ಅಮರಪ್ರೇಮದ ಅಮರುಕಶತಕ--ಅಮರುಕನೊಡನೆ ರಸಯಾತ್ರೆ
ಅಮರುಕನೊಡನೆ ರಸಯಾತ್ರೆ
ಪ್ರಕೃತಕೃತಿಯ ಪದ್ಯಗಳನ್ನು ಪ್ರಧಾನವಾಗಿ ಮುನಿದ ನಾಯಿಕೆಗೆ ಸಖಿಯ ಹಿತಬೋಧೆ, ಭಾವಶಬಲಿತೆಯಾದ ನಾಯಿಕೆಯು ಸಖಿಯರಿಗೆ ಹೇಳುವ ಮಾತುಗಳು, ನಾಯಕ-ನಾಯಿಕೆಯರ ಸಂವಾದ, ನಾಯಕ-ಸಖಿಯರ ಸಂವಾದ, ಕವಿಯದೇ ಆದ ನಿರೂಪಣೆ ಎಂಬಿವೇ ಕೆಲವು ವಿಭಾಗಗಳಲ್ಲಿ ಅಡಕಮಾಡಬಹುದು. ಇವುಗಳಲ್ಲಿ ಕವಿಯು ಯಾವುದೇ ವ್ಯಕ್ತಿಗೂ ಪಕ್ಷಪಾತವಿಲ್ಲದೆ—ತನ್ನದೇ ಆದ ಪೂರ್ವಗ್ರಹಗಳೂ ಇಲ್ಲದೆ—ಅಪ್ಪಟವಾದ ಪ್ರಣಯವನ್ನು ಮಡಿ-ಮೈಲಿಗೆಗಳ ಗೋಜಿಲ್ಲದೆ ಸಾಕ್ಷಾತ್ಕರಿಸುತ್ತಾನೆ. ಈ ಕಾರಣದಿಂದಲೇ ಅಮರುಕನನ್ನು ಚಿತ್ತವೃತ್ತಿಸಾರ್ವಭೌಮನೆಂದೂ ಪದ್ಯರೂಪದಲ್ಲಿ ನೃತ್ಯವನ್ನು ಕಂಡರಿಸಿದ ರಸಶಿಲ್ಪಿಯೆಂದೂ ಶಂಕೆಯಿಲ್ಲದೆ ಹೇಳಬಹುದು. ಪ್ರಕೃತಲೇಖನದಲ್ಲಿ ಇಂಥ ಶೃಂಗಾರಸಂದರ್ಭಗಳ ಪರಿಚಯ ಮಾಡಿಕೊಳ್ಳೋಣ.