ಭಾರತೀವಿವೇಕ
“ಪ್ರಜ್ಞಾಭಾರತಿ” ಶ್ರೀಧರ ಭಾಸ್ಕರ ವರ್ಣೇಕರ್ (೩೧.೦೭.೧೯೧೮—೧೦.೪.೨೦೦೦) ಅವರು ಆಧುನಿಕ ಸಂಸ್ಕೃತಸಾಹಿತ್ಯದ ಧ್ರುವತಾರೆ ಎಂದೇ ಕೀರ್ತಿತರು. ಅವರ ಕೃತಿಗಳು ರಾಷ್ಟ್ರಭಕ್ತಿ ಮತ್ತು ಉದಾತ್ತ ಕಲ್ಪಕತೆಗಳ ಬಿರುಕಿಲ್ಲದ ಬೆಸುಗೆಯ ಅಪೂರ್ವ ನಿದರ್ಶನಗಳು. ಅವರು ತಮ್ಮ ಸೃಷ್ಟಿಶೀಲ ರಚನೆಗಳಿಂದ ಸಂಸ್ಕೃತ ಮತ್ತು ಮರಾಠಿ ಭಾಷೆಗಳನ್ನು ಶ್ರೀಮಂತಗೊಳಿಸಿದ್ದಷ್ಟೇ ಅಲ್ಲದೆ ಆ ನುಡಿಗಳ ಪ್ರಕರ್ಷ-ಪ್ರಸಾರಗಳಿಗೆ ಕೂಡ ಅವಿಶ್ರಾಂತವಾಗಿ ದುಡಿದರು. ಕಾವ್ಯರಚನೆ, ಪತ್ರಿಕೋದ್ಯಮ, ವಿಶ್ವಕೋಶನಿರ್ಮಾಣ, ಸಂಸ್ಕೃತಿಪ್ರಚಾರ, ಸಾಂಸ್ಥಿಕ ಕಾರ್ಯನಿರ್ವಾಹ, ಸಮಾಜೋನ್ಮುಖ ಕಲಾಪಗಳೇ ಮೊದಲಾದ ಮಜಲುಗಳಲ್ಲಿ ಅವರ ಕರ್ಮಯೋಗ ವ್ಯಾಪಿಸಿದೆ.