ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ವಿವರ್ತವಾದ, ವಿಜ್ಞಾನವಾದ
ಇದೇ ರೀತಿ ಭಾರತೀಯರ ಪ್ರಕಾರ ವಸ್ತು ಮತ್ತು ಅದನ್ನು ಕುರಿತಾದ ಜ್ಞಾನಗಳ ಪೈಕಿ ಜ್ಞಾನವೇ ಹೆಚ್ಚು ಸತ್ಯವಾದುದೆಂದು ಭಟ್ಟರು ಭಾವಿಸುತ್ತರೆ (ಪು. ೭೭). ಇದು ಈಚಿನ ಅನೇಕಚಿಂತಕರು ಎತ್ತಿಹಿಡಿಯುವ ಮತ. ವಿಶೇಷತಃ ನವಭಾರತೀಯದಾರ್ಶನಿಕರು ಹೆಚ್ಚಾಗಿ ಇಂಥ ಅಭಿಪ್ರಾಯವನ್ನು ಪ್ರಕಟಿಸುತ್ತಾರೆ. ಮಾತ್ರವಲ್ಲ, ಈ ವಾದವು ಬುದ್ಧಿಜೀವಿಗಳಿಗೆ ತುಂಬ ಆಕರ್ಷಕವೂ ಹೌದು; ಮತ್ತಿದು ಅದೆಷ್ಟೋ ಮಂದಿ ಮುಗ್ಧರಾದ ಪ್ರಾಮಾಣಿಕರು ಒಪ್ಪುವಂಥದ್ದೂ ಆಗಿದೆ. ಆದರೆ ನಿರ್ವಿಶೇಷವಾದ ಸಾರ್ವತ್ರಿಕಾನುಭವದ ಹಿನ್ನೆಲೆಯಲ್ಲಿ ಕಂಡಾಗ ಇದು ಸತ್ಯವಲ್ಲವೆಂದು ತಿಳಿಯದಿರದು. ವಸ್ತುತಃ ಭಟ್ಟರ ಈ ನಿಲವು ಬೌದ್ಧರ ವಿಜ್ಞಾನವಾದವೇ ಆಗಿದೆ. ಇದೊಂದು ಬಗೆಯಲ್ಲಿ ಸ್ಥೂಲಾಧ್ವೈತವೆನ್ನಬೇಕು.