ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ಉಪಸಂಹಾರ
ಭಟ್ಟರು ಭಾರತೀಯವಿದ್ಯಾಕ್ರಮದಲ್ಲಿ ಪಾಶ್ಚಾತ್ಯಪ್ರಭಾವವು ಮಾಡಿದ ಪರಿಣಾಮವನ್ನು ತುಂಬ ಸಮರ್ಥವಾಗಿ ವಿವೇಚಿಸಿದ್ದಾರೆ. ಮಾತ್ರವಲ್ಲ, ಇಂಥ ಸತ್ತ್ವಶೂನ್ಯಚಿಂತನಕ್ರಮವು ಪಾಶ್ಚಾತ್ಯಸಂಪರ್ಕಕ್ಕಿಂತ ಮೊದಲೇ ಉಂಟಾಗಿತ್ತೆಂದೂ ನಮ್ಮ ಪರಂಪರೆಯ ಗ್ರಂಥಗಳಲ್ಲಿ ಕಂಡುಬರುವ ತತ್ತ್ವಸ್ಖಾಲಿತ್ಯವನ್ನು ಗಮನಿಸಿ ತರ್ಕಿಸುತ್ತಾರೆ (ಪು. ೧೦೯-೧೧೨). ಇಂಥ ಮಧ್ಯಯುಗದ ಸತ್ತ್ವಶೂನ್ಯತೆಗೆ ಮುಖ್ಯಕಾರಣ ಇಸ್ಲಾಮಿನ ಬರ್ಬರವಾದ ಆಕ್ರಮಣದಿಂದ ಉಂಟಾದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕಕ್ಷೋಭೆಯೆಂಬುದನ್ನು ಅವರು ಕಂಠೋಕ್ತವಾಗಿ ಹೇಳದಿರುವುದು ಆಶ್ಚರ್ಯ ಮಾತ್ರವಲ್ಲ, ಅನ್ಯಾಯ ಕೂಡ. ದಿಟವೇ, ಯಾವುದೇ ಸಂಸ್ಕೃತಿಯು ಭೋಗಪಾರಮ್ಯವನ್ನವಲಂಬಿಸಿದಾಗ ಹೊರಗಿನ ಶತ್ರುಗಳ ಅನುಪಸ್ಥಿತಿಯಲ್ಲಿಯೂ ಹ್ರಾಸವನ್ನು ಹೊಂದುತ್ತದೆ.