
ಗಣೇಶ ಭಟ್ಟ ಕೊಪ್ಪಲತೋಟ
[ಸೂಚನೆ – * “ಆಯ್ದ ಭಾಗ”ವನ್ನು ಸೂಚಿಸುತ್ತದೆ]
Level 1
(Ages 13–15)
ಲಲಿತ ಪ್ರಬಂಧ, ಪ್ರವಾಸಿ ಕಥನ, ವ್ಯಕ್ತಿಚಿತ್ರ (Nonfiction)
ಅ. ರಾ. ಮಿತ್ರ – ಹಾಸ್ಯಪ್ರಬಂಧಗಳು*
ಆನಂದಕಂದ – ಭಾರತೀಯ ತತ್ತ್ವವಿದುಷಿಯರು
ಎ. ಎನ್. ಮೂರ್ತಿರಾವ್ – ಮಹಾರಾಜ ಕಾಲೇಜಿನ ಕಾಮನ್ ರೂಂ
ಎನ್. ರಂಗನಾಥಶರ್ಮಾ – ವೀರ ಕಂಪಣರಾಯ*
ಎಸ್. ಆರ್. ರಾಮಸ್ವಾಮಿ – ಶ್ರೀರಾಮಕೃಷ್ಣ ಪರಮಹಂಸ (ನವೋತ್ಥಾನದ ಅಧ್ವರ್ಯುಗಳು)
ಎಸ್. ಕೃಷ್ಣಮೂರ್ತಿ – ನಾಲ್ವಡಿಯವರ ಸಂಗೀತ ವಿಲಾಸ (ಸಂಗೀತ ಸಮಯ)
ಕುವೆಂಪು – ಅಜ್ಜಯ್ಯನ ಅಭ್ಯಂಜನ
ಗೊರೂರು ರಾಮಸ್ವಾಮಿ ಅಯ್ಯಂಗಾರ್ – ನಮ್ಮ ಎಮ್ಮೆಗೆ ಮಾತು ತಿಳಿಯುವುದೇ, ನಮ್ಮ ಊರಿನ ರಸಿಕರು*, ಅಮೇರಿಕಾದಲ್ಲಿ ಗೊರೂರು*
ಜಿ. ಟಿ. ನಾರಾಯಣರಾವ್ – ಪ್ರಾಚೀನ ಭಾರತದಲ್ಲಿ ವಿಜ್ಞಾನ, ವಿಜ್ಞಾನದ ಮೂಲ ಮೂಢನಂಬಿಕೆಯೇ?, ಋಷಿವಾಕ್ಯ-ವಿಜ್ಞಾನ-ಕಲೆ (ವಿಜ್ಞಾನ ವರ್ತಮಾನ)
ಟಿ. ವಿ. ವೆಂಕಟಾಚಲ ಶಾಸ್ತ್ರೀ – ಅದನ್ನು ಇನ್ನೊಂದು ಸಲ ಹೇಳು (ಉದಾರಚರಿತರು ಉದಾತ್ತಪ್ರಸಂಗಗಳು) ಡಿವಿಜಿ – ಶಿವಪಿಚ್ಚೈ ಮುದಲಿಯಾರ್ (ಜ್ಞಾಪಕಚಿತ್ರಶಾಲೆ ೧), ಕಲೆ ಎಂದರೇನು?, ಸಂಸ್ಕೃತಿ*
ತೀ.ನಂ.ಶ್ರೀ. – ತಗುಣೆ, ನೆಗಡಿ, ಕಾಸಿನ ಸಂಘ (ನಂಟರು)
ನಾ ಕಸ್ತೂರಿ – ನನ್ನ ಬೆನ್ನು
ಬಿ. ಜಿ. ಎಲ್. ಸ್ವಾಮಿ – ಕಾಫೀ-ಟೀ (ಸಾಕ್ಷಾತ್ಕಾರದ ಹಾದಿಯಲ್ಲಿ)
ಮಲ್ಲೇಪುರಂ ಜಿ. ವೆಂಕಟೇಶ – ಯುಗಾವತಾರಿಣಿ ಶ್ರೀ ಶಾರದಾದೇವಿ (ಭವದ ಬೆಳಗು)
ವಸುಧೇಂದ್ರ – ನಮ್ಮಮ್ಮ ಅಂದ್ರೆ ನಂಗಿಷ್ಟ, ಚುಕ್ಕಿ ಬಾಳೆಹಣ್ಣು (ಐದು ಪೈಸೆ ವರದಕ್ಷಿಣೆ)
ವಿ.ಸೀ. – ದೋಸೆ
ಶತಾವಧಾನಿ ರಾ. ಗಣೇಶ್ – ರಂಗವಲ್ಲಿಯ ಸುತ್ತಮುತ್ತ, ಬಣ್ಣಗಳಿಗೊಂದು ಬಣ್ಣನೆ (ಕಲಾಕೌತುಕ), ಹೊಕ್ಕುಳ ಬಳ್ಳಿಯ ಸಂಬಂಧ*
ಶಿವರಾಮ ಕಾರಂತ – ಮೈಲಿಕಲ್ಲಿನೊಡನೆ ಮಾತುಕತೆಗಳು
ಸ್ವಾಮಿ ಪುರುಷೋತ್ತಮಾನಂದ – ವಿದ್ಯಾರ್ಥಿಗೊಂದು ಪತ್ರ
ಕಥೆ, ಕಥಾಭಾಗ (Fiction)
ಆನಂದಕಂದ – ಕಳ್ಳರ ಗುರು, ಜೋಗತಿಯ ಕಲ್ಲು
ಕೊರಡ್ಕಲ್ ಶ್ರೀನಿವಾಸರಾಯ – ಧನಿಯರ ಸತ್ಯನಾರಾಯಣ
ಡಿ.ವಿ.ಜಿ. – ಇಂದ್ರವಜ್ರ*
ಮಾಸ್ತಿ ವೆಂಕಟೇಶ ಅಯ್ಯಂಗಾರ್ – – ನಿಜಗಲ್ಲಿನ ರಾಣಿ
ಸಾ. ಕೃ. ರಾಮಚಂದ್ರರಾವ್ – ಬೋಧಿಯ ಬೆಳಕಿನಲ್ಲಿ*, ವೇದದಲ್ಲಿನ ಕಥೆಗಳು*
ಎ. ಆರ್. ಕೃಷ್ಣಶಾಸ್ತ್ರಿ – ನಿರ್ಮಲ ಭಾರತಿ*
ಎಸ್. ಎಲ್. ಭೈರಪ್ಪ – ಶೃಂಗೇರಿಯಾತ್ರೆ (ಗೃಹಭಂಗ)
ಶಿವರಾಮ ಕಾರಂತ – ಸರಸೋತಿ, ಪಾರೋತಿಯರ ಕೆಲವು ಪ್ರಸಂಗಗಳು (ಮರಳಿ ಮಣ್ಣಿಗೆ)
ನಾಟಕ
ಎಸ್. ವಿ. ಪರಮೇಶ್ವರಭಟ್ಟ – ಶಾಕುಂತಲ* (ಕಾಳಿದಾಸ ನಾಟಕ ಅನುವಾದ)
ಡಿ.ವಿ.ಜಿ. – ಪರಶುರಾಮ*
ಬೆಳ್ಳಾವೆ ನರಹರಿಶಾಸ್ತ್ರಿ – ಸದಾರಮೆ*
ಕೆ. ಕೃಷ್ಣಮೂರ್ತಿ – ಸ್ವಪ್ನವಾಸವದತ್ತ* (ಭಾಸ ನಾಟಕ ಅನುವಾದ)
ಟಿ. ಪಿ. ಕೈಲಾಸಂ – ನಾಟಕಗಳು*
ಕಾವ್ಯ
ಬಿ. ಎಂ. ಶ್ರೀ. – ಕರುಣಾಳು ಬಾ ಬೆಳಕೆ (ಇಂಗ್ಲಿಷ್ ಗೀತಗಳು)
ಕುವೆಂಪು – ಮುಂಗಾರು (ಪಕ್ಷಿಕಾಶಿ), ಮಲೆನಾಡಿಗೆ ಮನ ಓಡುವುದು (ಕದರಡಕೆ), ನಡೆಮುಂದೆ, ಕೊಳಲು, ನವಿಲು (ಪಾಂಚಜನ್ಯ), ಕಿಂದರಿಜೋಗಿ*
ಗೋಪಾಲಕೃಷ್ಣ ಅಡಿಗ – ನಂದಾದೀಪ, ಕಟ್ಟುವೆವು ನಾವು –
ದ. ರಾ. ಬೇಂದ್ರೆ – ಇಳಿದು ಬಾ ತಾಯಿ.. (ಗಂಗಾವತರಣ)
ಸರ್ವಜ್ಞ – ತ್ರಿಪದಿಗಳು*
ಅಕ್ಕಮಹಾದೇವಿ – ವಚನಗಳು*
ಅಲ್ಲಮಪ್ರಭು – ವಚನಗಳು*
ಕನಕದಾಸರು – ಕೀರ್ತನೆಗಳು*
ಕುಮಾರವ್ಯಾಸ – ಪಾಂಡವ-ಕೌರವರ ಬಾಲಕೇಳಿ (ಕರ್ಣಾಟಭಾರತಕಥಾಮಂಜರಿ)
ಜನಪದ – (ತ್ರಿಪದಿ ಪರಿಚಯಕ್ಕೆ) – ತ್ರಿಪದಿಗಳು*
ಜನಪದ – ಸಂಗ್ರಹ – ಗೋವಿನ ಹಾಡು*
ಡಿ.ವಿ.ಜಿ. – ಲೀಲಾಕೀರಾತಿ/ಪೀಠಿಕೆಯ ಪದ್ಯಗಳು (ಅಂತಃಪುರಗೀತಗಳು), ಮಂಕುತಿಮ್ಮನ ಕಗ್ಗ*
ಪುರಂದರದಾಸರು – ಕೀರ್ತನೆಗಳು*
ಬಸವಣ್ಣ – ವಚನಗಳು*
ರಾಘವಾಂಕ – ರಾಜ್ಯಸಮರ್ಪಣೆಯ ಭಾಗ, ಚಂದ್ರಮತಿಯ ವಿಲಾಪ (ಹರಿಶ್ಚಂದ್ರಕಾವ್ಯ)
ಹುುಯಿಲಗೋಳ ನಾರಾಯಣರಾಯರು – ಉದಯವಾಗಲಿ ನಮ್ಮ*
ಜನ್ನ – ಮಾರಿ ಗುಡಿಯ ವರ್ಣನೆ ಇತ್ಯಾದಿ (ಯಶೋಧರಚರಿತೆ)
ಪಂಪ – ಬನವಾಸಿ ವರ್ಣನೆ, ಪಂಪ – ಭೀಷ್ಮ ಪ್ರತಿಜ್ಞೆ (ವಿಕ್ರಮಾರ್ಜುನ ವಿಜಯ), ಧೂಪದ ಹೊಗೆಯಲ್ಲಿ ಶ್ರೀಮತಿ ವಜ್ರಜಂಘರ ಮರಣ (ಆದಿಪುರಾಣ)
ರನ್ನ – ಯುದ್ಧರಂಗದ ವರ್ಣನೆ – ಪಿಶಾಚಗಳ ಸಂದರ್ಶನ, ರಾಜ್ಯಲಕ್ಷ್ಮಿಯ ನಿರ್ಗಮನ (ಸಾಹಸಭೀಮವಿಜಯ)
ಸೋಮೇಶ್ವರ – ಸೋಮೇಶ್ವರಶತಕ*
ಮಲ್ಲಿಕಾರ್ಜುನ – ಸೂಕ್ತಿಸುಧಾರ್ಣವ*
Level 2
(Ages 16–18)
ಲಲಿತ ಪ್ರಬಂಧ, ಪ್ರವಾಸಿ ಕಥನ, ವ್ಯಕ್ತಿಚಿತ್ರ (Nonfiction)
ಎ. ಆರ್. ಕೃಷ್ಣಶಾಸ್ತ್ರಿ – ಸಂಸ್ಕೃತ ನಾಟಕ*
ಎ. ಆರ್. ಕೃಷ್ಣಶಾಸ್ತ್ರಿ – ಅತ್ತಿಗೆ (ಶಬ್ದದ ವ್ಯುತ್ಪತ್ತಿ ಕುರಿತಾದ ಲೇಖನ)
ಎಸ್. ಆರ್. ರಾಮಸ್ವಾಮಿ – ವಿವೇಕಾನಂದ ಸಂದೇಶಕೌಮುದಿ*
ಎ. ಎನ್. ಮೂರ್ತಿರಾವ್ – ಅಪರವಯಸ್ಕನ ಅಮೆರಿಕಾಯಾತ್ರೆ*
ಕುವೆಂಪು – ಶ್ರೀರಾಮಾಯಣ ಮಹಾಶಿಲ್ಪಿ (ವಿಭೂತಿ ಪೂಜೆ)
ಕುವೆಂಪು – ಹರಿಶ್ಚಂದ್ರ ಕಾವ್ಯ ಪ್ರಬಂಧ (ಕಾವ್ಯವಿಹಾರ)
ಕುವೆಂಪು – ದ್ರೌಪದಿಯ ಶ್ರೀಮುಡಿ*
ಕುವೆಂಪು – ಉಪನಿಷತ್ತಿನ ಋಷಿಯ ದರ್ಶನ, ಶೆಲ್ಲಿಯ ಕವಿತೆಯ ಸಮರ್ಥನೆ
ಕೆ. ಕೃಷ್ಣಮೂರ್ತಿ – ಸಂಸ್ಕೃತಕಾವ್ಯ*
ಗೋವಿಂದ ಪೈ – ಸಂಶೋಧನಾ ಪ್ರಬಂಧ
ಎಂ. ಚಿದಾನಂದ ಮೂರ್ತಿ – ಶಾಸನಗಳೆಂದರೇನು? (ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ)
ಎಸ್. ಶ್ರೀಕಂಠ ಶಾಸ್ತ್ರೀ – ಸಂಸ್ಕೃತಿ ಮತ್ತು ನಾಗರಿಕತೆ (ಭಾರತೀಯ ಸಂಸ್ಕೃತಿ)
ಎಸ್. ಆರ್. ರಾಮಸ್ವಾಮಿ – ನಗರ ಜೀವನದ ಹಾಸುಹೊಕ್ಕುಗಳು (ಶತಮಾನದ ತಿರುವಿನಲ್ಲಿ ಭಾರತ)
ಸೂರ್ಯನಾಥ ಕಾಮತ್ – ಕರ್ನಾಟಕದ ಸಂಕ್ಷಿಪ್ತ ಇತಿಹಾಸ*
ಡಿ.ವಿ.ಜಿ. – ಬಾಳಿಗೊಂದು ನಂಬಿಕೆ*
ಡಿ.ವಿ.ಜಿ. – ಜ್ಞಾಪಕಚಿತ್ರಶಾಲೆ*
ನಾ. ಕಸ್ತೂರಿ – ಆಕಳಿಕೆ
ಪೂರ್ಣಚಂದ್ರ ತೇಜಸ್ವಿ – ಅಲೆಮಾರಿ ಅಂಡಮಾನ್
ಬಿ. ಆರ್. ವಾಡಪ್ಪಿ – ಪ್ರಬಂಧಗಳು*
ಬಿ. ಜಿ. ಎಲ್. ಸ್ವಾಮಿ – ಮೀನಾಕ್ಷಿಯ ಸೌಗಂಧ*
ಬಿ. ಜಿ. ಎಲ್. ಸ್ವಾಮಿ – ಮೈಸೂರು ಡೈರಿ*
ಮಾಸ್ತಿ – ವಿದುಲೋಪಾಖ್ಯಾನ (ಭಾರತತೀರ್ಥ)
ಮಾಸ್ತಿ – ಮಾತುಗಾರ ರಾಮಣ್ಣ*
ಮಾಸ್ತಿ – ಅಂತರಗಂಗೆ*
ವಿಸೀ – ಪಂಪಾಯಾತ್ರೆ*
ಶತಾವಧಾನಿ ರಾ. ಗಣೇಶ್ – ಪ್ರತಾಪಯುಗ (ಭಾರತೀಯ ಕ್ಷಾತ್ರಪರಂಪರೆ)
ಶತಾವಧಾನಿ ರಾ. ಗಣೇಶ್ – ಹಾಸು ಬೀಸು*
ಶತಾವಧಾನಿ ರಾ. ಗಣೇಶ್ – ಅಭಿರುಚಿ*
ಸೇಡಿಯಾಪು ಕೃಷ್ಣ ಭಟ್ಟ – ವಿಚಾರ ಪ್ರಪಂಚ*
ಸ್ವಾಮಿ ಜಗದಾತ್ಮಾನಂದ – ಬದುಕಲು ಕಲಿಯಿರಿ*
ಸ್ವಾಮಿ ವಿವೇಕಾನಂದ – ಭಾರತದ ಋಷಿಗಳು*
ಕಥೆ, ಕಥಾಭಾಗ (Fiction)
ಎ. ಆರ್. ಕೃಷ್ಣಶಾಸ್ತ್ರಿ – ವಚನಭಾರತ*
ಎ. ಆರ್. ಕೃಷ್ಣಶಾಸ್ತ್ರಿ – ಕಥಾಮೃತ*
ಎಸ್. ಎಲ್. ಭೈರಪ್ಪ – ತಂತು*
ಆನಂದಕಂದ – ಅಶಾಂತಿಪರ್ವ*
ಆನಂದಕಂದ – ಮಾತನಾಡುವ ಕಲ್ಲು
ಕೆ. ಗೋಪಾಲಕೃಷ್ಣರಾಯರು – ಪಾರ್ಕೊಳು ಹುಣ್ಣಿಮೆ
ಗಳಗನಾಥ – ಶಿವಪ್ರಭುವಿನ ಪುಣ್ಯ*
ಡಿ.ವಿ.ಜಿ. – ಇಂದ್ರವಜ್ರ
ತ.ರಾ.ಸು – ದುರ್ಗಾಸ್ತಮಾನ*
ಮಾಸ್ತಿ – ಚೆನ್ನಬಸವನಾಯಕ*
ಮಾಸ್ತಿ – ಶೇಷಮ್ಮ*
ಮಾಸ್ತಿ – ಮಸುಮತ್ತಿ
ಮಾಸ್ತಿ – ಕುಚೇಲನ ಮರಿಮಗ
ಮಾಸ್ತಿ – ಸಾರಿಪುತ್ರನ ಕಡೆಯ ದಿನಗಳು
ಮಾಸ್ತಿ – ಕವಿಯ ಬಾಳ ಕೊನೆಯ ದಿನ
ವಸುಧೇಂದ್ರ – ನಮ್ ವಾಜಿನ್ನ ಆಟಕ ಕರಕೋರಿ
ಶಿವರಾಮ ಕಾರಂತ – ಮೈಮನಗಳ ಸುಳಿಯಲ್ಲಿ*
ಸಾ. ಕೃ. ರಾಮಚಂದ್ರ ರಾವ್ – ಬೋಧಿಯ ಬೆಳಕಿನಲ್ಲಿ*
ಸಾ. ಕೃ. ರಾಮಚಂದ್ರ ರಾವ್ – ವೇದದಲ್ಲಿನ ಕಥೆಗಳು*
ನಾಟಕ
ಬಸವಪ್ಪಶಾಸ್ತ್ರಿ – ಕನ್ನಡ ಶಾಕುಂತಲ*
ಟಿ. ಪಿ. ಕೈಲಾಸಂ – ನಾಟಕಗಳು*
ಸಂಸ – ವಿಗಡವಿಕ್ರಮರಾಯ*
ಕೆ. ಕೃಷ್ಣಮೂರ್ತಿ – ಮೃಚ್ಛಕಟಿಕ ಅನುವಾದ*
ಬೀChi – ನಾಟಕಗಳು*
ಬೆಳ್ಳಾವೆ ನರಹರಿಶಾಸ್ತ್ರಿ – ಆಯ್ದ ಹಾಸ್ಯ ಪ್ರಸಂಗ*
ಕಾವ್ಯ
ಎಚ್.ಎಸ್. ವಿ. – ವಿಮುಕ್ತಿ*
ಕೆ.ಎಸ್.ನ. – ಮೈಸೂರು ಮಲ್ಲಿಗೆ*
ಗೋಪಾಲಕೃಷ್ಣ ಅಡಿಗ – ರಾಮನವಮಿ
ಕುವೆಂಪು – ಶಿಲಾತಪಸ್ವಿ (ಕಲಾಸುಂದರಿ)
ಕುವೆಂಪು – ಪೂವಮ್ಮ (ಷೋಡಶಿ)
ಡಿ.ವಿ.ಜಿ. – ಮಂಕುತಿಮ್ಮನ ಕಗ್ಗ*
ಕುಮಾರವ್ಯಾಸ – ದ್ರೌಪದೀಸ್ವಯಂವರ, ಸುಭದ್ರಾಹರಣ, ಕೀಚಕವಧೆ (ಕರ್ಣಾಟಭಾರತಕಥಾಮಂಜರಿ)
ಜಿ. ಪಿ. ರಾಜರತ್ನಂ – ಮಹಾಕವಿ ಪುರುಷಸರಸ್ವತಿ*
ಡಿ.ವಿ.ಜಿ. – ಅಂತಃಪುರಗೀತೆಗಳು*
ಪು.ತಿ.ನ. – ಗೋಕುಲ ನಿರ್ಗಮನ*
ದ. ರಾ. ಬೇಂದ್ರೆ – ಮೇಘದೂತ*
ಲಕ್ಷ್ಮೀಶ – ಚಂದ್ರಹಾಸನ ಕಥೆ (ಜೈಮಿನಿಭಾರತ)
ಸರ್ವಜ್ಞ – ತ್ರಿಪದಿಗಳು*
ಮಲ್ಲಿಕಾರ್ಜುನ – ಸೂಕ್ತಿಸುಧಾರ್ಣವ*
ಕುವೆಂಪು – ಚಿತ್ರಾಂಗದಾ*
ಗೋವಿಂದ ಪೈ – ಬುದ್ಧನ ವರ್ಣನೆ (ವೈಶಾಖಿ)
ನಾಗವರ್ಮ – ಭೇಟೆಯ ವರ್ಣನೆ, ಮಹಾಶ್ವೇತೆಯ ಸಂದರ್ಶನ (ಕರ್ಣಾಟಕಾದಂಬರಿ)
ಬಸವಪ್ಪಶಾಸ್ತ್ರಿಗಳು – ವಾಣೀಸ್ತುತಿಯ ದಂಡಕ (ದಮಯಂತೀಸ್ವಯಂವರ)
ಮುದ್ದಣ – ಮುದ್ದಣ ಮನೋರಮೆಯ ಸಂಭಾಷಣೆ (ರಾಮಾಶ್ವಮೇಧ)
ರನ್ನ – ಸಾಹಸಭೀಮವಿಜಯ*
ಕುವೆಂಪು – ಕುಂಭಕರ್ಣನನೆಬ್ಬಿಸಿಂ (ಶ್ರೀರಾಮಾಯಣದರ್ಶನಂ)
Level 3
(Ages 19+)
ಲಲಿತ ಪ್ರಬಂಧ, ಪ್ರವಾಸಿ ಕಥನ, ವ್ಯಕ್ತಿಚಿತ್ರ (Nonfiction)
ಕುವೆಂಪು – ಸರೋವರದ ಸಿರಿಗನ್ನಡಿಯಲ್ಲಿ (ತಪೋನಂದನ)
ಕುವೆಂಪು – ರಸೋ ವೈ ಸಃ
ಡಿ.ವಿ.ಜಿ. – ಜ್ಞಾಪಕಚಿತ್ರಶಾಲೆ*
ಡಿ.ವಿ.ಜಿ. – ಸಂಸ್ಕೃತಿ*
ಪು.ತಿ.ನ. – ರಸಪ್ರಜ್ಞೆ
ಬನ್ನಂಜೆ ಗೋವಿಂದಾಚಾರ್ಯ – ಹತ್ತು ಮಕ್ಕಳಿನ ಕಥೆ
ಬನ್ನಂಜೆ ಗೋವಿಂದಾಚಾರ್ಯ – ಬಾಣಭಟ್ಟನ ಕಾದಂಬರಿ
ಬಿ. ಜಿ. ಎಲ್. ಸ್ವಾಮಿ – ಹಸುರು ಹೊನ್ನು*
ಬಿ. ಜಿ. ಎಲ್. ಸ್ವಾಮಿ – ಪ್ರಾಧ್ಯಾಪಕನ ಪೀಠದಲ್ಲಿ*
ಬಿ. ಜಿ. ಲ್. ಸ್ವಾಮಿ – ಸಸ್ಯಪುರಾಣ*
ಶಂ. ಬಾ. ಜೋಶಿ – ಪೀಠಿಕೆ (ಕರ್ಣಾಟ ಸಂಸ್ಕೃತಿ)
ಶತಾವಧಾನಿ ರಾ. ಗಣೇಶ್ – ಸಂಸ್ಕಾರಗಳು: ಪರಮಾರ್ಥ ಮತ್ತು ಪ್ರಸ್ತುತಾನ್ವಯ*
ಶತಾವಧಾನಿ ರಾ. ಗಣೇಶ್ – ಕಾವ್ಯಕಲ್ಪ*
ಶಿವರಾಮ ಕಾರಂತ – ಸಾಹಿತ್ಯಶ್ರೇಣಿ*
ಸ್ವಾಮಿ ವಿವೇಕಾನಂದ – ಕೊಲೊಂಬೋ ಇಂದ ಅಲ್ಮೋರಾ ವರೆಗೆ*
ಕಥೆ, ಕಥಾಭಾಗ (Fiction)
ಎ. ಆರ್. ಕೃಷ್ಣಶಾಸ್ತ್ರಿ – ವಚನಭಾರತ*
ಎ. ಆರ್. ಕೃಷ್ಣಶಾಸ್ತ್ರಿ – ಕಥಾಮೃತ*
ಕುವೆಂಪು – ನಾಯಿಗುತ್ತಿಯ ಕಾಡಿನ ಯಾತ್ರೆಯ ಕೆಲ ಭಾಗ (ಮಲೆಗಳಲ್ಲಿ ಮದುಮಗಳು)
ಮಾಸ್ತಿ – ಸುಬ್ಬಣ್ಣ*
ಮಾಸ್ತಿ – ಮಂತ್ರೋದಯ
ಮಾಸ್ತಿ – ಹೇಮಕೂಟದಿಂದ ಬಂದ ಮೇಲೆ
ರಾಘವೇಂದ್ರ ಪಾಟೀಲ – ಲಯ
ಸಾ. ಕೃ. ರಾಮಚಂದ್ರ ರಾವ್– ಬೋಧಿಯ ಬೆಳಕಿನಲ್ಲಿ*
ಸಾ. ಕೃ. ರಾಮಚಂದ್ರ ರಾವ್ – ವೇದದಲ್ಲಿನ ಕಥೆಗಳು*
ನಾಟಕ
ಬಸವಪ್ಪಶಾಸ್ತ್ರಿ – ಕನ್ನಡ ಶಾಕುಂತಲ*
ಟಿ. ಪಿ. ಕೈಲಾಸಂ – ನಾಟಕಗಳು*
ಬೆಳ್ಳಾವೆ ನರಹರಿಶಾಸ್ತ್ರಿ – ಆಯ್ದ ಹಾಸ್ಯ ಪ್ರಸಂಗ*
ಡಿ.ವಿ.ಜಿ – ಕನ್ನಡ ಮ್ಯಾಕ್ಬೆತ್*
ಕಾವ್ಯ
ಕುವೆಂಪು – ಸಂನ್ಯಾಸಿ ಗೀತೆ*
ಎಸ್. ವಿ. ಪರಮೇಶ್ವರಭಟ್ಟರು – ಕುಮಾರಸಂಭವ*
ಕುಮಾರವ್ಯಾಸ – ಪಾಂಡುವಿನ ಮರಣ, ಕಿರಾತಾರ್ಜುನೀಯ (ಕರ್ಣಾಟಭಾರತಕಥಾಮಂಜರಿ)
ಡಿ.ವಿ.ಜಿ. – ಮಂಕುತಿಮ್ಮನ ಕಗ್ಗ*
ಲಕ್ಷ್ಮೀಶ – ಸೀತಾಪರಿತ್ಯಾಗ (ಜೈಮಿನಿಭಾರತ)
ಡಿ.ವಿ.ಜಿ. – ಉಮರನ ಒಸಗೆ*
ಡಿ.ವಿ.ಜಿ. – ನಿವೇದನ*
ಕೇಶಿರಾಜ – ಶಬ್ದಮಣಿದರ್ಪಣಂ*
ಗೋವಿಂದ ಪೈ – ಗೊಲ್ಗೊಥಾ*
ಡಿ.ವಿ.ಜಿ. – ಭಾರತಭೂವಂದನಂ*
ನಾಗವರ್ಮ – ಶುಕನಾಸೋಪದೇಶ (ಕರ್ಣಾಟಕಾದಂಬರಿ)
ಬಸವಪ್ಪಶಾಸ್ತ್ರಿಗಳು – ದಮಯಂತೀಸ್ವಯಂವರ*
ಮಲ್ಲಿಕಾರ್ಜುನ – ಸೂಕ್ತಿಸುಧಾರ್ಣವ*