ಪ್ರಾಣಿಗಳಿಗಿಂತ ವಿಶಿಷ್ಟವಾದ ಆಲೋಚನಸಾಮರ್ಥ್ಯವನ್ನು ಹೊಂದಿರುವ ಮಾನವನಿಗೆ ತನ್ನ ಸ್ವರೂಪವೇನು, ತಾನು ವ್ಯವಹರಿಸುವ ಜಗತ್ತಿನ ಜಾಡು ಎಂಥದ್ದು, ತನಗೂ ಜಗತ್ತಿಗೂ ಇರುವ ಸಂಬಂಧ ಯಾವ ತೆರನಾದುದು, ಈ ಸಂಬಂಧದಿಂದ ಉಂಟಾದ ಬಂಧದ ಬಗೆ ಎಂಥದ್ದು, ಇಂಥ ಬಂಧದಿಂದ ಬಿಡುಗಡೆ ಹೇಗೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಆತ ಶಾಸ್ತ್ರ, ಯುಕ್ತಿ, ಅನುಭವ ಎಂಬ ಪ್ರಮಾಣಗಳನ್ನು ಆಶ್ರಯಿಸಿ ಶ್ರವಣ, ಮನನ, ನಿದಿಧ್ಯಾಸನಗಳ ಹಾದಿಯಲ್ಲಿ ಮುನ್ನಡೆಯುತ್ತಾನೆ. ಈ ಪ್ರಶ್ನೆಗಳಿಗೆ ದೊರೆತ ಉತ್ತರಗಳಿಂದ ಉಪಶಾಂತಿ ಲಭಿಸಿದರೆ ಜೀವನ ಸಾರ್ಥಕವಾಗುತ್ತದೆ. ಹೀಗೆ ಉಪಶಾಂತಿಯನ್ನು ದೊರಕಿಸಿಕೊಳ್ಳಲು ನಮಗಿರುವ ಮಾರ್ಗ ನಿಡಿದಾದುದು, ಕಡಿದಾದುದು. ಈ ಸಾಮಾನ್ಯದ ಸರಣಿಯನ್ನು ಅಧಿಗಮಿಸಿ ಅತ್ಯಂತ ಅನಿಶ್ಚಯದ ಸನ್ನಿವೇಶದಲ್ಲಿ ಬದುಕಿನ ಪಾರ್ಯಂತಿಕ ಪ್ರಶ್ನೆಗಳಿಗೆ ನಿಶ್ಚಿತ ಉತ್ತರಗಳನ್ನು ಕಂಡುಕೊಳ್ಳಬೇಕಾದ ಪರಿಸ್ಥಿತಿ ಎದುರಾದರೆ, ಅದೆಷ್ಟು ದುರ್ಭರವಾಗಿರಬೇಡ!
ಶ್ರೀಮದ್ಭಗವದ್ಗೀತೆಯು ರೂಪುಗೊಂಡದ್ದು ಈ ಬಗೆಯ ಸನ್ನಿವೇಶದಲ್ಲಿ. ಅದು ಅತ್ಯಂತ ಅನಿಶ್ಚಯವಾದ ರಣರಂಗದ ಹಿನ್ನೆಲೆಯಲ್ಲಿ ಬದುಕಿನ ಅತ್ಯಂತ ನಿಶ್ಚಿತ ಸತ್ಯವಾದ ಪರತತ್ತ್ವದತ್ತ ನಮ್ಮ ಗಮನವನ್ನು ಸೆಳೆಯುತ್ತದೆ.
ಗೀತೆಯ ಅನನ್ಯತೆ
ಸಾಮಾನ್ಯವಾಗಿ ವೇದವಾಙ್ಮಯವನ್ನು ಪ್ರಭುಸಮ್ಮಿತ ಎನ್ನಲಾಗುತ್ತದೆ. ಸಮ್ಮಿತವೆಂದರೆ ಸದೃಶ ಎಂದು ಅರ್ಥ. ವೇದವು ಪ್ರಭುವಿನಂತೆ ಆದೇಶಿಸುತ್ತದೆ, ಅಧಿಕಾರವಾಣಿಯಿಂದ ಆಣತಿಯನ್ನೀಯುತ್ತದೆ ಎಂದು ತಾತ್ಪರ್ಯ. ವೇದಾಂತವೆನಿಸಿದ ಉಪನಿಷತ್ತು ಸಕಲ ವೇದಗಳ ಸಾರ. ಶ್ರೀಮದ್ಭಗವದ್ಗೀತೆಯಾದರೋ ಉಪನಿಷತ್ತುಗಳ ಸಾರ - ವೇದಾಂತವೆಂಬ ಧೇನುವಿನಿಂದ ಕರೆಯಲಾದ ದುಗ್ಧ. ಹೀಗಿದ್ದರೂ ಗೀತೆಯು ಪ್ರಭುವಿನಂತೆ ಆಜ್ಞಾಪಿಸುವುದಿಲ್ಲ; ಮಿತ್ರನಂತೆ ನಮ್ಮೊಡನೆ ಮಾತನಾಡುತ್ತದೆ. ಎಷ್ಟಾದರೂ ಇಬ್ಬರು ಮಿತ್ರರ ನಡುವೆ ನಡೆದ ಸಂವಾದವೇ ಇದಲ್ಲವೇ! ಹೀಗಾಗಿ ಇದು ‘ಸ್ಮೃತಿಪ್ರಸ್ಥಾನ’ವೆನಿಸಿ ಇತಿಹಾಸೋತ್ತಮವಾದ ಪಂಚಮವೇದ ಮಹಾಭಾರತದಲ್ಲಿ ಸ್ಥಾನ ಪಡೆದಿದೆ. ಗೀತೆಯಲ್ಲಿ ಅಧಿಕೃತತೆ ಇರುವಂತೆಯೇ ಆಪ್ತತೆಯೂ ಇದೆ. ಈ ಹಿನ್ನೆಲೆಯಲ್ಲಿ ಗೀತೆಯು ಆಪ್ತವಾಕ್ಯ; ಪರಮಾತ್ಮನ ಪರಮಾಪ್ತವಾಕ್ಯ.
ರಣಾಂಗಣದಲ್ಲಿ ಅರ್ಜುನನಿಗೆ ಬಂದ ಪ್ರಶ್ನೆಗಳು ಭಗವಂತ ಕೃಷ್ಣನ ಮಟ್ಟಿಗೆ ಅಸಂಗತ, ಅಸಾಂದರ್ಭಿಕ. ಆದುದರಿಂದ ಅವನು ಪ್ರಸಂಗದ ಒತ್ತಡಕ್ಕೆ ಬೆಲೆಕೊಟ್ಟು, ‘ನಿನಗೆ ನನ್ನ ಮಾತಿನಲ್ಲಿ ವಿಶ್ವಾಸವಿಲ್ಲವೇ? ನಾನು ಹೇಳುತ್ತಿದ್ದೇನೆ, ಇದೀಗ ಹೋರಾಡು. ನಿನ್ನ ಪ್ರಶ್ನೆಗಳಿಗೆ ಅನಂತರ ಉತ್ತರ ಹೇಳುತ್ತೇನೆ’ ಎಂದು ಅರ್ಜುನನಿಗೆ ಹೇಳಬಹುದಿತ್ತು. ಆದರೆ ಪರಮಾತ್ಮನು ಹಾಗೆ ಮಾಡದೆ ಎಲ್ಲ ಪ್ರಶ್ನೆಗಳನ್ನೂ ಗಂಭೀರವಾಗಿ ಪರಿಗಣಿಸಿ, ಅವುಗಳಿಗೆ ಹಾರಿಕೆಯ ಉತ್ತರಗಳನ್ನು ನೀಡದೆ ಸರ್ವಸಮರ್ಪಕವಾದ ಸಮಾಧಾನವನ್ನು ನೀಡಿದ. ಅರ್ಜುನನಿಗೆ ಕೃಷ್ಣ ಸಖನೂ ಹೌದು, ಗುರುವೂ ಹೌದು. ಅವನಿತ್ತ ಉತ್ತರ ಅರ್ಜುನನಿಗೆ ಮಾತ್ರವಲ್ಲ, ಎಲ್ಲ ಕಾಲದ ಎಲ್ಲ ಜೀವರಾಶಿಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಆತ ಅರ್ಜುನನಿಗೆ ಮಾತ್ರವಲ್ಲ, ನಮಗೂ ಗುರು; ಎಲ್ಲರಿಗೂ ಬೇಕಾದ ಜಗದ್ಗುರು.
ಶ್ರೀಕೃಷ್ಣನು ಪರಮಯೋಗವನ್ನು ಆಶ್ರಯಿಸಿ ತನ್ನ ಉಪದೇಶವನ್ನು ನೀಡಿದನೆಂದು ಆತನ ಮಾತುಗಳಿಂದಲೇ ತಿಳಿಯುತ್ತದೆ. ಈ ಯೋಗವು ದಿಟವಾಗಿ ಅವನ ಸ್ವರೂಪವೇ ಸರಿ (ಯುಜ್-ಸಮಾಧೌ). ಸಿದ್ಧನೊಬ್ಬನ ಸ್ವರೂಪಲಕ್ಷಣವು ಸಾಧಕರು ಸಾಗಬೇಕಾದ ಸೋಪಾನಕ್ರಮವಷ್ಟೆ. ಹೀಗಾಗಿ ಯೋಗವು ಒಂದು ಸಾಧನವೂ ಹೌದು. ಈ ಸಾಧನದ ಸ್ವಾರಸ್ಯವೆಂದರೆ, ಇದು ಬಗೆಬಗೆಯ ನಯ-ಉಪಾಯಗಳನ್ನು ಬೆಸೆದು ಸಮನ್ವಯವನ್ನು ಸಾಧಿಸುತ್ತದೆ (ಯುಜಿರ್-ಯೋಗೇ). ಗೀತೆಯು ಮುಖ್ಯವಾಗಿ ಅಭ್ಯುದಯ-ನಿಸ್ಶ್ರೇಯಸಗಳ ನಡುವೆ ಸಮನ್ವಯವನ್ನು ಸಾಧಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಮಾನವರ ಮೂಲಭೂತ ಪ್ರವೃತ್ತಿಪ್ರಕಾರಗಳಾದ ಕರ್ಮ, ಭಕ್ತಿ, ಜ್ಞಾನಗಳಲ್ಲಿಯೂ ಸಮನ್ವಯವನ್ನು ಕಾಣಿಸುತ್ತದೆ. ಅಭ್ಯುದಯ-ನಿಶ್ಶ್ರೇಯಸಗಳು ಗಮ್ಯಗಳಾದರೆ, ಅವುಗಳತ್ತ ಸಾಗಲು ಸಹಕರಿಸುವುವು ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು ಧರ್ಮಪ್ರಭೇದಗಳು. ಶ್ರೀಕೃಷ್ಣನು ಇವೆರಡರ ಸಮನ್ವಯವನ್ನು ಕರ್ಮಯೋಗದಲ್ಲಿ ಕಂಡರಿಸಿದ್ದಾನೆ. ಇದು ಸಹಜವೇ ಹೌದು. ಸೃಷ್ಟಿಕರ್ತ ಬ್ರಹ್ಮನು ಪ್ರವೃತ್ತಿಯ ಪ್ರತೀಕವಾದರೆ, ಲಯಕರ್ತ ಶಿವನು ನಿವೃತ್ತಿಯ ಸಂಕೇತ. ಇನ್ನು ಸ್ಥಿತಿಕರ್ತ ವಿಷ್ಣುವು ಪ್ರವೃತ್ತಿ-ನಿವೃತ್ತಿಗಳ ಸಾಮರಸ್ಯದ ಸಾಕಾರ. ವಿಷ್ಣುವಿನ ಪೂರ್ಣಾವತಾರ ಶ್ರೀಕೃಷ್ಣನೆಂದ ಮೇಲೆ ಆತನ ಉಪದೇಶವೂ ಈ ಸಾಮರಸ್ಯಕ್ಕೆ ಅನುಗುಣವಾಗಿರಬೇಕಲ್ಲವೇ?
ತ್ರಿಮೂರ್ತಿತತ್ತ್ವವನ್ನು ಗೀತೆಗೆ ಅನ್ವಯಿಸುವಂತೆ ಮತ್ತೂ ಒಂದು ನೆಲೆಯಲ್ಲಿ ಮನಗಾಣಬಹುದು. ಸೃಷ್ಟಿಗೆ ಆವಶ್ಯಕವಾದುದು ರಜೋಗುಣವಾದರೆ, ಲಯಕ್ಕೆ ತಕ್ಕದ್ದು ತಮೋಗುಣ. ಸ್ಥಿತಿಗಾದರೋ ಇವೆರಡರ ಹದವರಿತ ಸತ್ತ್ವಗುಣ ಮಾತ್ರ ಸಲ್ಲುತ್ತದೆ. ಇಂಥ ಸತ್ತ್ವಗುಣವನ್ನು ಜಾಗರಿತವಾಗಿಸಿಕೊಂಡು, ಪುಷ್ಕಳಗೊಳಿಸಿಕೊಂಡು ಕರ್ಮಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂಬುದೇ ಸಾಮಾನ್ಯಜನರಿಗೆ ಶ್ರೀಕೃಷ್ಣನ ಉಪದೇಶ. ಉತ್ತಮಾಧಿಕಾರಿಗಳಿಗೆ ಗುಣಜಾಲವನ್ನು ಮೀರಿ ನಿಸ್ತ್ರೈಗುಣ್ಯದ ನೆಲೆಯನ್ನು ಕಾಣಬೇಕು ಎಂಬ ಚರಮೋಪದೇಶ ಅನ್ವಯಿಸುತ್ತದೆ.
ಹೀಗೆ ಅತಿಸಾಮಾನ್ಯರಿಂದ ಹಿಡಿದು ಅತ್ಯಸಾಮಾನ್ಯರವರೆಗೆ ಎಲ್ಲರಿಗೂ ಎಟುಕಬಲ್ಲ ಸಂದೇಶಗಳು ಗೀತೆಯಲ್ಲಿ ಇವೆಯಾದ ಕಾರಣ ಅದು ಸರ್ವಾನುಕೂಲ ಶಾಸ್ತ್ರ. ಇಂಥ ಗ್ರಂಥವನ್ನು ಅದಕ್ಕೆ ತಕ್ಕುದಾದ ಬಗೆಯಲ್ಲಿ ನಮ್ಮ ಕಾಲಕ್ಕೆ ಸಲ್ಲುವಂತೆ ವ್ಯಾಖ್ಯಾನಿಸಿರುವ ಕೃತಿ ‘ಜೀವನಧರ್ಮಯೋಗ’.
ಡಿ.ವಿ.ಜಿ. ಅವರ ಗುಣಗರಿಮೆ
ಗೀತೆಯನ್ನು ಕುರಿತು ಜಗತ್ತಿನ ವಿವಿಧ ಭಾಷೆಗಳಲ್ಲಿ ಅಕ್ಷರಶಃ ಕೋಟಿಗಟ್ಟಲೆ ಪುಟಗಳಷ್ಟು ವ್ಯಾಖ್ಯಾನಗಳ ರಾಶಿಯಿದೆ. ಒಂದು ಅಂದಾಜಿನ ಪ್ರಕಾರ ಅತಿ ಹೆಚ್ಚು ವ್ಯಾಖ್ಯಾನಗಳನ್ನು ಕಂಡಿರುವ ಸಂಸ್ಕೃತಗ್ರಂಥ ಗೀತೆಯೇ. ಹೀಗಿರುವಾಗ ಅದರ ಮೇಲೆ ಹೊಸತಾಗಿ ಏನನ್ನಾದರೂ ಹೇಳಹೊರಟರೆ, ಹಾಗೆ ಹೇಳುವವರಲ್ಲಿ ಕೆಲವಾದರೂ ವಿಶಿಷ್ಟ ಗುಣಗಳು ಇರಬೇಕು. ಡಿ.ವಿ.ಜಿ. ಅವರಲ್ಲಿ ಇಂಥ ವಿಶಿಷ್ಟ ಗುಣಗಳು ಹೇರಳವಾಗಿದ್ದುವು. ಅವರು ಗೀತೆಯ ಕೇಂದ್ರತತ್ತ್ವವಾದ ಆತ್ಮೌಪಮ್ಯವನ್ನು ಅನುಷ್ಠಾನದಲ್ಲಿ ಸಾಕ್ಷಾತ್ಕರಿಸಿಕೊಂಡು, ಬಿರುಕಿಲ್ಲದ ಬದುಕು-ಬರೆಹಗಳನ್ನು ಸಾಧಿಸಿದ್ದ ಮಹಾತ್ಮರು.
ಅವರಿಗೆ ದಿವಾನರಿಂದ ಜವಾನರವರೆಗೆ, ಸಂನ್ಯಾಸಿಗಳಿಂದ ಸಂಸಾರಿಗಳವರೆಗೆ, ಹದಿಹರೆಯದ ಹುಡುಗರಿಂದ ಹಣ್ಣುಹಣ್ಣು ಮುದುಕರವರೆಗೆ ಎಲ್ಲರ ಹೊಕ್ಕುಬಳಕೆಯಿತ್ತು. ಅವರು ಒಬ್ಬ ರೈತನೊಡನೆ ಆತ ಬೆಳೆದ ಬೆಳೆಯ ಬಗೆಗೆ ಎಷ್ಟು ಆಸ್ಥೆಯಿಂದ ಮಾತನಾಡಬಲ್ಲರೋ ಒಬ್ಬ ಮಂತ್ರಿಯೊಡನೆಯೂ ರಾಜ್ಯತಂತ್ರದ ಬಗೆಗೆ ಅಷ್ಟೇ ಆಸಕ್ತಿಯಿಂದ ಮಾತನಾಡಬಲ್ಲವರಾಗಿದ್ದರು. ಇದು ಡಿ.ವಿ.ಜಿ. ಅವರ ಜೀವನವನ್ನು ನೇರವಾಗಿ ಬಲ್ಲ ಹತ್ತಿರದವರ ಮಾತುಗಳಿಂದಲೂ ಅವರೇ ಬರೆದ ‘ಜ್ಞಾಪಕಚಿತ್ರಶಾಲೆ’ಯ ಸಂಪುಟಗಳಿಂದಲೂ ಸಿದ್ಧವಾಗುವ ಸತ್ಯ.
ಅವರ ಗಟ್ಟಿಯಾದ ನಂಬಿಕೆ ಇದು - ಜಗತ್ತು ಪರಮಾತ್ಮನಿಂದ ಆವೃತವಾದುದು; ಅದು ಬ್ರಹ್ಮಪತ್ತನ. ತಾನಾದರೋ ಈ ಬ್ರಹ್ಮಪತ್ತನದ ಒರ್ವ ಭಿಕ್ಷುಕ. ಇಲ್ಲಿ ಮಾಡಿದ್ದೆಲ್ಲ ಪೂಜೆ, ಪಡೆದದ್ದೆಲ್ಲ ಪ್ರಸಾದ. ಹೀಗಾಗಿಯೇ ಅವರು ಸದ್ಯೋವಿದ್ಯಮಾನಗಳ ವರದಿಗಳನ್ನು ಪತ್ರಿಕೆಗಳಲ್ಲಿ ಬರೆಯುವಷ್ಟೇ ಕಾಳಜಿ, ಕಳಕಳಿಗಳಿಂದ ‘ಅಂತಃಪುರಗೀತ’ಗಳನ್ನೂ ‘ಶೃಂಗಾರಮಂಗಳ’ವನ್ನೂ ರಚಿಸಿದರು. ಇಂಥ ದೃಷ್ಟಿಕೋನವನ್ನು ಹೊಂದಿದ್ದ ಡಿ.ವಿ.ಜಿ. ಜೀವನವನ್ನು ಅದರ ಎಲ್ಲ ಕಟುತೆ-ಕಠೋರತೆಗಳೊಡನೆ, ಮಾರ್ದವ-ಮಾಧುರ್ಯಗಳೊಡನೆ ಸಮನಾಗಿ ಸ್ವೀಕರಿಸಿದ್ದರು, ಪ್ರೀತಿಸಿದ್ದರು. ಹೀಗಾಗಿಯೇ ತಮ್ಮ ಜೀವಿತಸಂದೇಶವೆಂದು ಅವರು ಭಾವಿಸಿದ್ದ ‘ಬಾಳಿಗೊಂದು ನಂಬಿಕೆ’ಯಲ್ಲಿ, “ಜೀವನಸಮೃದ್ಧಿ, ಜೀವನಸಂಸ್ಕಾರ, ಜೀವನಸೌಂದರ್ಯ - ಇದು ಬರಿಯ ಐಹಿಕಾಸಕ್ತಿಯಲ್ಲ, ಚಾರ್ವಾಕತನವಲ್ಲ, ಭೋಗನಿಷ್ಠೆಯಲ್ಲ. ಅದು ವೇದ-ವೇದಾಂತಗಳ ಸಾರಾಂಶ” (ಡಿ.ವಿ.ಜಿ. ಕೃತಿಶ್ರೇಣಿ, ಸಂ. ೧, ಪು. ೫೦೪) ಎಂದು ಧೀರತೆಯಿಂದ ಉದ್ಘೋಷಿಸಿದರು.
ಅವರ ಆದರ್ಶ ವನಸುಮ. ‘ಜಗಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ’ ಬಾಳಿದವರವರು. ತಮ್ಮ ಮಟ್ಟಿಗೆ ವ್ಯವಸಾಯಾತ್ಮಿಕ ಬುದ್ಧಿಯನ್ನು ಸಂಪಾದಿಸಿಕೊಂಡು ಸಾಮಾನ್ಯಜನರಲ್ಲಿ ಬುದ್ಧಿಭೇದವನ್ನು ಉಂಟುಮಾಡದ ಉದಾರಿಗಳವರು. ಇಂಥವರು ರಚಿಸಿದ ವ್ಯಾಖ್ಯಾನವಾದ ಕಾರಣ ‘ಜೀವನಧರ್ಮಯೋಗ’ಕ್ಕೆ ಎಲ್ಲಿಲ್ಲದ ಕಾಂತಿ ಬಂದಿದೆ.
ಇದಲ್ಲದೆ ಅವರಿಗಿದ್ದ ಪೌರಸ್ತ್ಯ-ಪಾಶ್ಚಾತ್ತ್ಯ ಪ್ರಪಂಚಗಳ ಬಹುವಿಧ ಶಾಸ್ತ್ರ-ಕಾವ್ಯಗಳ ಅಧ್ಯಯನ; ಹಲವು ಬಗೆಯ ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಪ್ರಕಲ್ಪಗಳಲ್ಲಿ ವೈಯಕ್ತಿಕವಾಗಿ, ಸಾಂಸ್ಥಿಕವಾಗಿ ದುಡಿದ ಅನುಭವ; ಸಾಂಪ್ರದಾಯಿಕತೆ ಹಾಗೂ ಆಧುನಿಕತೆಗಳ ಪರಿಜ್ಞಾನ ಮತ್ತು ಸರ್ವತ್ರ ಸಮನ್ವಯವನ್ನು ಕಾಣಲೆಳಸುವ ಉದಾತ್ತ ದೃಷ್ಟಿ ಗೀತಾವ್ಯಾಖ್ಯಾನಕ್ಕೆ ಬೇಕಾದ ಅಧಿಕಾರವನ್ನು ದೊರಕಿಸಿಕೊಟ್ಟಿದ್ದವು.
ನಮ್ಮ ಪರಂಪರೆಯು ಗೀತೆಯನ್ನು ಸಾಧನಶಾಸ್ತ್ರವಾಗಿ ಪರಿಗಣಿಸಿದೆ, ಆದರಿಸಿದೆ. ಅಂತೆಯೇ ಇದು ಪ್ರಧಾನವಾಗಿ ‘ಕ್ರಿಯಾಪಾದ’ ಎಂದೂ ‘ತರ್ಕಪಾದ’ ಅಲ್ಲವೆಂದೂ ಪರಂಪರೆಯ ವಿಶ್ವಾಸವಿದೆ. ಡಿ.ವಿ.ಜಿ. ಅವರು ಈ ಪರಿಕಲ್ಪನೆಗಳ ಅರ್ಥವಂತಿಕೆಯನ್ನು ಅರಿತಿದ್ದರು. ಸಾಧನಶಾಸ್ತ್ರವಾಗಿ, ಕ್ರಿಯಾಪಾದವಾಗಿ ಗೀತೆಯ ಉಪದೇಶವನ್ನು ಸರಿಯಾಗಿ ಗ್ರಹಿಸಲು ಬೇಕಾದ ಎಲ್ಲ ಗುಣಗಳೂ ಅವರಲ್ಲಿದ್ದವು. ರಾಜ್ಯತಂತ್ರದ ತತ್ತ್ವ ಮತ್ತು ಪ್ರಯೋಗಗಳ ನೇರವಾದ ಅನುಭವ, ವಿವಿಧ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ ಅನುಭವ, ಹತ್ತಾರು ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳಸಿದ ಅನುಭವ - ಈ ದಿಶೆಯಲ್ಲಿ ಮುಖ್ಯವೆನ್ನಬೇಕು. ಡಿ.ವಿ.ಜಿ. ಈ ಎಲ್ಲ ರಂಗಗಳಲ್ಲಿ ಲೌಕಿಕ ಹಿತಾಸಕ್ತಿಗಳನ್ನು ಅರಸದೆ ಧರ್ಮದೃಷ್ಟಿಯನ್ನು ಇರಿಸಿಕೊಂಡಿದ್ದ ಕಾರಣ ಇವು ಅವರಿಗೆ ವಿಶಿಷ್ಟವಾದ ಸಂಸ್ಕಾರ ನೀಡಲು ಸಾಧ್ಯವಾಯಿತು. ಶ್ರೀಕೃಷ್ಣನ ಜೀವನದಿಂದ ಸ್ಫೂರ್ತಿಪಡೆದ ಡಿ.ವಿ.ಜಿ. ಭ್ರಾಮಕ ಆದರ್ಶಗಳಲ್ಲಿ ಕಳೆದುಹೋಗದೆ ಸರ್ವದಾ ಸಾಧ್ಯಚಿಂತಕರಾಗಿ ದುಡಿದರು. ಅವರ ದೃಷ್ಟಿ ಕ್ರಿಯಾನ್ವಯದಲ್ಲಿ ಕೀಲಿಸಿತ್ತು - ‘ರಾಮಣೀಯಕವೆಂದು ಬಿಸುಸುಯ್ಯಲದು ಕವಿತೆ; ಭೂಮಿಗದನೆಟುಕಿಸುವೆನೆಂಬೆಸಕ ರಾಜ್ಯಕತೆ.’ ಆದುದರಿಂದಲೇ ರಾಷ್ಟ್ರಕನಿಗೆ ಪ್ರಾಪ್ತವ್ಯಗಳಿಗಿಂತ ಕರ್ತವ್ಯಗಳ ಮೇಲೆ ಹೆಚ್ಚು ಗಮನವಿರಬೇಕೆಂದು ಅವರು ಸಾರಿದರು. ಅರ್ಥ-ಕಾಮಗಳ ಮೇಲಾಟವಿರುವ ವ್ಯವಹಾರಪ್ರಪಂಚದ ಪರಿನಿಷ್ಠಿತ ಜ್ಞಾನವನ್ನು ಪಡೆದು, ಅಲ್ಲಿ ಆರ್ತರೂ ಅರ್ಥಾರ್ಥಿಗಳೂ ಹೇಗೆಲ್ಲ ವರ್ತಿಸುತ್ತಾರೆಂದು ತಿಳಿದವರಾದ ಕಾರಣ, ಡಿ.ವಿ.ಜಿ. ಅವರಿಗೆ ಇಂಥ ‘ವೆಸನಮಯ ಸಂಸಾರದಲಿ ವಿನೋದವ ಕಾಣ್ಬ ರಸಿಕತೆಯೆ ಯೋಗ’ ಎಂದು ಬೋಧಿಸುವ ಭಗವದ್ಗೀತೆಯ ಬಗೆಗೆ ಅಪಾರ ಆದರವಿದ್ದಿತು. ಗೀತೆಯನ್ನು ವ್ಯಾಖ್ಯಾನಿಸಿದ ಅನೇಕರಲ್ಲಿ ಕಂಡುಬಾರದ ಈ ಗುಣವಿಶೇಷಗಳೇ ಡಿ.ವಿ.ಜಿ. ಅವರ ವಿವರಣೆಯನ್ನು ಅಮೂಲ್ಯವಾಗಿಸಿವೆ.
ಇಷ್ಟೇ ಅಲ್ಲದೆ ಗೀತೆಯ ತತ್ತ್ವಗಳನ್ನು ದಶಕಗಳುದ್ದಕ್ಕೂ ಅವರು ಮನನ ಮಾಡಿದ್ದರು. ವಿದ್ಯಾನಿಧಿ ಹಾನಗಲ್ಲು ವಿರೂಪಾಕ್ಷಶಾಸ್ತ್ರೀ ಅವರಲ್ಲಿ ಭಾಷ್ಯಪಾಠ ಮಾಡಿದ ಬಳಿಕ ತಾವೇ ಸ್ವತಂತ್ರವಾಗಿ ಹಲವಾರು ಪಾರಂಪರಿಕ ಹಾಗೂ ಆಧುನಿಕ ವಿವೃತಿಗಳನ್ನು ಅಭ್ಯಸಿಸಿ, ಪ್ರಾಜ್ಞರಾದ ವಿದ್ವದ್ರಸಿಕರೊಡನೆ ಚರ್ಚಿಸಿ, ಬಗೆಬಗೆಯ ಜೀವನಸಂದರ್ಭಗಳು ಎದುರಾದಾಗ ಆ ಉಪದೇಶಗಳನ್ನು ಅನ್ವಯಿಸಿ, ವಿಚಾರದ ಒರೆಗೆ ಹಚ್ಚಿ, ಗಂಟುಗಳನ್ನು ಬಿಡಿಸಿಕೊಂಡು ಅವುಗಳ ಆಂತರ್ಯವನ್ನು ಅರಿತಿದ್ದರು. ತಮಗೆ ಮೊದಮೊದಲು ಗೀತೆಯ ತತ್ತ್ವ ತಿಳಿದಿದೆ ಎನಿಸಿದ್ದರೂ ಕಾಲ ಕಳೆದಂತೆ ಅದನ್ನು ಜೀವನಕ್ಕೆ ಅನ್ವಯಿಸುವಲ್ಲಿ ಎದುರಾಗುವ ತೊಡಕುಗಳನ್ನು ಅನುಭವಿಸಿ ಗ್ರಂಥವನ್ನು ಮುಟ್ಟಲೂ ಬೆದರುವ ಹಂತಕ್ಕೆ ಬಂದಿದ್ದರು - “Once upon a time I could flatter myself on my familiarity with the Bhagavad Gita. But now I dread to touch it” (ವಿರಕ್ತ ರಾಷ್ಟ್ರಕ ಡಿವಿಜಿ, ಪು. ೧೧೭). ಇದು ಅನುಷ್ಠಾನಪರವಾದ ಅವರ ದೃಷ್ಟಿಯನ್ನು ಎತ್ತಿತೋರಿಸಿ ಗೀತಾವ್ಯಾಖ್ಯಾನಕ್ಕೆ ಅವರಿಗಿದ್ದ ಅಧಿಕಾರವನ್ನೇ ಪರ್ಯಾಯವಾಗಿ ಪುಷ್ಟೀಕರಿಸಿದೆ.
ಅವರು ಹೀಗೆ ಅನುಷ್ಠಾನಕ್ಕೆ ಮಿಗಿಲಾದ ಬೆಲೆ ಕೊಟ್ಟದ್ದರಿಂದಲೇ ತಮ್ಮ ವ್ಯಾಖ್ಯಾನವನ್ನು ಸ್ವಕರ್ಮದಲ್ಲಿಯೇ ಕೈವಲ್ಯವನ್ನು ಕಂಡ ಇಬ್ಬರು ಹೆಣ್ಣುಮಕ್ಕಳಿಗೆ ಅರ್ಪಿಸಿದ್ದಾರೆ - “ಬಾಲ್ಯದಲ್ಲಿಯೇ ಒದಗಿದ ವೈಧವ್ಯದುಃಖಕ್ಕೆ ಅದು ದೈವವ್ಯವಸ್ಥೆಯೆಂದುಕೊಂಡು ತಲೆಬಾಗಿ ಭಗವದ್ಭಕ್ತಿ ಸದಾಚಾರಶ್ರದ್ಧೆಗಳ ದೃಢಬಲದಿಂದ ಎಲ್ಲ ಕಷ್ಟಗಳನ್ನೂ ಸಹಿಸಿ ವೃದ್ಧಶುಶ್ರೂಷೆ ಅನಾಥಶಿಶುಪೋಷಣೆ ದೀನದುರ್ಬಲಪರಿಚರ್ಯೆ ಮೊದಲಾದ ಸತ್ಕಾರ್ಯಗಳಲ್ಲಿ ಆಯುಷ್ಯವನ್ನು ತೆಯ್ದು ನಮ್ಮ ಪಾಲಿಗೆ ಪುಣ್ಯಸ್ಮರಣೆಯನ್ನು ಇಟ್ಟು ಹೋಗಿರುವ ನನ್ನ ತಂಗಿ ಲಕ್ಷ್ಮೀದೇವಮ್ಮ, ನನ್ನ ಷಡ್ಡಕ-ಅಣ್ಣಂದಿರ ಮಗಳು ಕುಟ್ಟ್ಯಮ್ಮ ಅಂಥವರ ಸಾಧುಜೀವನದ ಆದರ್ಶಕ್ಕೆ ಇದು ಅಂಕಿತ”. ಇದು ಕನ್ನಡದ ಕೃತಿಸಮರ್ಪಣಸಾಹಿತ್ಯದ ಅತ್ಯಂತ ಭಾವಾರ್ದ್ರವಾದ ಸಾಲುಗಳಲ್ಲಿ ಸೇರುತ್ತದೆ.
ಕರ್ಮಕ್ಕೆ ಸಂಬಂಧಿಸಿದ ಒಂದು ವಿಚಾರವನ್ನು ಇಲ್ಲಿಯೇ ಗಮನಿಸಬಹುದು. ಶ್ರೀಕೃಷ್ಣನು ‘ಕರ್ಮ’ ಎಂಬ ಶಬ್ದವನ್ನು ವಿಶಾಲವಾದ ಅರ್ಥದಲ್ಲಿ ಬಳಸಿದ್ದರೂ ಅನ್ಯಾನ್ಯ ಕಾರಣಗಳಿಂದ ಸಾಂಪ್ರದಾಯಿಕ ಭಾಷ್ಯಗಳಲ್ಲಿ ಇದಕ್ಕೆ ಹೆಚ್ಚಾಗಿ ಶ್ರೌತ, ಸ್ಮಾರ್ತ ಅನುಷ್ಠಾನವೆಂಬ ಸಂಕುಚಿತ ಅರ್ಥ ಏರ್ಪಟ್ಟಿತು. ಆಧುನಿಕ ಕಾಲದಲ್ಲಿ - ಪ್ರಾಯಶಃ ಸ್ವಾಮಿ ವಿವೇಕಾನಂದರ ಕಾಲದಿಂದೀಚೆಗೆ - ಕರ್ಮತತ್ತ್ವವನ್ನು ಮತ್ತೆ ಕೃಷ್ಣನಿಗೆ ಸಮ್ಮತವಾದ ವ್ಯಾಪಕ ಭೂಮಿಕೆಯಲ್ಲಿ ಅರ್ಥೈಸುವುದಾಯಿತು. ಡಿ.ವಿ.ಜಿ. ಅವರು ಪ್ರಕೃತದಲ್ಲಿ ಇಂಥ ವ್ಯಾಪಕ ಅರ್ಥಕ್ರಮವನ್ನೇ ಆಧರಿಸಿದ್ದಾರೆ.
To be continued.